ಅಸ್ಸಾಂ ಮಳೆ: ಎರಡು ದಿನಗಳ ಕಾಲ ವರುಣನ ಅರ್ಭಟ- ರೆಡ್ ಅಲರ್ಟ್
ಗುವಾಹಟಿ ಜೂನ್ 15: ಅಸ್ಸಾಂನ ಗುವಾಹಟಿಯಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಸೋಮವಾರದಿಂದ ಸುರಿಯುತ್ತಿರುವ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಎರಡು ದಿನಗಳ ಕಾಲ ಮಳೆ ಮುಂದುವರಯಲಿದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಜೊತೆಗೆ ಮಳೆಗೆ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲಾಗಿದೆ. ಭಾರೀ ಮಳೆಯ ನಡುವೆ ಗುವಾಹಟಿಯ ಬೋರಗಾಂವ್ನಲ್ಲಿ ಮೊನ್ನೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ.
ನಗರದ ಕಾಮಾಖ್ಯ, ಖರ್ಗುಲಿ, ಹೆಂಗೇರಬರಿ, ಸಿಲ್ಪುಖೂರಿ ಮತ್ತು ಚಂದಮರಿ ಕಾಲೋನಿ ಸೇರಿದಂತೆ ಇನ್ನೂ ಅನೇಕ ಸ್ಥಳಗಳಲ್ಲಿ ಭೂಕುಸಿತ ವರದಿಯಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದರಿಂದ ಈ ವರ್ಷದ ಪ್ರವಾಹ ಮತ್ತು ಭೂಕುಸಿತದಲ್ಲಿ ಸತ್ತವರ ಸಂಖ್ಯೆಯನ್ನು 42 ಕ್ಕೆ ಏರಿಕೆ ಮಾಡಿದೆ.
'ಸ್ಮಾರ್ಟ್' ಸಿಟಿಯ ನೂರಾರು ಮನೆಗಳಿಗೆ ನುಗ್ಗಿದ ಪ್ರವಾಹದ ನೀರಿನಲ್ಲಿ ಇಂಜಿನ್ ವಿಫಲವಾದ ಕಾರಣ ಶಾಲಾ ಬಸ್ಗಳು ಸೇರಿದಂತೆ ನೂರಾರು ವಾಹನಗಳು ರಸ್ತೆಗಳಲ್ಲಿ ಸಿಲುಕಿಕೊಂಡಿವೆ. ಹಲವಾರು ಪ್ರದೇಶಗಳಲ್ಲಿ ವಾಹನಗಳು ಹಲವಾರು ಗಂಟೆಗಳ ಕಾಲ ಸಿಕ್ಕಿಹಾಕಿಕೊಂಡಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ವರದಿಯಾಗಿದೆ.
ಅಧಿಕಾರಿಗಳ ಮೇಲೆ ಸ್ಥಳೀಯರ ಆಕ್ರೋಶ
ಮೃಗಾಲಯ ರಸ್ತೆ, ಆರ್ಜಿ ಬರುವಾ ರಸ್ತೆ, ಜಿಎಸ್ ರಸ್ತೆ, ನಬಿನ್ ನಗರ, ಅನಿಲ್ ನಗರ, ಹಟಿಗಾಂವ್, ಗಣೇಶ್ಗುರಿ, ಹೆಡಯೇತ್ಪುರ, ದಿಸ್ಪುರ್ನ ಶಾಸಕರ ಕ್ವಾರ್ಟರ್ಸ್, ಲಚಿತ್ ನಗರ, ತರುಣ್ ನಗರ, ಜ್ಯೋತಿಕುಚಿ, ಘೋರಮಾರಾ, ವಿಐಪಿ ರಸ್ತೆ, ರಾಜ್ಗಢ ರಸ್ತೆ, ಜೋರಾಬತ್ ಮತ್ತು ಚತ್ರಿಬರಿಯಲ್ಲಿ ಪ್ರವಾಹ ಉಂಟಾಗಿದೆ.
ನಬಿನ್ ನಗರದ ನಿವಾಸಿಗಳು ರಾತ್ರಿಯೇ ಮನೆ ತೊರೆದು ನಗರದ ಹೃದಯ ಭಾಗದಲ್ಲಿರುವ ರಾಜಗಢದ ಫುಟ್ಪಾತ್ನಲ್ಲಿ ನೆಲೆಸಿದ್ದಾರೆ. ಆಡಳಿತದ ಯಾರೊಬ್ಬರೂ ಇತ್ತ ಗಮನಹರಿಸಿಲ್ಲ. ಮಕ್ಕಳು ಸೇರಿದಂತೆ ಎಲ್ಲರೂ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತುರ್ತು ಸಂದರ್ಭ ಹೊರತು ಮನೆ ತೊರೆಯದಂತೆ ಸೂಚನೆ
ಭಾರೀ ಮಳೆಯಿಂದಾಗಿ ಸಾರ್ವಜನಿಕೆರಿಗೆ ಮೆಟ್ರೋಪಾಲಿಟನ್ ಜಿಲ್ಲಾಡಳಿತ ಸಲಹೆಯನ್ನು ನೀಡಿದೆ, ನಿರಂತರ ಮಳೆಯ ದೃಷ್ಟಿಯಿಂದ ಜನರು "ತುರ್ತು ಸಂದರ್ಭ ಹೊರತುಪಡಿಸಿ ಹೊರಗೆ ಹೋಗಬೇಡಿ" ಎಂದು ಮನವಿ ಮಾಡಿದೆ. "ನಿಮ್ಮ ನಿವಾಸದಲ್ಲಿ ನೀರು ನೀರು ತುಂಬಿಕೊಂಡಿದ್ದರೆ / ಭೂಕುಸಿತಕ್ಕೆ ಗುರಿಯಾಗಿದ್ದರೆ, ದಯವಿಟ್ಟು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದನ್ನು ಪರಿಗಣಿಸಿ ಅಥವಾ ದಯವಿಟ್ಟು 1077/86381 12297 ನಲ್ಲಿ ಜಿಲ್ಲಾಡಳಿತವನ್ನು ಸಂಪರ್ಕಿಸಿ" ಎಂದು ಅದು ಟ್ವೀಟ್ ಮಾಡಿದೆ.
ರೈಲು ಮಾರ್ಗ ಮುಳುಗಡೆ
"ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಜೂನ್ 15 ರವರೆಗೆ ಮುಚ್ಚಲಾಗಿದೆ" ಎಂದು ಕಾಮ್ರೂಪ್ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆಗಳು ತೆರೆದಿರುತ್ತವೆ ಎಂದು ಅವರು ಹೇಳಿದ್ದಾರೆ. ಸೋಮವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಮೊಣಕಾಲು ಆಳದ ನೀರು ಹರಿದಿದ್ದು, ಕೆಲವೆಡೆ ನೀರಿನ ಮಟ್ಟ ನಡು ದಾಟಿದೆ. ಗುವಾಹಟಿ ರೈಲು ನಿಲ್ದಾಣದ ಅಪ್ರೋಚ್ ರಸ್ತೆ ಕೂಡ ಮುಳುಗಡೆಯಾಗಿದೆ.
ಎರಡು ದಿನಗಳ ಕಾಲ ಭಾರೀ ಮಳೆ
ಭಾರತೀಯ ಹವಾಮಾನ ಇಲಾಖೆಯು ಅಸ್ಸಾಂ ಮತ್ತು ಮೇಘಾಲಯಕ್ಕೆ 'ರೆಡ್ ಅಲರ್ಟ್' ನೀಡಿದ್ದು, ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಗುವಾಹಟಿಯ ಪ್ರಾದೇಶಿಕ ಹವಾಮಾನ ಕೇಂದ್ರವು ರೆಡ್ ಅಲರ್ಟ್ ಎಚ್ಚರಿಕೆಯನ್ನು ನೀಡಿದೆ ಮತ್ತು ಮಂಗಳವಾರದಿಂದ ಗುರುವಾರದವರೆಗೆ "ಪ್ರತ್ಯೇಕವಾದ ಭಾರೀ ಮಳೆ" ವರೆಗೆ ಮುನ್ಸೂಚನೆ ನೀಡಿದೆ. ಇದನ್ನು ಹೊರತುಪಡಿಸಿ, ಜೂನ್ 13 ರಿಂದ 17 ರ ನಡುವೆ ಈಶಾನ್ಯ ರಾಜ್ಯಗಳಲ್ಲಿ ಹಲವು ಸ್ಥಳಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
Recommended Video