ಉತ್ತರ ಭಾರತದವರು ತಮಿಳು, ಮಲಯಾಳಂ ಕಲಿಯುತ್ತಾರಾ?: ತರೂರ್ ಪ್ರಶ್ನೆ
ತಿರುವನಂತಪುರಂ, ಜೂನ್ 3: ತ್ರಿಭಾಷಾ ಸೂತ್ರಕ್ಕೆ ಪರಿಹಾರವು ಯೋಜನೆಯನ್ನು ಬಿಟ್ಟುಬಿಡುವುದರಿಂದ ದೊರಕುವುದಿಲ್ಲ. ಆದರೆ, ಅದರ ಉತ್ತಮ ಅನುಷ್ಠಾನದಿಂದ ದೊರಕುತ್ತದೆ ಎಂದು ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 2019ರ ಕರಡಿನಲ್ಲಿ ದೇಶದಾದ್ಯಂತ ಎಲ್ಲ ಶಾಲೆಗಳಲ್ಲಿ ಹಿಂದಿಯನ್ನು ಮೂರನೆ ಭಾಷೆಯನ್ನಾಗಿ ಕಡ್ಡಾಯಗೊಳಿಸುವ ಶಿಫಾರಸಿನ ಮೂಲಕ ಹಿಂದಿ ಹೇರಿಕೆಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಮಿಳುನಾಡಿನಲ್ಲಿ ಇತ್ತೀಚೆಗೆ ಹುಟ್ಟಿಕೊಂಡ ವ್ಯಾಪಕ ವಿರೋಧಕ್ಕೆ ಶಶಿ ತರೂರ್ ದನಿಗೂಡಿಸಿದ್ದಾರೆ.
ಹಿಂದಿ ಹೇರಿಕೆ ಸುಳ್ಳೇ ಸುಳ್ಳು: ತಮಿಳಿನಲ್ಲಿ ನಿರ್ಮಲಾ ಸೀತಾರಾಮನ್ ಟ್ವೀಟ್
ತ್ರಿಭಾಷಾ ಸೂತ್ರವು ಇಂದಿನದ್ದೇನಲ್ಲ. 1960ರ ದಶಕದಲ್ಲಿಯೇ ಅದನ್ನು ಜಾರಿಮಾಡುವ ಪ್ರಯತ್ನ ನಡೆದಿತ್ತು. ಆದರೆ, ಅದನ್ನು ಸರಿಯಾಗಿ ಅನುಷ್ಠಾನಕ್ಕೆ ತಂದಿರಲಿಲ್ಲ. ತ್ರಿಭಾಷಾ ಸೂತ್ರವನ್ನು ಬಿಟ್ಟುಬಿಡುವುದು ಅದಕ್ಕೆ ಪರಿಹಾರವಾಗಲಾರದು. ಆದರೆ, ಅದನ್ನು ಸೂಕ್ತವಾದ ರೀತಿಯನ್ನು ಜಾರಿಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹಿಂದಿ ಹೆಚ್ಚಾಗಿ ಚಾಲ್ತಿಯಲ್ಲಿರುವ ಮಹಾರಾಷ್ಟ್ರದಲ್ಲಿಯೂ ಹಿಂದಿ ಹೇರಿಕೆ ವಿರುದ್ಧ ವಿರೋಧಗಳು ವ್ಯಕ್ತವಾಗಿವೆ. ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್) ಕೂಡ ಹಿಂದಿ ನಮ್ಮ ಮಾತೃಭಾಷೆಯಲ್ಲ. ಹೀಗಾಗಿ ಅದರ ಬಲವಂತದ ಹೇರಿಕೆಯನ್ನು ಒಪ್ಪುವುದಿಲ್ಲ ಎಂದಿದೆ.
ಉತ್ತರದವರು ತಮಿಳು ಕಲಿಯುತ್ತಿಲ್ಲ
'ದಕ್ಷಿಣ ಭಾರತದ ಹೆಚ್ಚಿನವರಿಗೆ ಹಿಂದಿ ಎರಡನೆಯ ಭಾಷೆಯಾಗಿದೆ. ಆದರೆ, ಉತ್ತರ ಭಾರತದಲ್ಲಿ ಯಾರೂ ಮಲಯಾಳಂ ಅಥವಾ ತಮಿಳನ್ನು ಕಲಿಯುತ್ತಿಲ್ಲ' ಎಂದು ತ್ರಿಭಾಷಾ ಸೂತ್ರದ ಉದ್ದೇಶವನ್ನು ವ್ಯಂಗ್ಯವಾಡಿದ್ದಾರೆ.
ನಮ್ಮ ಭಾಷೆಯಲ್ಲ
ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ವಕ್ತಾರ ಅನಿಲ್ ಶಿದೋರ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಸಂಘಟನೆಯ ಅಧಿಕೃತ ಟ್ವಿಟ್ಟರ್ ಖಾತೆ, 'ಹಿಂದಿ ನಮ್ಮ ಮಾತೃಭಾಷೆಯಲ್ಲ. ಅದನ್ನು ನಮ್ಮ ಮೇಲೆ ಹೇರಬೇಡಿ ಮತ್ತು ಪ್ರಚೋದಿಸಬೇಡಿ' ಎಂದು ಟ್ವೀಟ್ ಮಾಡಿದೆ.
ಕರ್ನಾಟಕದಲ್ಲಿ ಹಿಂದಿ ಹೇರಿಕೆ ಕುರಿತು ಸಿಎಂ ಕುಮಾರಸ್ವಾಮಿ ಏನಂತಾರೆ?
|
ಕನ್ನಡವೇ ಸಾರ್ವಭೌಮ ಭಾಷೆ
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಸಹಿಸಲಾಗದು. ಕನ್ನಡ ನಮ್ಮ ಅಸ್ಮಿತೆ. ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನಪ್ರತಿನಿಧಿಗಳೆಲ್ಲರೂ ಪಕ್ಷಾತೀತವಾಗಿ ಚಿಂತನೆ ಮಾಡಬೇಕೆಂದು ನನ್ನ ಮನವಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
Array |
ಭಾಷಾವಾರು ವೈವಿಧ್ಯತೆಯನ್ನು ಗೌರವಿಸಿ
ಭಾರತೀಯ ಸಂವಿಧಾನದ 8ನೇ ಪರಿಚ್ಛೇದದ ಪ್ರಕಾರ ಕನ್ನಡವೂ ಸೇರಿ ಉಳಿದ 21 ಭಾಷೆಗಳಂತೆ ಹಿಂದಿ ಕೂಡ ಒಂದು ಅಧಿಕೃತ ಭಾಷೆಯಷ್ಟೇ. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಲ್ಲಿ ಹಿಂದಿಯನ್ನು ಹೇರುವುದು ಖಂಡನೀಯವಾಗಿದ್ದು ಕೇಂದ್ರ ಸರ್ಕಾರವು ಭಾಷಾವಾರು ವೈವಿಧ್ಯತೆಯನ್ನು ಗೌರವಿಸಿ ಸಂವೇದನಾಶೀಲ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಗೃಹಸಚಿವ ಎಂಬಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.