ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥನ ಮಗನನ್ನು ಬಂಧಿಸಿದ ಎನ್ ಐಎ
ಶ್ರೀನಗರ್, ಆಗಸ್ಟ್ 30: ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಕಮ್ಯಾಂಡರ್ ಸೈಯದ್ ಸಲಾಹುದ್ದೀನ್ ನ ಮಗನನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಗುರುವಾರ ಶ್ರೀನಗರ್ ನಲ್ಲಿ ಬಂಧಿಸಿದೆ. ಸೈಯದ್ ಶಕೀಲ್ ಯುಸೂಫ್ ಬಂಧಿತ. 2011ರಲ್ಲಿ ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸಿದ ಆರೋಪ ಆತನ ಮೇಲಿತ್ತು.
ಶ್ರೀನಗರ್ ನ ರಾಮ್ ಬಾಗ್ ಪ್ರದೇಶದಲ್ಲಿ ಸೈಯದ್ ಶಕೀಲ್ ಯುಸೂಫ್ ನನ್ನು ಬಂಧಿಸಲಾಗಿದೆ. ಷೇರ್-ಇ-ಕಾಶ್ಮೀರ್ ಎಂಬ ಪ್ರತಿಷ್ಠಿತ ಸರಕಾರಿ ಆಸ್ಪತ್ರೆಯಲ್ಲಿ ಶಕೀಲ್ ಲ್ಯಾಬೊರೇಟರಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಾನೆ. ಜಾಗತಿಕ ಭಯೋತ್ಪಾದಕ ಎಂದು ಗುರುತಿಸಲಾದ ಆತನ ತಂದೆಯಿಂದ ಹಣ ಪಡೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇನ್ನಷ್ಟು ಬಲವಾಗಲಿದೆ ಎನ್ಐಎ, ಎಫ್ಬಿಐನಷ್ಟು ಅಧಿಕಾರ!
ಪಾಕಿಸ್ತಾನದಿಂದ ಜಮ್ಮು-ಕಾಶ್ಮೀರಕ್ಕೆ ದೆಹಲಿಯ ಮೂಲಕ ಕಾನೂನು ಬಾಹಿರ ಮಾರ್ಗವಾಗಿ ಹಣ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು 2011ರಲ್ಲಿ ಪ್ರಕರಣ ದಾಖಲಿಸಿತ್ತು. ತನಿಖಾ ತಂಡದ ಪ್ರಕಾರ, ಈ ಹಣವನ್ನು ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸಲು ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಬಳಸಲಾಗಿತ್ತು.
ಎರಡನೇ ಮಗನನ್ನು ಜೂನ್ ನಲ್ಲಿ ಬಂಧಿಸಿತ್ತು
ಸಿಆರ್ ಪಿಎಫ್, ಸ್ಥಳೀಯ ಪೊಲೀಸರ ನೆರವಿನೊಂದಿಗೆ ರಾಷ್ಟ್ರೀಯ ತನಿಖಾ ದಳವು ಸೈಯದ್ ಸಲಾಹುದ್ದೀನ್ ನ ಎರಡನೇ ಮಗ ಶಕೀಲ್ ನನ್ನು ಬಂಧಿಸಿದೆ. ಮತ್ತೊಬ್ಬ ಮಗ- ಹಿಜ್ಲುಲ್ ಮುಖ್ಯಸ್ಥ ಸೈಯದ್ ಶಾಹೀದ್ ಯುಸೂಫ್ ನನ್ನು ಜೂನ್ ನಲ್ಲಿ ಬಂಧಿಸಲಾಗಿತ್ತು. ಆತನನ್ನು ಬಂಧಿಸುವಾಗ ಜಮ್ಮು ಮತ್ತು ಕಾಶ್ಮೀರದ ಕೃಷಿ ಇಲಾಖೆಯಲ್ಲಿ ಆತ ಕೆಲಸ ಮಾಡುತ್ತಿದ್ದ. ಆ ನಂತರ ಅವನನ್ನು ಅಮಾನತು ಮಾಡಲಾಗಿತ್ತು. ಅಮೆರಿಕ ಮೂಲದ ಅಂತರರಾಷ್ಟ್ರೀಯ ಕಂಪೆನಿ ಮೂಲಕ ಶಕೀಲ್ ಖಾತೆಗೆ ಐಜಾಜ್ ಅಹ್ಮದ್ ಎಂಬಾತ ಹಣ ಜಮೆ ಮಾಡಿದ್ದಾನೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತ ಸೌದಿ ಅರೇಬಿಯಾದಲ್ಲಿ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದೆ ರಾಷ್ಟ್ರೀಯ ತನಿಖಾ ದಳ. ಭಾರತದಲ್ಲಿ ಐಜಾಜ್ ಭಟ್ ಗೆ ಹಲವರ ಜತೆ ಸಂಪರ್ಕ ಇದ್ದು, ಅದರಲ್ಲಿ ಶಕೀಲ್ ಕೂಡ ಒಬ್ಬ.
ನಾಲ್ವರು ನ್ಯಾಯಾಂಗ ಬಂಧನದಲ್ಲಿದ್ದಾರೆ
ದೂರವಾಣಿ ಮೂಲಕ ಸಂಕೇತಗಳನ್ನು ಬಳಸಿ ಹಣ ಪಡೆಯಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರೆಗೆ ಎನ್ ಐಎನಿಂದ ಆರು ಮಂದಿ ವಿರುದ್ಧ ದೂರು ದಾಖಲಾಗಿದೆ. ಅದರಲ್ಲಿ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗೀಲಾನಿ ನಿಕಟವರ್ತಿ ಜಿ.ಎಂ.ಭಟ್, ಮೊಹ್ಮದ್ ಸಿದ್ದಿಕ್ ಗನೈ, ಗುಲಾಮ್ ಜಿಲಾನಿ ಲಿಲೂ ಮತ್ತು ಫಾರೂಕ್ ಅಹ್ಮದ್ ಡಗ್ಗಾ ಒಳಗೊಂಡಿದ್ದಾರೆ. ಈ ನಾಲ್ವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇಂಟರ್ ಪೋಲ್ ನಿಂದ ರೆಡ್ ಕಾರ್ನರ್ ನೋಟಿಸ್
ಇನ್ನಿಬ್ಬರು ಮೊಹ್ಮದ್ ಮಕ್ಬೂಲ್ ಪಂಡಿತ್ ಹಾಗೂ ಭಟ್ ವಿರುದ್ಧ ಕೂಡ ಚಾರ್ಜ್ ಶೀಟ್ ಹಾಕಲಾಗಿದ್ದು, ಅವರು ತಲೆ ತಪ್ಪಿಸಿಕೊಂಡಿದ್ದಾರೆ. ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಅಮೆರಿಕದಿಂದ ಸೈಯದ್ ಸಲಾಹುದ್ದೀನ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲಾಗಿದೆ. ಹಿಜ್ಬುಲ್ ಮುಜಾಹಿದೀನ್ ಹೊರತುಪಡಿಸಿ ಆತ ಯುನೈಟೆಡ್ ಜೆಹಾದ್ ಕೌನ್ಸಿಲ್ ನ ಮುಖ್ಯಸ್ಥನಾಗಿದ್ದಾನೆ.
ರಾಷ್ಟ್ರೀಯ ತನಿಖಾ ದಳದಿಂದ ಹತ್ತು ಮಂದಿಯ ಬಂಧನ
ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಇನ್ನೆರಡು ಪ್ರಕರಣ ದಾಖಲಿಸಿದೆ. ಅದರಲ್ಲಿ ಒಂದು, 2011ರ ನವೆಂಬರ್ ನಲ್ಲಿ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣವನ್ನು 2018ರ ಮೇ ತಿಂಗಳಲ್ಲಿ ದಾಖಲಿಸಲಾಗಿದೆ. ಈಗಾಗಲೇ ಎನ್ ಐಎ ಹತ್ತು ಮಂದಿ ವಿರುದ್ಧ ಚಾರ್ಜ್ ಶೀಟ್ ಹಾಕಿದೆ. ಅದರಲ್ಲಿ 2011ರ ಏಪ್ರಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಯದ್ ಸಲಾಹುದ್ದೀನ್ ಹೆಸರೂ ಒಳಗೊಂಡಿದೆ. ಈಚೆಗಿನ ಪ್ರಕರಣದಲ್ಲಿ ಗೀಲಾನಿ ಹತ್ತಿರದ ಸಂಬಂಧಿಗಳು ಹಾಗೂ ನಿಕಟವರ್ತಿಗಳು ಸೇರಿ ಹತ್ತು ಮಂದಿಯನ್ನು ಬಂಧಿಸಲಾಗಿತ್ತು.