ಭಾರತ ಕಡಲ ತೀರದ ಮೂಲಕ ಪಾಕ್ ಉಗ್ರರ ದಾಳಿ ಸಾಧ್ಯತೆ: ಹೈ ಅಲರ್ಟ್
ನವದೆಹಲಿ, ಆಗಸ್ಟ್ 9: ಪಾಕಿಸ್ತಾನದ ಭಯೋತ್ಪಾದಕರು ಭಾರತದ ಕಡಲ ತೀರದ ಮೂಲಕ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಭಾರತದ ನೌಕಾ ಸೇನೆ ಹೈ ಅಲರ್ಟ್ ನಲ್ಲಿದೆ. ಜಮ್ಮು- ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನ ತೆಗೆದು, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆ ಮಾಡಿದ ಹಿನ್ನೆಲೆಯಲ್ಲಿ ಪಾಕ್ ನ ಭಯೋತ್ಪಾದಕರು ದಾಳಿ ಮಾಡಬಹುದು ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
"ಪೂರ್ವ ಮತ್ತು ಪಶ್ಚಿಮ ಕಡಲ ಭಾಗದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿದ್ದೇವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ರೇಡಾರ್ ಮೂಲಕ ಕಣ್ಗಾವಲು ಇಡಲಾಗಿದೆ. ಕಳೆದ ಕೆಲವು ದಿನಗಳಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೈಷ್ ಇ ಮೊಹ್ಮದ್ ನ ಮಸೂದ್ ಅಜರ್ ನ ಸೋದರ ರೌಫ್ ಅಜ್ಗರ್ ನಂಥ ಭಯೋತ್ಪಾದಕರ ಚಲನವಲನದ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ವರದಿ ನೀಡಿದೆ.
"ಸೇ ನೋ ಟು ಇಂಡಿಯಾ" ಪಾಕಿಸ್ತಾನದ ಹೊಸ ಘೋಷವಾಕ್ಯ!
ಪಾಕಿಸ್ತಾನದ ಪಂಜಾಬ್ ಭಾಗದಿಂದ ಪಾಕ್ ಆಕ್ರಮಿತ ಕಾಶ್ಮೀರದ ಭಾರತದ ಗಡಿ ಭಾಗಕ್ಕೆ ಸಮೀಪ ದೊಡ್ಡ ಸಂಖ್ಯೆಯಲ್ಲಿ ಜೈಷೆ ಉಗ್ರರನ್ನು ರೌಫ್ ಅಜ್ಗರ್ ಸ್ಥಳಾಂತರ ಮಾಡುತ್ತಿದ್ದಾನೆ. ಜಮ್ಮು- ಕಾಶ್ಮೀರದಲ್ಲಿ ಉಗ್ರಗಾಮಿಗಳ ಸಂಭವನೀಯ ದಾಳಿ ಬಗ್ಗೆ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿವೆ.
"ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಸಾಬೀತುಪಡಿಸಿದ ಇಮ್ರಾನ್ ಖಾನ್!"
ಇನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಬಾಜ್ವಾ, ಕಾಶ್ಮೀರಿಗಳ ಸಲುವಾಗಿ ಯಾವ ಹಂತಕ್ಕೆ ತೆರಳಲು ಕೂಡ ಸಿದ್ಧ ಎಂದು ನೀಡಿರುವ ಹೇಳಿಕೆಯನ್ನು ಸಹ ಪ್ರಸ್ತಾಪಿಸಲಾಗಿದೆ. ಹನ್ನೊಂದು ವರ್ಷಗಳ ಹಿಂದೆ ಹತ್ತು ಮಂದಿ ಪಾಕಿಸ್ತಾನ ಮೂಲದ ಉಗ್ರರು ಮುಂಬೈನೊಳಗೆ ನುಸುಳಿ 150ಕ್ಕೂ ಹೆಚ್ಚು ಜನರನ್ನು ಕೊಂದಿದ್ದರು. ಆದ್ದರಿಂದ ಮೀನುಗಾರಿಕೆ ದೋಣಿಗಳ ಮೇಲೆ ಕಣ್ಗಾವಲು ಇಡಲು ನಿರ್ಧರಿಸಲಾಗಿದೆ.