ವೈರಲ್ ಚಿತ್ರ: ಹುತಾತ್ಮ ಅಪ್ಪನ ಕಳೇಬರಕ್ಕೆ ಮುತ್ತಿಕ್ಕುತ್ತಿರುವ ಮುದ್ದುಕಂದ
Recommended Video
ಆ ಮರದ ಪೆಟ್ಟಿಗೆಯಲ್ಲಿ ಜೀವಕೊಟ್ಟ ತನ್ನಪ್ಪ ನಿರ್ಜೀವವಾಗಿ ಮಲಗಿದ್ದಾನೆ ಎಂಬ ಅರಿವೂ ಆ ಹಾಲ್ಗಲ್ಲದ ಕಂದನಿಗಿಲ್ಲ... ಅಪ್ಪನ ಶವಪೆಟ್ಟಿಗೆಗೆ ಆ ಮಗು ಮುಗ್ಧವಾಗಿ ಮುತ್ತಿಕ್ಕುತ್ತಿರುವ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುತ್ತದೆ.
ಯೋಧರ ಬದುಕಿನಲ್ಲಿ ಇಂಥ ಅದೆಷ್ಟು ಕತೆಗಳು ಆಗಿಹೋಗಿವೆಯೋ! ಫೆಬ್ರವರಿ 27 ರಂದು ಹೆಲಿಕಾಪ್ಟರ್ ಪತನಗೊಂಡು ಅಸುನೀಗಿದ ನಿನಾದ್ ಮಂದವ್ಗನೆ ಅವರ ಅಂತ್ಯ ಸಂಸ್ಕಾರದ ಸಮಯದಲ್ಲಿ ಅವರ ಪತ್ನಿ ವಿಜೇತಾ ಕಲ್ಲಿನಂತೆ ನಿಂತಿದ್ದರೆ, ಅವರ ಎರಡು ವರ್ಷದ ಪುಟ್ಟ ಮಗು ವಿದಿತಾ ತಂದೆಯ ಶವಪೆಟ್ಟಿಗೆಗೆ ಮುತ್ತಿಕ್ಕುತ್ತಿದ್ದಾಳೆ.
ಹುತಾತ್ಮ ಪೈಲಟ್ ಶವದೆದುರು ಕಲ್ಲಿನಂತೆ ನಿಂತ ಪತ್ನಿ, ಚಿತ್ರ ವೈರಲ್
ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ನಲ್ಲಿ ಫೆ.27 ರಂದು ಹುತಾತ್ಮರಾದ ಭಾರತೀಯ ವಾಯುಸೇನೆಯ ಸ್ಕಾಂಡ್ರನ್ ಲೀಡರ್ ಸಿದ್ಧಾರ್ಥ ವಸಿಷ್ಠ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಅವರ ಪತ್ನಿ ಆರತಿ ಸಿಂಗ್ ಅವರು ಕಲ್ಲಿನಂತೆ ನಿಂತಿದ್ದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಈ ಮುದ್ದುಕಂದನ ಮುಗ್ಧ ಚಿತ್ರವೂ, ಕರುಳು ಕಿವುಚುವಂತಿದೆ.
|
ಫೆಬ್ರವರಿ 20 ರಂದು ಮುದ್ದು ಮಗಳ ಹುಟ್ಟುಹಬ್ಬ!
ಮಹಾರಾಷ್ಟ್ರದ ನಾಸಿಕದವರಾದ ನಿನಾದ್ ಅವರಿಗೆ ಎರಡೂ ತಿಂಗಳ ಹಿಂದಷ್ಟೇ ಕಾಶ್ಮೀರಕ್ಕೆ ಪೋಸ್ಟಿಂಗ್ ಆಗಿತ್ತು. ಫೆಬ್ರವರಿ 20 ರಂದು ಮಗಳ ಎರಡನೇ ವರ್ಷದ ಹುಟ್ಟು ಹಬ್ಬಕ್ಕೆ ಫೋನ್ ಮಾಡಿದ್ದ ನಿನಾದ್ ಮಗಳ ತೊದಲು ನುಡಿಯನ್ನು ಫೋನಿನಲ್ಲೇ ಆಲಿಸಿಕೊಂಡು ಸಂಭ್ರಮಿಸಿದ್ದರು ಎಂದು ತಾಯಿ ವಿಜೇತ ಮಡುಗಟ್ಟಿದ ದುಃಖದಲ್ಲೇ ಹೇಳುತ್ತಾರೆ.
ಘೋಷಣೆ ಕೂಗಬೇಡಿ, ಸೇನೆಗೆ ಸೇರಿ!
ನಿನಾದ್ ಅವರ ದೇಹಕ್ಕೆ ಸುತ್ತಿದ್ದ ತ್ರಿವರ್ಣ ಧ್ವಜವನ್ನು ಸೇನೆಯ ಕಡೆಯಿಂದ ಪಡೆದು ಸೆಲ್ಯೂಟ್ ಹೊಡೆದ ವಿಜೇತಾ, "ಘೋಷಣೆ ಕೂಗುವುದಕ್ಕಿಂತ ಕಾರ್ಯಾಚರಣೆಗೆ ಇಳಿಯುವುದೇ ಉತ್ತಮ. ಜಿಂದಾಬಾದ್, ಮುರ್ದಾಬಾದ್ ಎಂದು ಕೂಗುವುದರಿಂದ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ ಸೇನೆಗೆ ಸೇರಿ ದೇಶಸೇವೆ ಮಾಡಿ. ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಸೇನೆಗೆ ಸೇರಲು ಅವರನ್ನು ಪ್ರೋತ್ಸಾಹಿಸಿ" ಎಂದರು.
ವಿಡಿಯೋ: ಪತಿಯ ಕಳೇಬರದ ಮುಂದೆ ನಿಂತರೂ ಆಕೆಯ ಕಣ್ಣಲ್ಲಿ ಹನಿ ನೀರಿಲ್ಲ!
|
ನಮಗೆ ಯಾರೂ ಸಾಯುವುದು ಬೇಕಿಲ್ಲ
"ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದಂಥ ಸನ್ನಿವೇಶ ಎದ್ದಿರುವುದು ನಮಗೆ ಬೇಸರ ತಂದಿದೆ. ಯುದ್ಧ ಯಾರಿಗೂ ಬೇಡ, ಯಾರೂ ಸಾಯಬಾರದು. ನಮಗೆ ಬೇಕಿರುವುದು ಶಾಂತಿ. ಯುದ್ಧೋನ್ಮಾನದ ಮನಸ್ಥಿತಿ ಎಂದಿಗೂ ಅಪಾಯಕಾರಿ" ಎಂದು ವಿಜೇತಾ ಕಳವಳ ವ್ಯಕ್ತಪಡಿಸಿದರು.
Array |
ಪತನಗೊಂಡಿದ್ದ ಹೆಲಿಕಾಪ್ಟರ್
ಫೆಬ್ರವರಿ 14 ರ ಪುಲ್ವಾಮಾ ದಾಳಿ ಮತ್ತು ಫೆ.26ರಲ್ಲಿ ಉಗ್ರನೆಲೆಯ ಮೇಲೆ ಭಾರತ ನಡೆಸಿದ ದಾಳಿಯ ನಂತರ ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ ಸೇನಾ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪತನಗೊಂಡಿತ್ತು. ಈ ದುರ್ಘಟನೆಯಲ್ಲಿ ಆರು ಯೋಧರು ಅಸುನೀಗಿದ್ದರು.