IM ಭಯೋತ್ಪಾದನೆಗೆ ಹಿಂದೂ ಯುವಕರೇ ಟಾರ್ಗೆಟ್!
ಪಾಟ್ನಾ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬಿಹಾರದ ಲಖೀಸರೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಮಂಗಳೂರಿನ ಆಯೇಷಾ ಬಾನು ಸೇರಿದಂತೆ ಬಿಹಾರದ ಹಲವರ ಹೆಸರನ್ನು ಸೇರಿಸಿದ್ದಾರೆ.
ಈಕೆ ಸ್ಫೋಟದಲ್ಲಿ ನೇರವಾಗಿ ಭಾಗಿಯಾಗದೇ ಇದ್ದರೂ, ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಗೆ ಅಗತ್ಯವಾದ ಹಣ ಪೂರೈಕೆ ಜಾಲದ ಪ್ರಮುಖ ಕೊಂಡಿಯಾಗಿದ್ದಳು ಎಂಬ ಮಹತ್ವದ ಮಾಹಿತಿಯನ್ನು ಗುಪ್ತಚರ ಇಲಾಖೆ ಕಲೆಹಾಕಿದೆ.
ಪ್ರಕರಣದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ವಿಷಯ ಇಷ್ಟೇ ಅಲ್ಲ. ಭಾರತದಲ್ಲಿ ಉಗ್ರವಾದಿ ಚಟುವಟಿಕೆಗಳನ್ನು ನಡೆಸುತ್ತಿರುವ ಇಂಡಿಯನ್ ಮುಜಾಹಿದೀನ್ ಸಂಘಟನೆ, ಹಿಂದೂ ಯುವಕರನ್ನು ತನ್ನ ಸಂಘಟನೆಗೆ ಸೇರಿಸಿಕೊಳ್ಳುವ ಮೂಲಕ ಹೊಸ ಕಾರ್ಯತಂತ್ರ ರೂಪಿಸಿದಂತಿದೆ.
ಏಕೆಂದರೆ ಪಾಟ್ನಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಗೋಪಾಲ ಕುಮಾರ್ ಗೋಯೆಲ್, ವಿಕಾಸ್ ಕುಮಾರ್, ಪವನ್ ಕುಮಾರ್ ಮತ್ತು ಗಣೇಶ್ ಪ್ರಸಾದ್ ಎಂಬ ನಾಲ್ಕು ಹಿಂದೂ ಯುವಕರನ್ನು ಬಂಧಿಸಿದೆ. ಜತೆಗೆ ಇಬ್ರಾಹಿಂ, ಅನ್ಸಾರಿ, ಖಾನ್, ಪಪ್ಪು, ಸೇಠ್ ಹಾಗೂ ಮೌಲ್ವಿ ಸಾಹಬ್ ವಿರುದ್ಧವೂ ಎಫ್ ಐಆರ್ ದಾಖಲಿಸಲಾಗಿದೆ.
ಇಂಡಿಯನ್ ಮುಜಾಹಿದೀನ್ ಜತೆ ಹಿಂದೂ ಯುವಕರು ನಂಟು ಹೊಂದಿದ್ದ ಮೊದಲ ಪ್ರಕರಣ ಇದಾಗಿದೆ. ಹೀಗಾಗಿಯೇ ಪೊಲೀಸರು ಈ ನಾಲ್ವರ ಬಂಧನ ವಿಚಾರವನ್ನು ಮೈಕ್ರೋಸ್ಕೋಪ್ ಮೂಲಕ ಬೇರೆಯದೇ ಆಯಾಮದಿಂದ ನೋಡತೊಡಗಿದ್ದಾರೆ.
NIA ಪೊಲೀಸರಿಗೆ ಈ ಬಂಧನಗಳು ಹೊಸ ಗ್ರಾಸವನ್ನು ಒದಗಿಸಿದ್ದು, ಸದ್ಯದಲ್ಲೇ ಮಂಗಳೂರು ಸೇರಿದಂತೆ ಇತರೆ ಭಾಗಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.