ಅಧಿಕ ಮಳೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ
ಹವಾಮಾನ ವೈಪರೀತ್ಯದಿಂದಾಗಿ ಅಮರನಾಥ ಯಾತ್ರೆಯನ್ನು ಗುರುವಾರ ಬೆಳಗ್ಗೆ (ಜುಲೈ 14) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪಹಲ್ಗಾಮ್ ಮತ್ತು ಬಾಲ್ಟಾಲ್ ಶಿಬಿರಗಳಿಂದ ಪವಿತ್ರ ಗುಹೆಯ ಕಡೆಗೆ ತೆರಳಲು ಯಾವುದೇ ಯಾತ್ರಿಕರಿಗೆ ಅವಕಾಶವಿರಲಿಲ್ಲ.
ಇದಕ್ಕೂ ಮುನ್ನ ಜುಲೈ 5 ರಂದು ಭಾರಿ ಮಳೆಯ ನಂತರ ಮತ್ತು ಜುಲೈ 8 ರಂದು ಭಾರಿ ಮೇಘಸ್ಫೋಟದ ನಂತರ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಬಳಿಕ ಇಂದು ಅಧಿಕ ಮಳೆಯಿಂದಾಗಿ ಯಾತ್ರೆಯನ್ನು ನಿಲ್ಲಿಸಲಾಗಿದೆ. 5,449 ಯಾತ್ರಿಕರ ಮತ್ತೊಂದು ಬ್ಯಾಚ್ ಜಮ್ಮುವಿನಿಂದ ಕಣಿವೆಗೆ ಗುರುವಾರ ಹೊರಟಿದ್ದು ಸೇರಿದಂತೆ 1.44 ಲಕ್ಷಕ್ಕೂ ಹೆಚ್ಚು ಯಾತ್ರಿಗಳು ಅಮರನಾಥ ಯಾತ್ರೆಯನ್ನು ಮಾಡಿದ್ದಾರೆ.
J&K: ಪಂಚತಾರ್ನಿ ಕಡೆಯಿಂದ ಅಮರನಾಥ ಯಾತ್ರೆ ಪುನರಾರಂಭ
ಅಮರನಾಥ ಪುಣ್ಯಕ್ಷೇತ್ರ ಮಂಡಳಿ (ಎಸ್ಎಎಸ್ಬಿ) ಅಧಿಕಾರಿಗಳು ಇದುವರೆಗೆ 1,44,457 ಯಾತ್ರಾರ್ಥಿಗಳು ಯಾತ್ರೆ ಕೈಗೊಂಡಿದ್ದು, ಈ ಪೈಕಿ 16,457 ಮಂದಿ ಬುಧವಾರ ದರ್ಶನ ಪಡೆದಿದ್ದಾರೆ. 5,449 ಯಾತ್ರಾರ್ಥಿಗಳ ಮತ್ತೊಂದು ತಂಡವು ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಎರಡು ಬೆಂಗಾವಲುಗಳಲ್ಲಿ ಯಾತ್ರೆಗೆ ಹೊರಟಿದೆ ಎಂದು ತಿಳಿಸಿದ್ದಾರೆ. ಇವರಲ್ಲಿ 3783 ಮಂದಿ ಪಹಲ್ಗಾಮ್ ಬೇಸ್ ಕ್ಯಾಂಪ್ಗೆ ಹೋಗುತ್ತಿದ್ದರೆ 1666 ಮಂದಿ ಬಲ್ಟಾಲ್ ಬೇಸ್ ಕ್ಯಾಂಪ್ಗೆ ಹೋಗುತ್ತಿದ್ದಾರೆ.
ಹಠಾತ್ ಪ್ರವಾಹಕ್ಕೆ ಹದಿನಾರು ಜನ ಬಲಿ
ಚಿಕ್ಕದಾದ ಬಾಲ್ಟಾಲ್ ಮಾರ್ಗವನ್ನು ಬಳಸುವವರು ಗುಹೆ ದೇಗುಲವನ್ನು ತಲುಪಲು 14 ಕಿಲೋಮೀಟರ್ ಟ್ರೆಕ್ ಮಾಡಬೇಕು ಮತ್ತು ಮುಂದೆ ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗವನ್ನು ಬಳಸುವವರು ಗುಹೆ ದೇಗುಲವನ್ನು ತಲುಪಲು ನಾಲ್ಕು ದಿನಗಳವರೆಗೆ 48 ಕಿಮೀ ಚಾರಣ ಮಾಡಬೇಕು. ಯಾತ್ರಿಗಳಿಗೆ ಎರಡೂ ಮಾರ್ಗಗಳಲ್ಲಿ ಹೆಲಿಕಾಪ್ಟರ್ ಸೇವೆಗಳು ಲಭ್ಯವಿವೆ.
ಶುಕ್ರವಾರದಂದು ಅಮರನಾಥ ಗುಹೆಯ ದೇಗುಲದ ಬಳಿ ಮೇಘಸ್ಫೋಟ ಸಂಭವಿಸಿ ಅನೇಕ ಸಾವು ನೋವು ಸಂಭವಿಸಿವೆ. ಹಠಾತ್ ಪ್ರವಾಹಕ್ಕೆ ಹದಿನಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಮೂರು ಡಜನ್ ಜನರು ಕಾಣೆಯಾಗಿದ್ದಾರೆ.
ರಕ್ಷಾ ಬಂಧನದ ಸಂದರ್ಭದಲ್ಲಿ ಯಾತ್ರೆ ಮುಕ್ತಾಯ
ವಾರ್ಷಿಕ 43 ದಿನಗಳ ತೀರ್ಥಯಾತ್ರೆಯು ಜೂನ್ 30 ರಂದು (ಕೋವಿಡ್ -19 ರ ಕಾರಣದಿಂದಾಗಿ ಎರಡು ವರ್ಷಗಳ ನಂತರ) ಅವಳಿ ಮೂಲ ಶಿಬಿರಗಳಿಂದ (ದಕ್ಷಿಣ ಕಾಶ್ಮೀರದ ಅನಂತನಾಗ್ನ ಪಹಲ್ಗಾಮ್ನಲ್ಲಿರುವ ನುನ್ವಾನ್ ಮತ್ತು ಮಧ್ಯ ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಬಾಲ್ಟಾಲ್ ಶಿಬಿರ) ಪ್ರಾರಂಭವಾಯಿತು. ರಕ್ಷಾ ಬಂಧನದ ಸಂದರ್ಭದಲ್ಲಿ ಯಾತ್ರೆಯು ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ.
ಯಾತ್ರೆ ಪೂರ್ಣಗೊಳಿಸುವವರೆಗೂ ಹಿಂದಿರುಗಲು ನಿರಾಕರಣೆ
ಅಮರನಾಥ ಗುಹೆ ದೇಗುಲದಿಂದ ಸುಮಾರು 2 ಕಿಮೀ ದೂರದಲ್ಲಿ ಶುಕ್ರವಾರ (ಜುಲೈ 8) ಸಂಜೆ 5:30 ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾದರು. ಪವಿತ್ರ ಗುಹೆಯ ಬಳಿ ಭಾರಿ ನೀರಿನ ಹರಿವಿನಿಂದ ಮೂರು ಲಾಂಗರ್ ಕೊಚ್ಚಿಹೋಗಿವೆ. ಹಲವಾರು ಜನ ಕಾಣೆಯಾಗಿದ್ದಾರೆ. ಹಠಾತ್ ಪ್ರವಾಹದಿಂದ ಯಾತ್ರೆ ಸ್ಥಗಿತಗೊಳಿಸಲಾಗಿತ್ತು. ಇಂದೂ ಕೂಡ ಮಳೆಯಾಗುತ್ತಿದೆ. ಆದರೆ ಯಾತ್ರೆ ಪೂರ್ಣಗೊಳ್ಳುವವರೆಗೂ ಹಿಂದಿರುಗುವುದಿಲ್ಲ ಎಂದು ಯಾತ್ರಾರ್ಥಿಗಳು ಇಂದು ಮತ್ತೆ ಯಾತ್ರೆಯನ್ನು ಆರಂಭವಿಸಿದ್ದಾರೆ.
ಆಗಸ್ಟ್ 11ರಂದು ಯಾತ್ರೆ ಮುಕ್ತಾಯ
ರಾಮಬಾನ್ ಜಿಲ್ಲೆಯ ಆರು ಸ್ಥಳಗಳಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ನಂತರ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ವಾಹನಗಳು ಸಂಚರಿಸದಂತೆ ಸ್ಥಗಿತಗೊಳಿಸಲಾಗಿದೆ. ಮೆಹಾರ್, ಕೆಫೆಟೇರಿಯಾ ಮೋಡ್, ಚಂಬಾ, ಅನೋಖಿಫಾಲ್, ಕೆಲಮೋಡ್ ಮತ್ತು ಪಂಟಿಯಾಲ್ ಹೆದ್ದಾರಿಗಳನ್ನು ಮುಚ್ಚಲಾಗಿತ್ತು. ಸದ್ಯ ರಸ್ತೆ ಮಾರ್ಗವನ್ನು ಸುಲಭಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಜೂನ್ 30ರಂದು ಶುರುವಾಗಿರುವ ಅಮರನಾಥ ಯಾತ್ರೆ ಆಗಸ್ಟ್ 11ರಂದು ಮುಕ್ತಾಯಗೊಳ್ಳಲಿದೆ. ಅಮರನಾಥ ಯಾತ್ರೆಯಲ್ಲಿ ಇದುವರೆಗೂ ಒಂದು ಲಕ್ಷ ಯಾತ್ರಿಕರು ಭಾಗವಹಿಸಿ ದರ್ಶನ ಪಡೆದಿದ್ದಾರೆ.