ಅನಾರೋಗ್ಯ ಪೀಡಿತ ಮುಸ್ಲಿಂ ಡ್ರೈವರ್ ಗಾಗಿ 'ರೋಜಾ' ಆಚರಿಸುತ್ತಿರುವ ಹಿಂದೂ!
ಮಾನವೀಯತೆಗೆ ಯಾವುದೇ ಜಾತಿಯ ಹಂಗಿರುವುದಿಲ್ಲ, ಕುಲ ಕುಲ ಕುಲವೆಂಬು ಮಾನವೀಯತೆ ಬಡಿದಾಡುವುದೂ ಇಲ್ಲ, ಮಾನವೀಯತೆಗೆ ಹಿಂದೂ, ಮುಸ್ಲಿಂ ಎಂಬ ಭೇದಭಾವವೂ ಇರುವುದಿಲ್ಲ ಎಂಬುದಕ್ಕೆ ಮಹಾರಾಷ್ಟ್ರದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.
ಅನಾರೋಗ್ಯದಿಂದಾಗಿ ಉಪವಾಸ ಮಾಡಲು ಸಾಧ್ಯವಿರದ ತನ್ನ ಕಾರಿನ ಡ್ರೈವರ್ ಅವರ ಬದಲಾಗಿ, ಕಾರಿನ ಮಾಲಿಕರೇ ರೋಜಾ ಆಚರಿಸಿದ ಅಪರೂಪದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಡ್ರೈವರ್ ಬದಲಾಗಿ ರೋಜಾ ಆಚರಿಸಿದವರು ವಿಭಾಗೀಯ ಅರಣ್ಯಾಧಿಕಾರಿ ಆಗಿರುವ ಸಂಜಯ್ ಎಸ್ ಮಾಲಿ ಎಂಬುವವರು.
ಮೈಸೂರಿನಲ್ಲಿ ರಂಜಾನ್ ಮಾಸಾಚರಣೆ ಆರಂಭ;ತಯಾರಿ ಹೇಗಿದೆ ಗೊತ್ತಾ?
ಮಾಲಿ ಅವರು ಮೇ 6ರಂದೇ ತಮ್ಮ ಕಾರಿನ ಡ್ರೈವರ್ ಗೆ ರೋಜಾ ಮಾಡುತ್ತಿದ್ದಿಯಾ ಎಂದು ಕೇಳಿದ್ದಾರೆ. ಅನಾರೋಗ್ಯದಿಂದಾಗಿ ಸಾಧ್ಯವಾಗುತ್ತಿಲ್ಲ, ಉಪವಾಸವಿದ್ದರೆ ಸರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಡ್ರೈವರ್ ಹೇಳುತ್ತಿದ್ದಂತೆ, ಸ್ವಲ್ಪ ಹೊತ್ತು ವಿಚಾರ ಮಾಡಿದ ಸಂಜಯ್ ಮಾಲಿ ಅವರು ತಾವೇ ಸ್ವತಃ ರೋಜಾ ಆಚರಿಸಲು ನಿರ್ಧರಿಸಿದ್ದಾರೆ.
ಅಂದಿನಿಂದಲೇ ಸಂಜಯ್ ಮಾಲಿ ಅವರು ಡ್ರೈವರ್ ಗಾಗಿ ರೋಜಾ ಆಚರಿಸಲು ಪ್ರಾರಂಭಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು, ಫಲಾಹಾರ ಸೇವಿಸಿ, ಇಡೀ ದಿನ ಉಪವಾಸವಿದ್ದು, ಮುಸ್ಲಿಂ ಸಂಪ್ರದಾಯದಂತೆ ಸಂಜೆ 7 ಗಂಟೆಯ ನಂತರವೇ ಉಪವಾಸ ಮುರಿಯುತ್ತಿರುವುದಾಗಿ ಅವರು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ರಂಜಾನ್: ಮೈಸೂರಿನಲ್ಲಿ ಬಿಸಿ ಬಿಸಿ ಸಮೋಸ, ಖರ್ಜೂರಕ್ಕೆ ಭಾರೀ ಬೇಡಿಕೆ
ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಎಲ್ಲರೂ ರಂಜಾನ್ ಸಮಯದಲ್ಲಿ ಈ ಪದ್ಧತಿಯನ್ನು ಪಾಲಿಸಬೇಕು. ಇದರಿಂದ ಮನಸ್ಸು ಮತ್ತು ದೇಹಗಳೆರಡೂ ಆರೋಗ್ಯಕರವಾಗಿರುತ್ತವೆ ಎಂದು ಸಂಜಯ್ ಮಾಲಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರತಿಯೊಂದು ಧರ್ಮವೂ ಏನೋ ಒಳ್ಳೆಯದನ್ನು ಕಲಿಸುತ್ತದೆ. ನಾವೆಲ್ಲ ಕೋಮು ಸೌಹಾರ್ದತೆಯನ್ನು ಪಸರಿಸುವಂತೆ ಮಾಡಬೇಕು. ನಾವು ಮೊದಲು ಎಲ್ಲವನ್ನೂ ಮಾನವೀಯತೆಯ ದೃಷ್ಟಿಯಿಂದ ನೋಡಬೇಕು, ಧರ್ಮ ನಂತರ. ಪ್ರತಿದಿನ ರೋಜಾ ಆಚರಿಸುತ್ತಿರುವುದರಿಂದ ನಾನು ಪ್ರತಿದಿನ ಉಲ್ಲಾಸಭರಿತನಾಗಿದ್ದೇನೆ ಎಂದು ಮಾಲಿ ಅವರು ಸಂತಸದಿಂದ ನುಡಿದಿದ್ದಾರೆ.
ಕರಾವಳಿಯಲ್ಲಿ ಸೋಮವಾರದಿಂದ ರಂಜಾನ್ ಉಪವಾಸ:ದಕ್ಷಿಣ ಕನ್ನಡ ಖಾಝಿ ಘೋಷಣೆ
ರಂಜಾನ್ ನಲ್ಲಿ ಬೆಳಿಗ್ಗೆ ಸೂರ್ಯೋದಯಕ್ಕೂ ಮೊದಲೇ 'ಸೆಹರಿ' (ಪರ್ಶಿಯನ್ ಪದ) ಸೇವಿಸುವ ಮೂಲಕ ರೋಜಾ ಆರಂಭವಾಗುತ್ತದೆ. ಇದಾದ ನಂತರ ಸೂರ್ಯೋದಯಕ್ಕೂ ಮೊದಲೇ ಫಜಾರ್ ಪ್ರಾರ್ಥನೆ ಮಾಡಲಾಗುತ್ತದೆ. ನಂತರ ಇಡೀದಿನ ಆಹಾರ ಮತ್ತು ನೀರನ್ನು ಸೇವಿಸುವಂತಿಲ್ಲ. ಸಂಜೆ ಸೂರ್ಯಾಸ್ತವಾದ ನಂತರ ರೋಜಾ ಆಚರಿಸಿದವರೆಲ್ಲ ಸೇರಿ 'ಇಫ್ತಾರ್' ಸೇವಿಸುತ್ತಾರೆ.
ರಂಜಾನ್ ತಿಂಗಳು ಮೇ 5ರಂದು ಆರಂಭವಾಗಿದ್ದು, ಒಂದು ತಿಂಗಳ ರೋಜಾ (ಉಪವಾಸ) ಆಚರಣೆಯ ನಂತರ ಜೂನ್ ತಿಂಗಳ ಮೊದಲ ವಾರದಲ್ಲಿ ರಂಜಾನ್ ಅಥವಾ ರಮಾದಾನ್ ಹಬ್ಬ ಆಚರಿಸಲಾಗುತ್ತದೆ.