ಹುತಾತ್ಮ ಯೋಧರ ಕುಟುಂಬದ ಹೃದಯ ಹಿಂಡುವ ಚಿತ್ರಗಳು
ನವದೆಹಲಿ, ಫೆಬ್ರವರಿ 16: ಯಾರದ್ದೋ ಧರ್ಮಾಂಧತೆಗೆ, ದ್ವೇಷಕ್ಕೆ 49 ಜೀವಗಳು ಬಲಿಯಾಗಿವೆ. ಇಡೀಯ ದೇಶವೇ ಸೂತಕದ ಛಾಯೆಯಲ್ಲಿದೆ. ಹುತಾತ್ಮ ಯೋಧರ ಕುಟುಂಬದವರಿಗಂತೂ ಹೃದಯಕ್ಕೇ ಚೂರಿ ಇರಿದಂತಾಗಿದೆ.
49 ಕುಟುಂಬಗಳು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿವೆ 49 ತಾಯಂದಿರು ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ. 49 ಮಹಿಳೆಯರು ತಮ್ಮ ಪ್ರೀತಿಯ ಗಂಡನ ಕಳೆದುಕೊಂಡಿದ್ದಾರೆ. ಗಡಿ ರಾಜಕೀಯ, ಧರ್ಮ ರಾಜಕೀಯಕ್ಕೆ ಇವರಿಗೆಲ್ಲ ಸಂಬಂಧವೇ ಇಲ್ಲ ಆದರೆ ಇಂದು ಅವರ ಜೀವನ ಇದಕ್ಕೆ ಬಲಿಯಾಗಿದೆ. ದುಃಖದ ಸಾಗರಕ್ಕೆ ಅವರನ್ನು ಬಲವಂತವಾಗಿ ತಳ್ಳಲಾಗಿದೆ.
ಪುಲ್ವಾಮಾ ದಾಳಿ: ಹುತಾತ್ಮ ಯೋಧರ ಸಂಖ್ಯೆ 44 ರಿಂದ 49ಕ್ಕೆ ಏರಿಕೆ
ಮಂಡ್ಯದ ಯೋಧ ಗುರು ಆರು ತಿಂಗಳ ಹಿಂದಷ್ಟೆ ವಿವಾಹವಾಗಿದ್ದರು, ಮಡದಿ ಕಲಾವತಿಯ ಕೈಯ ಮದರಂಗಿ ಮಾಸಿ ಕೆಲವು ದಿನಗಳಾದರೂ ಆಗಿತ್ತೋ ಇಲ್ಲವೋ, ಕೆಲವು ತಿಂಗಳ ಹಿಂದಷ್ಟೆ ಮದುವೆಯ ದಿನ ಇಬ್ಬರೂ ಒಟ್ಟಿಗೆ ಹೂವಿನ ಅಲಂಕೃತ ವಾಹನದಲ್ಲಿ ಕೂತು ಸುತ್ತು ಹೊಡೆದಿದ್ದರು. ಇಂದು ಗುರು ಒಬ್ಬನೇ ಅಲಂಕೃತ ವಾಹನದಲ್ಲಿ ಬರುತ್ತಿದ್ದಾನೆ. ಆದರೆ ಇಂದಿನ ಸನ್ನಿವೇಶ ಭೀಕರವಾಗಿದೆ.
ಮನೆಯಲ್ಲಿಯೋ ಎಸಿ ರೂಂನಲ್ಲಿ ಕೂತು ಫೇಸ್ಬುಕ್ನಲ್ಲಿ RIP ಎಂದು ಟೈಪಿಸುವರಿಗೆ, ಯೋಧರ ಕುಟುಂಬದ ನೋವು ನಿಜವಾಗಿಯೂ ಅರ್ಥವಾಗಲು ಸಾಧ್ಯವೇ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಯೋಧರ ಬಲಿದಾನವನ್ನು ವ್ಯಂಗ್ಯ ಮಾಡುವವರದ್ದು, ಯುದ್ಧ ಕೋರಿ ಯೋಧರನ್ನು ಬಲಿ ಪಡೆಯಲು ಇಚ್ಛಿಸುವವರದ್ದು ಕೇವಲ ಬೆರಳುಗಳ ತೀಟೆ ಅಷ್ಟೆ.
ಯೋಧ ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ಕೊಟ್ಟ ಸುಮಲತಾ ಅಂಬರೀಶ್
ನಿನ್ನೆ ಹುತಾತ್ಮರಾದ ಯೋಧರ ಕುಟುಂಬದ ನೋವನ್ನು ಸೆರೆಹಿಡಿವ ಕೆಲವು ಚಿತ್ರಗಳು ಇಲ್ಲಿವೆ. ಅವರ ನೋವಲ್ಲಿ ಭಾಗಿಯಾಗಲು ಆಗದಿದ್ದರೂ, ಅವರ ನೋವು ಕಂಡು ಒಂದಿಷ್ಟಾದರೂ ಮರುಕಪಡೋಣ.
ಪ್ರೀತಿಯ ಪತಿ, ಪ್ರೇಮಿಗಳ ದಿನದಂದೇ ಬಲಿ
ಮಂಡ್ಯದ ಕಲಾವತಿ ತಮ್ಮ ಪತಿ ಗುರುವನ್ನು ಪ್ರೇಮಿಗಳ ದಿನದಂದೆ ಕಳೆದುಕೊಂಡಿದ್ದಾಳೆ. ಆಕೆಯ ಆಕ್ರಂದನ ಮುಗಿಲು ಮಟ್ಟಿದೆ. ನೋವಿಗೆ ಆಕೆ ಬುದ್ಧಿಯ ಸ್ಥಿಮಿತವನ್ನೇ ಕಳೆದುಕೊಂಡಂತೆ ವರ್ತಿಸುತ್ತಿದ್ದಾಳೆ. ಗುರುವಿನ ವೃದ್ಧ ತಾಯಿ, ತಂದೆಯ ಗೋಳಂತೂ ಅಕ್ಷರಕ್ಕೆ ನಿಲುಕದ್ದು.
ರುಂಡವಿಲ್ಲದ ದೇಹಗಳು, ರಸ್ತೆಗಂಟಿದ ಮಾಂಸ: ಘಟನಾ ಸ್ಥಳದ ಚಿತ್ರಣ
ಮಗನ ಶವಕ್ಕೆ ತಾಯಿ ಹಾರ
ಆಗ್ರಾದ ಕುಶಾಲ್ ಕುಮಾರ್ ರಾವತ್ ಅವರ ಪಾರ್ಥಿವ ಶರೀರಕ್ಕೆ ತಾಯಿ ಹಾರ ಹಾಕಬೇಕಾದರೆ ದುಃಖ ಉಮ್ಮಳಿಸಿ ಬಂದಿದೆ. ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೊಬ್ಬಾಕೆಯ ಕೈಯಲ್ಲೂ ಮದರಂಗಿ ಇದೆ.
ಅಪ್ಪನ ಸೇವೆಗೆ ನೊಂದ ಮಗಳ ಸೆಲ್ಯೂಟ್
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರೀತಿಯ ಅಪ್ಪನಿಗೆ ಮಗಳು ಸೆಲ್ಯೂಟ್ ಹೊಡೆಯುತ್ತಿದ್ದಾಳೆ. ಡೆಹ್ರಾಡೂನ್ನ ಯೋಧ ಮೋಹನ್ ಪೈ ಪಾರ್ಥಿವ ಶರೀರದ ಮುಂದೆ ಶೂನ್ಯ ಭಾವದಲ್ಲಿ ಕೈ ಮುಗಿದು ನಿಂತಿದ್ದಾಳೆ ಪತ್ನಿ.
ಅನಂತಕ್ಕೆ ದೃಷ್ಟಿ ನೆಟ್ಟ ತಾಯಿ
ಪಶ್ಚಿಮ ಬಂಗಾಳ ಹೌರಾದ ಬಬ್ಲೂ ಸಂತಾ ಅವರ ಮನೆಯವರಲ್ಲಿ ದುಃಖ ಮಡುಗಟ್ಟಿದೆ. ಬಬ್ಲೂನ ಶವವನ್ನಾದರೂ ಕಣ್ಣು ತುಂಬಿಕೊಳ್ಳುವ ಸುಪ್ತ ಕಾತುರತೆ ಅವರಲ್ಲಿದೆ. ಅಲ್ಲೊಬ್ಬ ತಾಯಿ ಅನಂತದೆಡೆಗೆ ದಿಟ್ಟಿಸುತ್ತಿದ್ದಾಳೆ, ಬಬ್ಲೂನನ್ನು ಹುಡುಕುತ್ತಿದ್ದಾಳೋ ಏನೋ?
ಯಾರಿಗೆ ಯಾರು ಹೇಳಬೇಕು ಸಮಾಧಾನ?
ಉತ್ತರ ಪ್ರದೇಶದ ಶಮ್ಲಿಯ ಹುತಾತ್ಮ ಯೋಧ ಪ್ರದೀಪ್ ಕುಮಾರ್ ಮನೆಯ ಚಿತ್ರವಿದು. ಅಳುವೇ ಸಮಾಧಾನದ ಹಾದಿ ಎಂಬತ್ತೆ ದುಃಖ ಪಡುತ್ತಿದ್ದಾರೆ. ಎಲ್ಲರಿಗೂ ಉಮ್ಮಳಿಸುತ್ತಿರುವ ದುಃಖ, ಯಾರಿಗೆ ಯಾರು ಸಮಾಧಾನ ಮಾಡಬೇಕು?
'ಮಗನೇ ಅಳಬೇಡ ಅಪ್ಪ ಬರುವರು'
ಮಗನೇ ಅಳಬೇಡ ಅಪ್ಪ ಬರುವರು ಎಂದು ಸುಳ್ಳು ಹೇಳಿ ರಮಿಸುತ್ತಿದ್ದಾಳಾ ಆ ಹೆಂಗಸು. ಮಣಿಪುರದ ಹುತಾತ್ಮ ಯೋಧ ರಾಮ ವಾಕಿಲ್ ಮನೆಯ ಚಿತ್ರವಿದು. ಅರ್ಧ ಕಟ್ಟಿದ ಮನೆ, ಎಂದೂ ಬಾರದ ಮಗ, ಒಡೆದ ಮನ ಇದೇ ಈ ಕುಟುಂಬಕ್ಕೆ ಜೀವನವೆಲ್ಲಾ. ವಿಧಿಗೆ ಕರುಣೆ ಇಲ್ಲ.