ಭಾರತದ ಪಶ್ಚಿಮ ಕರಾವಳಿಯಲ್ಲಿ ಭಾರಿ ಮಳೆ ಮುನ್ಸೂಚನೆ
ನವದೆಹಲಿ, ಮೇ 14: ಭಾರತದ ಬಹುತೇಕ ಎಲ್ಲಾ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಅದರಲ್ಲೂ ಭಾರತದ ಪಶ್ಚಿಮ ಘಟ್ಟ, ಕರಾವಳಿ ಭಾಗದಲ್ಲಿ ತೀವ್ರ ಮಳೆ, ಚಂಡಮಾರುತ ಭೀತಿ ಎದುರಾಗಿದೆ.
ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಕರಾವಳಿ ಭಾಗದಲ್ಲಿ ಮಳೆ ಶುರುವಾಗಿದ್ದು, ಇನ್ನೂ ಮೂರು ದಿನಗಳ ಕಾಲ ಗುಡುಗು, ಗಾಳಿ ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇ 16ರಂದು ಚಂಡಮಾರುತದ ಪ್ರಭಾವದಿಂದ ಹೆಚ್ಚಾಗಿ ಗೋವಾ, ಕೊಂಕಣದ ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆ ಸುರಿಯಲಿದೆ. ಗೋವಾ ಅಲ್ಲದೆ, ಗುಜರಾತ್, ಕೇರಳ ಹಾಗೂ ಕರ್ನಾಟಕದ ಕರಾವಳಿಯಲ್ಲೂ ಶುಕ್ರವಾರ ಸಂಜೆಯಿಂದ ಭಾನುವಾರ ತನಕ ರೆಡ್ ಅಲರ್ಟ್ ಹಾಗೂ ಯೆಲ್ಲೂ ಅಲರ್ಟ್ ಘೋಷಿಸಲಾಗಿದೆ.
ಕೊಂಕಣ, ಗೋವಾದಲ್ಲಿ ಸಾಧಾರಣ ಗಾಳಿ ಮಳೆ
* ಶನಿವಾರದಂದು ಕೊಂಕಣದ ದಕ್ಷಿಣ ಭಾಗ, ಗೋವಾದಲ್ಲಿ ಸಾಧಾರಣ ಗಾಳಿ ಮಳೆ ಬೀಸಲಿದ್ದು, ಭಾನುವಾರ, ಸೋಮವಾರದ ವೇಳೆ ಮಳೆ ಪ್ರಮಾಣ ಹೆಚ್ಚಾಗಲಿದೆ. ಮಹಾರಾಷ್ಟ್ರದ ಸಿಂಧುದುರ್ಗ್ ಹಾಗೂ ರತ್ನಗಿರಿ ಜಿಲ್ಲೆಗಳಲ್ಲಿ ಹಾಗೂ ಗುಜರಾತ್ ಕರಾವಳಿಯಲ್ಲಿ ಮೇ 17ರಂದು ಭಾರಿ ಮಳೆ ನಿರೀಕ್ಷಿಸಲಾಗಿದೆ.
ಮೇ 18ರಂದು ಭಾರಿ ಮಳೆ ಮುನ್ಸೂಚನೆ ಸಿಕ್ಕಿದೆ
ಸೌರಾಷ್ಟ್ರದ ಕಚ್ ಪ್ರದೇಶದಲ್ಲಿ ಮೇ 18ರಂದು ಭಾರಿ ಮಳೆ ಮುನ್ಸೂಚನೆ ಸಿಕ್ಕಿದೆ. ಮೇ 19ರಂದು ರಾಜಸ್ಥಾನದ ನೈಋತ್ಯ ಭಾಗದಲ್ಲಿ ಮೇ 19ರಂದು ಚದುರಿದಂತೆ ಅಲ್ಲಲ್ಲಿ ಭಾರಿ ಮಳೆ ಸುರಿಯಲಿದೆ.ಕರಾವಳಿ ಭಾಗಗಳಲ್ಲಿ ಮುಂದಿನ 5 ರಿಂದ 6 ದಿನಗಳ ಕಾಲ 50 ಕಿ.ಮೀ ನಿಂದ 80 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ.
ಸಿಕ್ಕಿಂನಲ್ಲಿ ಮುಂದಿನ 2 ದಿನಗಳ ಗುಡುಗು ಸಹಿತ ಮಳೆ
ಇದಲ್ಲದೆ, ಈಶಾನ್ಯ ರಾಜ್ಯ, ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಮುಂದಿನ 2 ದಿನಗಳ ಗುಡುಗು ಸಹಿತ ಭಾರಿ ಮಳೆ ಸುರಿಯಲಿದೆ. ಉತ್ತರಾಖಂಡ್, ಹಿಮಾಚಲ ಪ್ರದೇಶ, ಆಗ್ನೇಯ ಭಾಗದ ಪಶ್ಚಿಮ ಹಿಮಾಲಯದಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆ ಸುರಿಯಲಿದೆ ಎಂದು ಇಲಾಖೆ ಹೇಳಿದೆ.
Recommended Video
ದಕ್ಷಿಣದಲ್ಲಿ ಕರ್ನಾಟಕ, ಕೇರಳದಲ್ಲಿ ಮಳೆ
ದಕ್ಷಿಣದಲ್ಲಿ ಕರ್ನಾಟಕ, ಕೇರಳದಲ್ಲಿ ಮೇ 13 ರಿಂದ ಮೇ 17ರ ತನಕ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಹಲವು ಜಿಲ್ಲೆಗಳಲ್ಲಿ ಆರೆಂಜ್, ಯೆಲ್ಲೂ ಹಾಗೂ ರೆಡ್ ಅಲರ್ಟ್ ನೀಡಲಾಗಿದೆ. ಮೇ 14ರಂದು ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಮೇ 15ರಂದು ಮಲಪ್ಪುರಂ, ಕೋಳಿಕ್ಕೊಡ್, ವಯನಾಡು,ಕಣ್ಣೂರು,ಕಾಸರಗೋಡು ಭಾಗದಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿರಲಿದೆ ಎಂದು ಕೇರಳ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಹೇಳಿದೆ.