ಶತ್ರುಗಳಿಗೆ ಶೌರ್ಯದ ಪರಿಚಯ ಮಾಡಿಸಿದ್ದೀರಿ ಎಂದ ಮೋದಿ
ನವದೆಹಲಿ, ಜುಲೈ.03: ಭಾರತ-ಚೀನಾದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ಕಾಲ್ಕೆರೆದು ನಿಂತ ಚೀನಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಖಡಕ್ ಸಂದೇಶ ರವಾನಿಸಿದ್ದಾರೆ. ವಿಶ್ವವು ವಿಕಾಸವಾದದತ್ತ ಸಾಗಬೇಕೇ ವಿನಃ ವಿಸ್ತಾರವಾದದತ್ತ ಅಲ್ಲ ಎನ್ನುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
Recommended Video
ಶುಕ್ರವಾರ ಲಡಾಖ್ ನ ನಿಮು ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತೀಯ ಯೋಧರನ್ನು ಉದ್ದೇಶಿಸಿ ಮಾತನಾಡಿದರು. ಗಾಲ್ವಾನ್ ನದಿ ಕಣಿವೆಯಲ್ಲಿ ಹೋರಾಟ ನಡೆಸಿ ಹುತಾತ್ಮರಾದ ಭಾರತೀಯ ಯೋಧರ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೂ ಗೌರವ ಮತ್ತು ಹೆಮ್ಮೆಯಿದೆ ಎಂದು ಮೋದಿ ತಿಳಿಸಿದ್ದಾರೆ.
India-China standoff LIVE: ವಿಸ್ತಾರವಾದದ ವಿರುದ್ಧ ಮೋದಿ ಗುಡುಗು
ಗಾಲ್ವಾನ್ ಕಣಿವೆ ವಿಚಾರಕ್ಕೆ ಕಳೆದ 53 ವರ್ಷಗಳ ಬಳಿ ಮೊದಲ ಬಾರಿಗೆ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದಿತ್ತು. ಜೂನ್.15 ಮತ್ತು 16ರಂದು ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಆದರೆ ಚೀನಾ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಬದಲಿಗೆ ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂದಿತ್ತು.
ಶತ್ರುಗಳಿಗೆ ನಮ್ಮ ಯೋಧರ ಶೌರ್ಯದ ಅರಿವಾಗಿದೆ
ಭಾರತ ಮಾತೆಯ ನೆಲದಲ್ಲಿರುವ ಮಣ್ಣಿನ ಶಕ್ತಿ ಎಂಥದ್ದು ಎಂಬುದು ಶತ್ರುಗಳಿಗೆ ತಿಳಿದಿರಲಿಲ್ಲ. ಜೊತೆಗೆ ನಮ್ಮ ಯೋಧರ ಶೌರ್ಯ ಹೇಗಿದೆ ಎನ್ನುವುದನ್ನು ಅರಿತುಗೊಳ್ಳದೇ ಗಡಿಯಲ್ಲಿ ಕಾಲ್ಕೆರೆದು ನಿಂತವರಿಗೆ ತಕ್ಕ ಪಾಠ ಕಲಿಸಿದ್ದೀರಿ. ಇದೀಗ ಶತ್ರುಗಳಿಗೆ ಭಾರತೀಯ ಯೋಧರ ಶೌರ್ಯ ಏನು. ಭಾರತ ಮಾತೆಯ ಮಣ್ಣಿನ ಗುಣ ಎಂಥದ್ದು ಎಂಬುದರ ಅರಿವಾಗಿದೆ ಎಂದು ಮೋದಿ ತಿಳಿಸಿದರು.
ನಿಮ್ಮ ಶೌರ್ಯಕ್ಕೆ ಸರಿಸಾಟಿಯಿಲ್ಲ ಎಂದ ಪ್ರಧಾನಿ
ನಿಮ್ಮ ಶೌರ್ಯ ಮತ್ತು ಸಮರ್ಪಣೆಗೆ ಸರಿಸಾಟಿಯೇ ಇಲ್ಲ. ನೀವೆಲ್ಲರೂ ನಿಂತಿರುವ ಈ ಅತ್ಯುನ್ನತ ಪ್ರದೇಶಗಳಿಗಿಂತ ನಿಮ್ಮ ಧೈರ್ಯ ಹೆಚ್ಚಾಗಿದೆ. ನಿಮ್ಮ ತೋಳುಗಳು ನಿಮ್ಮನ್ನು ಸುತ್ತುವರೆದಿರುವ ಪರ್ವತಗಳಂತೆ ಬಲವಾಗಿರುತ್ತವೆ. ನಿಮ್ಮ ಆತ್ಮವಿಶ್ವಾಸ, ದೃಢ ನಿಶ್ಚಯ ಮತ್ತು ನಂಬಿಕೆಯು ಇಲ್ಲಿರುವ ಶಿಖರಗಳಂತೆ ಸ್ಥಿರವಾಗಿವೆ. ಪ್ರತಿಯೊಬ್ಬ ಭಾರತೀಯರು ಕೂಡಾ ನಿಮ್ಮ ಬಗ್ಗೆ ಗೌರವ ಮತ್ತು ಹೆಮ್ಮೆ ಪಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಯೋಧರ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿಶ್ವದ ಎದುರು ಭಾರತದ ಶಕ್ತಿಯನ್ನು ತೋರಿದ್ದೀರಿ
ನೀವು ಇಲ್ಲಿ ತೋರಿದ ಸಾಮರ್ಥ್ಯ ಮತ್ತು ಮಾಡಿದ ಕಾರ್ಯವು ಇಂದು ವಿಶ್ವದ ಎದುರು ಭಾರತ ತಲೆ ಎತ್ತಿ ನಿಲ್ಲುವಂತೆ ಮಾಡಿದೆ. ಜಗತ್ತಿನಲ್ಲೇ ಭಾರತೀಯ ಸಶಸ್ತ್ರ ಪಡೆಯು ಪ್ರಬಲವಾಗಿ ಎನ್ನುವುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದೀರಿ. ನಿಮ್ಮ ಶೌರ್ಯದಿಂದ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದಂತೆ ಆಗಿದೆ ಎಂದು ನರೇಂದ್ರ ಮೋದಿ ಹೇಳಿದರು.
ಭಾರತೀಯ ಯೋಧರಿಗೆ ಗೌರವ ಅರ್ಪಿಸಿದ ಪ್ರಧಾನಿ ಮೋದಿ
ನಿಮ್ಮೆಲ್ಲರಿಗೂ ಹಾಗೂ ತಾಯಿನಾಡುಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಎಲ್ಲಾ ಸೈನಿಕರಿಗೆ ನಮಸ್ಕರಿಸಲು ಬಯಸುತ್ತೇನೆ. ಲಡಾಖ್ನಲ್ಲಿರುವ ಪ್ರತಿಯೊಂದು ಮೂಲೆಯಲ್ಲಿರುವ ಪ್ರತಿಕಲ್ಲು, ಪ್ರತಿನದಿ ಮತ್ತು ಪ್ರತಿಯೊಂದು ಬೆಣಚುಕಲ್ಲುಗಳು ಭಾರತದ ಅವಿಭಾಜ್ಯ ಅಂಗವೆಂದು ಪ್ರಧಾನಿ ಮೋದಿ ಉಚ್ಛರಿಸಿದ್ದಾರೆ.
ವಿಸ್ತಾರವಾದದ ವಿರುದ್ಧ ಗುಡುಗಿದ ಪ್ರಧಾನಿ ಮೋದಿ
ವಿಶ್ವದಲ್ಲಿ ವಿಕಾಸವಾದದ ಯುಗವು ಆರಂಭವಾಗಿದೆ. ವಿಸ್ತಾರವಾದಕ್ಕಿಂತ ವಿಕಾಸವಾದವು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಆದರೆ ವಿಸ್ತಾರವಾದದಿಂದ ಇಡೀ ಜಗತ್ತಿಗೆ ಹಾಗೂ ಮಾನವೀಯತೆಗೆ ಸಾಕಷ್ಟು ಹಾಸಿಯುಂಟಾಗಿದೆ. ಭಾರತಕ್ಕೆ ಮಾನವನ ಜೀವನ ಮತ್ತು ಶಾಂತಿ, ಸ್ನೇಹ, ಸೌಹಾರ್ದತೆಯೇ ಅಗತ್ಯವಾಗಿದೆ. ವಿಸ್ತಾರವಾದವು ಯಾರಿಗೂ ಉತ್ತಮವಲ್ಲ ಎನ್ನುವ ಮೂಲಕ ಚೀನಾಗೆ ನೇರವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.