ಅನೇಕ ರಾಜ್ಯಗಳಲ್ಲಿ ಸೆ.27ರಂದು ಅಧಿಕ ಮಳೆ ಎಚ್ಚರಿಕೆ: ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ ಸಾಧ್ಯತೆ
ನವದೆಹಲಿ ಸೆಪ್ಟೆಂಬರ್ 27: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ಕರ್ನಾಟಕದಲ್ಲಿಂದು ಮಳೆಯಾಗಲಿದೆ ಎಂದು ಹವಾಮಾನ ಇಳಾಖೆ ಮಾಹಿತಿ ನೀಡಿದೆ. ಈ ಸುಳಿಗಾಳಿಯು ಒಡಿಶಾ ಕರಾವಳಿ ಮಾರ್ಗವಾಗಿ ಸಾಗಲಿದೆ. ಹೀಗಾಗಿ ಇಂದು ಕರ್ನಾಟಕದ ಹಲವೆಡೆ ಮಳೆಯಾಗಬಹುದು ಎಂದು ಹವಾಮಾನ ತಜ್ಞ ಪ್ರಸಾದ್ ತಿಳಿಸಿದರು.
ಇನ್ನೂ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಅನಾಹುತ ಸೃಷ್ಟಿಸಿದೆ. ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಅಪ್ಡೇಟ್ನಲ್ಲಿ ಇಂದು ದೆಹಲಿಯಲ್ಲಿ ಸ್ವಲ್ಪ ಮಳೆಯಾಗಬಹುದು ಎಂದು ಹೇಳಿದೆ. ಜೊತೆಗೆ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ, ತ್ರಿಪುರ, ಒಡಿಶಾ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ಯುಪಿ, ಬಿಹಾರ, ಇಂದು ಜಾರ್ಖಂಡ್, ಛತ್ತೀಸ್ಗಢ ಮತ್ತು ಹಿಮಾಚಲದಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ಐಎಂಡಿ ಹೇಳಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ: ಎಲ್ಲೆಲ್ಲಿ ಮಳೆ ಸಾಧ್ಯತೆ ತಿಳಿಯಿರಿ
ಐಎಂಡಿ ನಿನ್ನೆಯಿಂದ ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಹಾಗಾಗಿ ಉತ್ತರಾಖಂಡ, ಹರಿಯಾಣ, ಚಂಡೀಗಢ, ಪೂರ್ವ ರಾಜಸ್ಥಾನ ಮತ್ತು ಗುಜರಾತ್ನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದರೆ, ಕರ್ನಾಟಕ, ತಮಿಳುನಾಡು, ಕೇರಳದಲ್ಲಿಯೂ ಲಘು ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ 24 ಗಂಟೆಗಳಲ್ಲಿ ಎಲ್ಲೆಲ್ಲಿ ಮಳೆ?
ಮತ್ತೊಂದೆಡೆ, ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಮುಂದಿನ 24 ಗಂಟೆಗಳ ಅವಧಿಯಲ್ಲಿ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಜಾರ್ಖಂಡ್, ಒಡಿಶಾ, ಛತ್ತೀಸ್ಗಢ, ಉತ್ತರಾಖಂಡ, ಹಿಮಾಚಲ ಪ್ರದೇಶ, ಅಂಡಮಾನ್, ಪಂಜಾಬ್, ಹರಿಯಾಣ, ದೆಹಲಿ, ಮಧ್ಯ ಪ್ರದೇಶ, ಛತ್ತೀಸ್ಗಢ, ತೆಲಂಗಾಣ, ಮರಾಠವಾಡ, ಉತ್ತರ ಮಧ್ಯ ಮಹಾರಾಷ್ಟ್ರ, ಉತ್ತರ ಕೊಂಕಣ ಮತ್ತು ಗೋವಾ, ಸಿಕ್ಕಿಂ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಲಘು ಮಳೆಯಾಗಲಿದೆ.
ಉತ್ತರಪ್ರದೇಶ, ಬಿಹಾರದಲ್ಲಿ ಮುಂಗಾರು ಮಾರುತಗಳ ಸಂಚಾರ ಮುಗಿದಿದೆ, ಇದರಿಂದಾಗಿ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ ಮತ್ತು ಮುಂದಿನ 24 ಗಂಟೆಗಳ ಕಾಲ ಇದು ಸಕ್ರಿಯವಾಗಿರುತ್ತದೆ ಎಂದು ಸ್ಕೈಮೆಟ್ ಹೇಳಿದೆ.
ಎಲ್ಲೆಲ್ಲಿ ಮಳೆಯಾಗಬಹುದು?
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಿದೆ. ಈ ಪ್ರದೇಶಗಳಲ್ಲಿ ಬುಧವಾರದ ವೇಳೆಗೆ ಮಳೆ ಕಡಿಮೆ ಆಗಲಿದೆ. ಆದರೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಂಗಳವಾರವು ಸಹ ಮಳೆ ಸುರಿಯಲಿದೆ. ಬೆಳಗಾವಿ, ಹಾವೇರಿ, ಬಾಗಲಕೋಟೆ, ಹಾವೇರಿ, ಗದಗ, ಯಾದಗಿರಿ, ಕೊಪ್ಪಳ ಭಾಗದಲ್ಲಿ ಸಾಧಾರಣವಾಗಿ ಕೆಲವೊಮ್ಮೆ ಗುಡುಗು ಸಹಿತಿ ಜೋರು ಮಳೆ ಬರುವ ಸಾಧ್ಯತೆ ಇದೆ. ಅದೇ ರೀತಿ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಸಹ ತುಂತುರು ಮಳೆ ಆಗಬಹುದು.
ಮೋಡ ಕವಿದ ವಾತಾವರಣ
ಇದೀಗ ನೈರುತ್ಯ ಮಾನ್ಸೂನ್ ಹಿಂಪಡೆಯುವ ಸಮಯ ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಒಂದು ವಾರದೊಳಗೆ ಮುಂಗಾರು ಕಡಿಮೆಯಾಗಲಿದೆ. ಆದರೆ ಈ ಮಧ್ಯೆ, ಹಲವು ರಾಜ್ಯಗಳಲ್ಲಿ ಮೋಡಗಳು ಮಳೆ ಸುರಿಸಲಿವೆ. ಕಡಿಮೆ ಮತ್ತು ಹೆಚ್ಚು ಮಳೆಯಾಗುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಳಿಗ್ಗೆ ಮತ್ತು ಸಂಜೆ ತಾಪಮಾನ ಕಡಿಮೆ
ಈಗ ತಾಪಮಾನ ತೀವ್ರವಾಗಿ ಬದಲಾಗಲಿದೆ ಎಂದು ಇಲಾಖೆ ತಿಳಿಸಿದೆ. ಈಗ ಬೆಳಗ್ಗೆ ಮತ್ತು ಸಂಜೆ ತಾಪಮಾನವು ಕಡಿಮೆಯಾಗಬಹುದು, ಇದರಿಂದಾಗಿ ಜನರು ಚಳಿಯನ್ನು ಅನುಭವಿಸುತ್ತಾರೆ. ಕ್ರಮೇಣ ಚಳಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಮುಂಬರುವ 15 ದಿನಗಳಲ್ಲಿ ಬದಲಾವಣೆಗಳನ್ನು ಶೀಘ್ರದಲ್ಲೇ ಕಾಣಬಹುದು.