ಉಗ್ರರ ದಾಳಿ ಬೆದರಿಕೆ; ದೆಹಲಿ ಸೇರಿ 30 ವಿಮಾನ ನಿಲ್ದಾಣದಲ್ಲಿ ಭಾರೀ ಭದ್ರತೆ
ನವದೆಹಲಿ, ಅಕ್ಟೋಬರ್ 3: ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಮೂವತ್ತು ವಿಮಾನ ನಿಲ್ದಾಣಗಳಲ್ಲಿ ಸರ್ಕಾರದಿಂದ ಭದ್ರತೆ ಹೆಚ್ಚಿಸಲಾಗಿದೆ. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಜೈಷ್- ಇ- ಮೊಹ್ಮದ್ ಹವಣಿಸುತ್ತಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.
ನಾಗರಿಕ ವಿಮಾನಯಾನ ಭದ್ರತಾ ಬ್ಯುರೋದ ಅಧಿಕಾರಿಗಳಿಗೆ ಜೈಷ್- ಇ- ಮೊಹ್ಮದ್ ನ ಶಂಷೇರ್ ವನಿ ಎಂಬಾತ ಹಿಂದಿಯಲ್ಲಿ ಪತ್ರ ಬರೆದಿದ್ದಾನೆ. "ಜಮ್ಮು- ಕಾಶ್ಮೀರದ ವಿಶೇಷ ಸ್ಥಾನ ರದ್ದು ಮಾಡಿದ್ದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿ" ಪತ್ರದಲ್ಲಿ ಹೇಳಲಾಗಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು ದೆಹಲಿ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದೆ.
ದಸರಾ ಸಂದರ್ಭದಲ್ಲಿ ಉಗ್ರದಾಳಿಯ ಸಂಚು, ಹಿಟ್ ಲಿಸ್ಟ್ ನಲ್ಲಿ ಬೆಂಗಳೂರು!
ಸಾಧಾರಣ ದಿರಿಸಿನಲ್ಲಿ ಇರುವ ಶಸ್ತ್ರಸಜ್ಜಿತ ವ್ಯಕ್ತಿಗಳನ್ನು ಟರ್ಮಿನಲ್ ಒಳಗೆ ನೇಮಕ ಮಾಡಲಾಗಿದೆ. ಜತೆಗೆ ಶ್ವಾನದಳ, ಬಾಂಬ್ ಪತ್ತೆ ತಂಡವನ್ನು ವಿಮಾನ ನಿಲ್ದಾಣದ ವಿವಿಧ ಕಡೆ ನಿಯೋಜಿಸಲಾಗಿದೆ. ಮುಖ್ಯವಾಗಿ ವಾಹನ ನಿಲ್ದಾಣದ ಸ್ಥಳದಲ್ಲಿ ಹೆಚ್ಚು ಎಚ್ಚರಿಕೆ ವಹಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನ ನಿಲ್ದಾಣವನ್ನು ಪ್ರವೇಶಿಸುವ ಪ್ರತಿ ವಾಹನವನ್ನು ತಪಾಸಣೆ ಮಾಡಲಾಗುತ್ತಿದೆ. ಹೆಚ್ಚಿನ ನಿಗಾ ವಹಿಸಲು ವಾಚ್ ಟವರ್ ಗಳಲ್ಲಿ ಹೆಚ್ಚಿನ ಜನರನ್ನು ನಿಯೋಜನೆ ಮಾಡಲಾಗಿದೆ. ಇದೇ ರೀತಿಯ ಭದ್ರತಾ ವ್ಯವಸ್ಥೆಯನ್ನು ದೇಶದ ಸೂಕ್ಷ್ಮವಾದ ವಿಮಾನ ನಿಲ್ದಾಣಗಳಲ್ಲೂ ಮಾಡಲಾಗಿದೆ.