ಉತ್ತರಾಖಂಡದಲ್ಲಿ ಭಾರೀ ಮಳೆ: ಕೇದಾರನಾಥ ಯಾತ್ರೆ ಸ್ಥಗಿತ- ಆರೆಂಜ್ ಅಲರ್ಟ್
ಕೇದಾರನಾಥ್ ಮೇ 23: ಉತ್ತರಾಖಂಡ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರ ಸೋಮವಾರ ಪ್ರಕಟಿಸಿದೆ. ಸರ್ಕಾರ ಇಂದು ಮತ್ತು ನಾಳೆ (ಸೋಮವಾರ ಮತ್ತು ಮಂಗಳವಾರ) 'ಆರೆಂಜ್ ಅಲರ್ಟ್' ಘೋಷಿಸಿದೆ.
ಭಾರೀ ಮಳೆಯಿಂದಾಗಿ ಕಾಲ್ನಡಿಗೆಯಲ್ಲಿ ಬಂದ ಭಕ್ತರನ್ನು ತಡೆದು ಹೋಟೆಲ್ಗಳಿಗೆ ಹಿಂತಿರುಗಿಸಲಾಗಿದೆ ಎಂದು ರುದ್ರಪ್ರಯಾಗ ಸಿಒ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಈಗ ದೇವಸ್ಥಾನಕ್ಕೆ ಪಾದಯಾತ್ರೆ ಮಾಡಬೇಡಿ ಎಂದು ಭಕ್ತರಿಗೆ ಸಲಹೆ ನೀಡಿದರು. "ನಾವು ಗುಪ್ತಕಾಶಿಯಿಂದ ಸುಮಾರು 5,000 ಜನರನ್ನು ನಿಲ್ಲಿಸಿದ್ದೇವೆ. ಸದ್ಯಕ್ಕೆ ಹೆಲಿಕಾಪ್ಟರ್ ಸೇವೆಗಳನ್ನು ಸಹ ಮುಚ್ಚಲಾಗಿದೆ" ಎಂದು ಅವರು ಹೇಳಿದರು.
ಚಾರ್ ಧಾಮ್ ಯಾತ್ರೆ: 39 ಯಾತ್ರಾರ್ಥಿಗಳು ಸಾವು
ಈ ದಿನದಲ್ಲಿ ತಾಪಮಾನ ಈ ಪ್ರದೇಶದಲ್ಲಿ ಸಂಪೂರ್ಣವಾಗಿ ಕುಸಿದಿದೆ ಮತ್ತು ಪರ್ವತಗಳು ಬಿಳಿ ಹಿಮದಿಂದ ಆವೃತವಾಗಿವೆ. ಹಿಮಪಾತ ತಾಪಮಾನದಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರದೇಶದಲ್ಲಿ ವಿಪರೀತ ಚಳಿ ನಿರ್ಮಾಣವಾಗಿದೆ. ನಿನ್ನೆ ಸಂಜೆ ಹಿಮಪಾತ ಆರಂಭವಾಗಿದ್ದು, ಜನರು ಛತ್ರಿ ಅಡಿಯಲ್ಲಿ ಆಶ್ರಯ ಪಡೆಯುತ್ತಿರುವುದು ಕಂಡುಬಂದಿದೆ. ಕೊರೆಯುವ ಚಳಿಯ ನಡುವೆಯೂ ಸೋಮವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ದರ್ಶನಕ್ಕೆ ಆಗಮಿಸಿರುವುದು ಕಂಡುಬಂದಿದೆ.
ವಿಶ್ವಪ್ರಸಿದ್ಧ ಕೇದಾರನಾಥದ ದೇವಸ್ಥಾನ
ಆರು ತಿಂಗಳ ಚಳಿಗಾಲದ ಅವಧಿಯ ನಂತರ ಮೇ 6ರಂದು ವಿಶ್ವಪ್ರಸಿದ್ಧ ಕೇದಾರನಾಥದ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ದೇಶದ 12 ಜ್ಯೋಟಿರ್ಲಿಂಗ್ಗಳಲ್ಲಿ ಒಂದಾದ ಕೇದಾರ್ನಾಥ್ ಧಾಮ್ ಚಾರ್ ಧಾಮ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬದ್ರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿಯಲ್ಲಿ ಒಂದಾಗಿದೆ. ಆರು ತಿಂಗಳ ಚಳಿಗಾಲದ ನಂತರ ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಭಕ್ತರಿಗೆ ಪ್ರವೇಶ ಪಡೆಯಲು ಅವಕಾಶವನ್ನು ನೀಡಲಾಗುತ್ತದೆ.
ಮಂಡಕಿನಿ ನದಿಯ ದಡದಲ್ಲಿ ನೆಲೆಗೊಂಡಿರುವ ಈ ಧಾಮ್ನಲ್ಲಿ ಶಿವನ ಒಂದು ದೊಡ್ಡ ದೇವಾಲಯವಿದೆ. ಇದನ್ನು ಕಲ್ಲಿನಲ್ಲಿ ಬಂಡೆಗಳ ಮೂಲಕ ತಯಾರಿಸಲಾಗಿದೆ. ಈ ಜ್ಯೋತಿರ್ಲಿಂಗವು ಭಿನ್ನ ಹಾಗೂ ವಿಶೇಷವಾಹಿದೆ. ಏಕೆಂದರೆ ಅದು ತ್ರಿಕೋನ ಆಕಾರದಲ್ಲಿದೆ. ಕೇದಾರನಾಥನು ಶಿವನ ಮುಖ್ಯ ದ್ವಾದಶ ಜ್ಯೋತಿರ್ಲಿಂಗದ 11 ನೇ ಜ್ಯೋತಿರ್ಲಿಂಗ. ಇಲ್ಲಿ ಶಿವನನ್ನು ವಿಗ್ರಹ ರೂಪದಲ್ಲಿ ಪೂಜಿಸಲಾಗುತ್ತದೆ. ಇಲ್ಲಿನ ವಿಗ್ರಹವು ಎತ್ತಿನ ಬೆನ್ನಿನಂತೆ ಉಬ್ಬಿಕೊಂಡ ತ್ರಿಕೋನ ರೂಪದಲ್ಲಿದೆ. ಚಳಿಗಾಲದಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚುವಾಗ ದೀಪವನ್ನು ಹೊತ್ತಿಸಲಾಗುತ್ತದೆ ಮತ್ತು 6 ತಿಂಗಳ ನಂತರ ದೇವಾಲಯದ ಬಾಗಿಲು ತೆರೆದಾಗ ದೀಪವು ಉರಿಯುತ್ತಿರುವುದು ಕಂಡುಬರುತ್ತದೆ. ಈ 6 ತಿಂಗಳಲ್ಲಿ ದೇವತೆಗಳು ಕೇದಾರಧಾಮದಲ್ಲಿರುವ ಶಿವನನ್ನು ಪೂಜಿಸುತ್ತಾರೆ ಮತ್ತು ಈ ದೀಪವನ್ನು ಬೆಳಗಿಸುತ್ತಾರೆ ಎಂದು ನಂಬಲಾಗಿದೆ. ಬಾಗಿಲನ್ನು ತೆರೆದ ನಂತರ ಈ ಬೆಳಗಿದ ದೀಪವನ್ನು ಭೇಟಿ ಮಾಡುವುದು ಬಹಳ ಅದೃಷ್ಟವೆಂದು ಪರಿಗಣಿಸಲಾಗುತ್ತದೆ.
ಇಷ್ಟಾರ್ಥಗಳನ್ನು ಈಡೇರಿಸುವ ಶಿವ
ಈ ದೇವಾಲಯದಲ್ಲಿ ಸಾಕಷ್ಟು ನಂಬಿಕೆ ಇದೆ. ಯಾರು ಇಲ್ಲಿಗೆ ಹೋದರೂ, ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನಲಾಗುತ್ತದೆ. ಈ ದೇವಾಲಯವನ್ನು 6 ಅಡಿ ಎತ್ತರದ ವೇದಿಕೆಯಲ್ಲಿ ಸ್ಥಾಪಿಸಲಾಗಿದೆ. ದೇವಾಲಯದ ಮುಖ್ಯ ಭಾಗದಲ್ಲಿ ಮಂಟಪ ಮತ್ತು ಗರ್ಭಗೃಹವಿದೆ. ಇಲ್ಲಿ ನಂದಿ ಅಂಗಳದಲ್ಲಿ ಕುಳಿತಿದ್ದಾನೆ. ಈ ದೇವಾಲಯವನ್ನು ಯಾರು ನಿರ್ಮಿಸಿದರು ಬಗ್ಗೆ ಯಾವುದೇ ಅಧಿಕೃತ ಉಲ್ಲೇಖವಿಲ್ಲ. ಆದರೆ ಇದನ್ನು ಗುರು ಶಂಕರಾಚಾರ್ಯರು ಸ್ಥಾಪಿಸಿದ್ದಾರೆ ಎಂದು ಕೆಲವರು ನಂಬುತ್ತಾರೆ.
ಚಾರ್ ಧಾಮ್ ಯಾತ್ರಿಗಳಿಗೆ ಆರೋಗ್ಯ ಸಲಹೆ
'ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಸಾಮಾನ್ಯ ಖಾಯಿಲೆ'ಗಳಿಂದ ಇದುವರೆಗೆ ಚಾರ್ ಧಾಮ್ ಯಾತ್ರೆಯ ಮಾರ್ಗದಲ್ಲಿ ಕನಿಷ್ಠ 39 ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ಉತ್ತರಾಖಂಡದ ಮಹಾನಿರ್ದೇಶಕ ಡಾ. ಶೈಲ್ಜಾ ಭಟ್ ಸೋಮವಾರ ಮಾಹಿತಿ ನೀಡಿದ್ದಾರೆ. ಹೀಗಾಗಿ ವೈದ್ಯಕೀಯವಾಗಿ ಅನರ್ಹವಾಗಿರುವ ಮತ್ತು ಯಾವುದೇ ರೀತಿಯ ದೈಹಿಕ ಖಾಯಿಲೆ ಇರುವ ಯಾತ್ರಾರ್ಥಿಗಳು ಚಾರ್ಧಾಮ್ ಯಾತ್ರೆಗೆ ಪ್ರಯಾಣಿಸದಂತೆ ಸಲಹೆ ನೀಡಿದರು.
ಉತ್ತರಾಖಂಡ ಸರ್ಕಾರ ಚಾರ್ ಧಾಮ್ ಯಾತ್ರಾರ್ಥಿಗಳಿಗೆ ಅವರು ಹಿಮಾಲಯ ದೇವಾಲಯಗಳಿಗೆ ಪ್ರಯಾಸಕರ ಚಾರಣವನ್ನು ಪ್ರಾರಂಭಿಸುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಸಲಹೆಯನ್ನು ನೀಡಿತು. ಯಾವುದೇ ಸಾಂಕ್ರಾಮಿಕ ನಿರ್ಬಂಧಗಳಿಲ್ಲದ ಕಾರಣ ನಿರೀಕ್ಷೆಗೂ ಮೀರಿದ ಜನ ಚಾರ್ಧಾಮ್ ಯಾತ್ರೆಗೆ ಆಗಮಿಸುತ್ತಿದ್ದು, ಯಾತ್ರಾರ್ಥಿಗಳು ಯಾತ್ರೆಗೂ ಮುಂಚಿತವಾಗಿ ನೋಂದಾಯಿಸಿಕೊಳ್ಳುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ.
"ಹೃದಯ ಕಾಯಿಲೆಯಿಂದ ಬಳಲುತ್ತಿರುವವರು ಜಾಗರೂಕರಾಗಿರಬೇಕು ಮತ್ತು ಪ್ರಯಾಣವನ್ನು ಪ್ರಾರಂಭಿಸುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು. ಅಮರನಾಥ ಯಾತ್ರೆಯ ಮಾದರಿಯಲ್ಲಿ ವೈದ್ಯಕೀಯ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಬೇಕು, ಇದರಿಂದ ದೈಹಿಕವಾಗಿ ಸದೃಢರಾಗಿರುವವರು ಮಾತ್ರ ಯಾತ್ರೆಗೆ ತೆರಳುತ್ತಾರೆ" ಎಂದು ಹಿರಿಯ ಹೃದ್ರೋಗ ತಜ್ಞ ಯೋಗೇಂದ್ರ ಸಿಂಗ್ ತಿಳಿಸಿದ್ದಾರೆ.
ಯಾತ್ರಾರ್ಥಿಗಳು ಪ್ರಯಾಣವನ್ನು ಕೈಗೊಳ್ಳುವ ಮೊದಲು ಎತ್ತರದ ಪ್ರದೇಶಗಳಿಗೆ ಒಗ್ಗಿಕೊಳ್ಳಲು ಕನಿಷ್ಠ 24 ಗಂಟೆಗಳ ಸಮಯವನ್ನು ನೀಡುವಂತೆ ಸಲಹೆ ನೀಡಲಾಗಿದೆ. ಏಕೆಂದರೆ ಬಯಲು ಪ್ರದೇಶಗಳಿಂದ ಎತ್ತರದ ಚಳಿ ಗಾಳಿ ಪ್ರದೇಶಗಳಿಗೆ ಥಟ್ಟನೆ ಬರುವುದು ಅಪಾಯಕಾರಿ ಎಂದಿದ್ದಾರೆ.
ನಿಯಂತ್ರಣ ಕಳೆದುಕೊಂಡ ಯಾತ್ರಿಗಳ ಸಂಖ್ಯೆ
ಪರಿಷ್ಕೃತ ಆದೇಶದ ಪ್ರಕಾರ ಪ್ರತಿದಿನ ಗಂಗೋತ್ರಿಗೆ 8 ಸಾವಿರ, ಯಮುನೋತ್ರಿಯಲ್ಲಿ 5 ಸಾವಿರ, ಕೇದಾರನಾಥದಲ್ಲಿ 13 ಸಾವಿರ ಮತ್ತು ಬದರಿನಾಥಕ್ಕೆ 16 ಸಾವಿರ ಯಾತ್ರಾರ್ಥಿಗಳು ಭೇಟಿ ನೀಡಬಹುದಾಗಿದೆ. ಆದರೆ ನೀಡಿದ ಸೂಚನೆಯಂತೆ ದರ್ಶನ ಆಗುತ್ತಿಲ್ಲ. ಧಾಮಗಳಲ್ಲಿ ಸೇರುವ ಜನಸಮೂಹದ ಪ್ರಕಾರ, ದರ್ಶನಕ್ಕೆ ಮಿತಿಯನ್ನು ನಿಗದಿಪಡಿಸುವುದು ಸುಲಭವಲ್ಲ. ಪೊಲೀಸರ ಪರವಾಗಿ ಸಂಖ್ಯೆ ಹೆಚ್ಚಾಗಿರುವುದರಿಂದ ನೋಂದಣಿ ಇಲ್ಲದೆ ಹೋಗುವ ಪ್ರಯಾಣಿಕರನ್ನು ಚೆಕ್ಪೋಸ್ಟ್ನಲ್ಲಿಯೇ ನಿಲ್ಲಿಸುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಜನಸಂದಣಿಯನ್ನು ಗಮನಿಸಿದರೆ, ಪ್ರಸ್ತುತ ಚಾರ್ಧಾಮ್ನಲ್ಲಿನ ಪ್ರಯಾಣ ಆಡಳಿತ ಮತ್ತು ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ.