ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
2004ರಲ್ಲಿ ಜಾರಿ ನಿರ್ದೇಶನಾಲಯದ ದಾಖಲಿಸಿದ್ದ ಕೇಸು; ಪ್ರಕರಣ ರದ್ದುಗೊಳಿಸಿ ವಶಪಡಿಸಿಕೊಂಡಿರುವ ಆಸ್ತಿಯನ್ನು ಹಿಂದಿರುಗಿಸುವಂತೆ ಇಡಿಗೆ ಸೂಚನೆ ನೀಡಿದ ಹೈಕೋರ್ಟ್.
ಬೆಂಗಳೂರು, ಮಾರ್ಚ್ 13: ಆರ್ಥಿಕ ಅವ್ಯವಹಾರಗಳ ಕಾಯ್ದೆಯಡಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಅಲ್ಲದೆ, ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ ರೆಡ್ಡಿಗೆ ಸೇರಿರುವ 900 ಕೋಟಿ ರು. ಆಸ್ತಿಯನ್ನು ಹಿಂದಿರುಗಿಸುವಂತೆ ಸೂಚನೆ ನೀಡಿದೆ.
ಇದೇ ಕಾಯಿದೆಗೆ 2009ರಲ್ಲಿ ತರಲಾಗಿರುವ ತಿದ್ದುಪಡಿಯಂತೆ ರೆಡ್ಡಿಯವರ ಮೇಲೆ 2014ರಲ್ಲಿ ಜಾರಿಗೊಳಿಸುವ ಈ ಪ್ರಕರಣಕ್ಕೆ ಅನ್ವಯಿಸುವ ಹಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಆರ್ಥಿಕ ಅವ್ಯವಹಾರ ಆರೋಪದಡಿ ಜಾರಿ ನಿರ್ದೇಶನಾಲಯವು 2004, 2005 ಹಾಗೂ 2006ರಲ್ಲಿ ರೆಡ್ಡಿ, ಅವರ ಪತ್ನಿ ಅರುಣಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತಲ್ಲದೆ, ರೆಡ್ಡಿಯವರಿಗೆ ಸಂಬಂಧಪಟ್ಟಿದ್ದ ಕೆಲವಾರು ಆಸ್ತಿಗಳನ್ನು ವಶಪಡಿಸಿಕೊಂಡಿತ್ತು.
ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ಕೈಗೊಂಡಿರುವ ಕ್ರಮದ ವಿರುದ್ಧ ರೆಡ್ಡಿಯವರು ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಅದರ ವಿಚಾರಣೆಯ ತೀರ್ಪು ಮಾರ್ಚ್ 13ರಂದು ಹೊರಬಿದ್ದಿದೆ.