ಶಬರಿಮಲೆ ದೇವಸ್ಥಾನ ವಿವಾದ: ಜುಲೈ 30ರಂದು ಕೇರಳದಲ್ಲಿ ಪ್ರತಿಭಟನೆ
ತಿರುವನಂತಪುರ, ಜುಲೈ 25: ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವ ವಿವಾದ ಕೇರಳದಲ್ಲಿ ಮತ್ತೆ ಭುಗಿಲೆದ್ದಿದೆ.
ದೇವಸ್ಥಾನವು ಸಾರ್ವಜನಿಕ ಆಸ್ತಿ. ಅಲ್ಲಿ ಪ್ರವೇಶಿಸಲು ಪುರುಷರಷ್ಟೇ ಮಹಿಳೆಯರಿಗೂ ಸಮಾನ ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟ ಬೆನ್ನಲ್ಲೇ, ಅಲ್ಲಿನ ಹಿಂದೂಪರ ಸಂಘಟನೆಗಳಲ್ಲಿ ಅಸಮಾಧಾನ ಮೂಡಿದೆ.
ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವಂತಿಲ್ಲ
ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರಿಗೆ ಪ್ರವೇಶ ನೀಡುವುದನ್ನು ಬೆಂಬಲಿಸುವ ಕೇರಳ ಸರ್ಕಾರದ ನಿರ್ಧಾರ ವಿರೋಧಿಸಿ ವಿವಿಧ ಸಂಘಟನೆಗಳು ಜುಲೈ 30ರಂದು ರಾಜ್ಯದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕರೆ ನೀಡಿವೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅಯ್ಯಪ್ಪ ಧರ್ಮ ಸೇನಾ, ಶ್ರೀರಾಮ ಸೇನಾ, ಹನುಮಾನ್ ಸೇನಾ ಮತ್ತು ವಿಶ್ವಕರ್ಮ ಐಕ್ಯ ವೇದಿ ಈ ನಿರ್ಧಾರವನ್ನು ಪ್ರಕಟಿಸಿವೆ.
ಈ ವಿವಾದ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದ್ದು, ಇತ್ತೀಚೆಗೆ ನಡೆದ ವಿಚಾರಣೆ ವೇಳೆ ಮಹಿಳೆಯರಿಗೆ ದೇವಸ್ಥಾನದೊಳಗೆ ಪ್ರವೇಶ ಕಲ್ಪಿಸುವುದರ ಪರವಾಗಿ ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಅದರ ಕುರಿತಾದ ಅಂತಿಮ ತೀರ್ಪು ಇನ್ನೂ ಹೊರಬಂದಿಲ್ಲ.
ಶಬರಿಮಲೆಗೆ ಬರುವ ಪುರುಷ ಭಕ್ತರ ಪರಿಶುದ್ಧತೆಗೆ ಪರೀಕ್ಷಿಸಿ: ಟ್ವಿಂಕಲ್
ಒಂದು ವೇಳೆ ಸುಪ್ರೀಂಕೋರ್ಟ್ ಮಹಿಳೆಯರ ಪರವಾಗಿ ತೀರ್ಪು ನೀಡಿದರೆ, ಶಬರಿಮಲೆ ದೇವಸ್ಥಾನದ ಮೂಲ ನೆಲೆಯಾದ ಪಂಬವನ್ನು ದಾಟಿ ಮುಂದೆ ಹೋಗದಂತೆ ಮಹಿಳಾ ಭಕ್ತರನ್ನು ತಡೆಯುವುದಾಗಿ ಹಿಂದೂ ಸಂಘಟನೆಗಳು ಬೆದರಿಕೆ ಒಡ್ಡಿವೆ.
ರಾಜ್ಯ ಸರ್ಕಾರವು ಸಹ ಮಹಿಳೆಯರ ಪರವಾಗಿ ಇರುವುದಾಗಿ ಸುಪ್ರೀಂಕೋರ್ಟ್ಗೆ ತಿಳಿಸಿದೆ. ಇದನ್ನು ಖಂಡಿಸಿ ಪ್ರತಿಭಟನೆಗೆ ಸಂಘಟನೆಗಳು ಮುಂದಾಗಿವೆ.
ಸರ್ಕಾರದ ವಿರುದ್ಧದ ಪ್ರತಿಭಟನೆಯು ತಮಿಳುನಾಡಿನಲ್ಲಿ ನಡೆದ ಜಲ್ಲಿಕಟ್ಟು ಪ್ರತಿಭಟನೆ ಮಾದರಿಯಲ್ಲಿ ಇರಲಿದೆ ಎಂದು ಕಾರ್ಯಕರ್ತ ರಾಹುಲ್ ಈಶ್ವರ್ ತಿಳಿಸಿದ್ದಾರೆ.