'ಕ್ಷುಲ್ಲಕ ರಾಜಕೀಯ': ಕೋವಿಡ್ ಲಸಿಕೆ ಪೂರೈಕೆ ವಿಚಾರದಲ್ಲಿ ಆರೋಗ್ಯ ಸಚಿವ vs ರಾಹುಲ್ ಗಾಂಧಿ
ನವದೆಹಲಿ, ಆ.01: ದೇಶದಲ್ಲಿ ಕೋವಿಡ್ ಲಸಿಕೆ ಪೂರೈಕೆಯ ಬಗ್ಗೆ "ಕ್ಷುಲ್ಲಕ ರಾಜಕೀಯ" ಮಾಡಿದ್ದಕ್ಕಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಕೋವಿಡ್ ಲಸಿಕೆ ಪೂರೈಕೆಯಲ್ಲಿ ಕೊರತೆಯಿದೆ ಎಂದು ಆರೋಪಿಸಿ ಕಾಂಗ್ರೆಸ್ನ ವಯನಾಡು ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ ನಂತರ ಆರೋಗ್ಯ ಸಚಿವರು ರಾಹುಲ್ ಮೇಲೆ ತೀವ್ರ ಕಿಡಿಕಾರಿದ್ದಾರೆ.
ಭಾನುವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಜುಲೈ ತಿಂಗಳು ಮುಗಿದು ಹೋಗಿದೆ. ಆದರೆ ಕೋವಿಡ್ ಲಸಿಕೆ ಪೂರೈಕೆಯಲ್ಲಿ ಕೊರತೆ ಮುಂದುವರಿದಿದೆ ಎಂದು ಆರೋಪಿಸಿದ್ದಾರೆ. ಹಾಗೆಯೇ ದೇಶದ ಹಲವಾರು ರಾಜ್ಯಗಳಲ್ಲಿ ಕೋವಿಡ್ ಲಸಿಕೆ ಪೂರೈಕೆಯಲ್ಲಿನ ಕೊರತೆಗೆ ಸಂಬಂಧಿಸಿದ ಸುದ್ದಿಗಳ ಒಂದು ವಿಡಿಯೋ ತುಣುಕನ್ನು ಕೂಡಾ ಜೊತೆಯಲ್ಲೇ ಟ್ವೀಟ್ ಮಾಡಿದ್ದಾರೆ. ಈ 34 ಸೆಂಕಡುಗಳ ವಿಡಿಯೋದಲ್ಲಿ ದೇಶದ ವಿವಿಧ ಭಾಗಗಳಲ್ಲಿ ವರದಿಯಾಗಿರುವ ಕೋವಿಡ್ ಲಸಿಕೆ ಕೊರತೆಯ ಹಲವು ಘಟನೆಗಳ ಟ್ವೀಟ್ ಮತ್ತು ಮುಖ್ಯಾಂಶಗಳನ್ನು ಹೊಂದಿದೆ.
'ಜುಲೈ ಬಂದಿದೆ, ಆದರೆ ಲಸಿಕೆ ಬಂದಿಲ್ಲ' ಎಂದ ರಾಹುಲ್ ವಿರುದ್ದ ಕೇಂದ್ರ ಸಚಿವರ ತರಾಟೆ
ರಾಹುಲ್ ಗಾಂಧಿಯ ಈ ಟ್ವೀಟ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ''ಜುಲೈ ತಿಂಗಳಲ್ಲಿ ಭಾರತದಲ್ಲಿ 13 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ. ಇದು ಈ ತಿಂಗಳು ಇನ್ನೂ ವೇಗವನ್ನು ಪಡೆಯಲಿದೆ. ಈ ಸಾಧನೆಗಾಗಿ ನಮ್ಮ ಆರೋಗ್ಯ ಕಾರ್ಯಕರ್ತರ ಬಗ್ಗೆ ನಮಗೆ ಹೆಮ್ಮೆ ಇದೆ.ಈಗ ನೀವೂ ಈ ಆರೋಗ್ಯ ಕಾರ್ಯಕರ್ತರ ಸೇವೆಗೆ ಮತ್ತು ದೇಶದ ಬಗ್ಗೆ ಹೆಮ್ಮೆ ಪಡಬೇಕು,'' ಎಂದು ಟಾಂಗ್ ನೀಡಿದ್ದಾರೆ.
''ಜುಲೈನಲ್ಲಿ ಲಸಿಕೆ ಹಾಕಿಸಿಕೊಂಡ 13 ಕೋಟಿ ಜನರಲ್ಲಿ ನೀವೂ ಒಬ್ಬ ಎಂದು ನಾನು ಕೇಳಿದ್ದೇನೆ. ಆದರೆ ನೀವು ನಮ್ಮ ವಿಜ್ಞಾನಿಗಳಿಗೆ ಒಂದು ಮಾತನ್ನೂ ಹೇಳಲಿಲ್ಲ, ಕೋವಿಡ್ ಲಸಿಕೆ ಹಾಕುವಂತೆ ಸಾರ್ವಜನಿಕರಿಗೆ ಮನವಿ ಮಾಡಲಿಲ್ಲ. ಕೋವಿಡ್ ಲಸಿಕೆ ಹೆಸರಿನಲ್ಲಿ ನೀವು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದೀರಿ ಎಂದರ್ಥ. ವಾಸ್ತವವಾಗಿ ಕೋವಿಡ್ ಲಸಿಕೆ ಅಲ್ಲ, ನಿಮಗೆ ಪ್ರಬುದ್ಧತೆಯ ಕೊರತೆ ಇದೆ,'' ಎಂದು ರಾಹುಲ್ ಗಾಂಧಿಯನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಲೇವಡಿ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವರುಗಳು ನಡುವೆ ಕೋವಿಡ್ ಲಸಿಕೆ ವಿಚಾರದಲ್ಲಿ ಟ್ವೀಟ್ ವಾರ್ ನಡೆದಿರುವುದು ಇದೇ ಮೊದಲೇನಲ್ಲ. ಜುಲೈ ಆರಂಭವಾಗುತ್ತಿದ್ದಂತೆ ರಾಹುಲ್ ಗಾಂಧಿ ಕೋವಿಡ್ ಲಸಿಕೆ ವಿಚಾರದಲ್ಲಿ ಮಾಡಿದ್ದ ಟ್ವೀಟ್ನಿಂದಾಗಿ ಆಗಿನ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ರಾಹುಲ್ ನಡುವೆ ವಾಕ್ಸಮರ ನಡೆದಿತ್ತು.
'ನನ್ನ ಫೋನ್ ಕೂಡ ಟ್ಯಾಪ್ ಆಗಿದೆ, ಇದು ಜನರ ದನಿಯ ಮೇಲಿನ ದಾಳಿ': ರಾಹುಲ್
ಕೇಂದ್ರ ನಾಯಕರುಗಳು ಕೋವಿಡ್ ಲಸಿಕೆ ನೀಡಿಕೆ ವೇಗ ಅಧಿಕವಾಗಿದೆ ಎಂದು ಹೇಳುತ್ತಿರುವ ನಡುವೆ ಜುಲೈ ಆರಂಭದಲ್ಲಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ''ಜುಲೈ ತಿಂಗಳು ಬಂದಿದೆ, ಆದರೆ ಲಸಿಕೆ ಬಂದಿಲ್ಲ,'' ಎಂದು ಹೇಳಿದ್ದರು. ಈ ವಿಚಾರದಲ್ಲಿ ಕಿಡಿಕಾರಿದ್ದ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ರಾಹುಲ್ರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪಿಯೂಷ್ ಗೋಯಲ್, ''ಜುಲೈನಲ್ಲಿ 120 ಮಿಲಿಯನ್ ಡೋಸ್ ಲಸಿಕೆ ಲಭ್ಯವಿರುತ್ತದೆ. ಇದು ಖಾಸಗಿ ಆಸ್ಪತ್ರೆಗಳಿಂದ ಸರಬರಾಜುಗಿಂತ ಭಿನ್ನವಾಗಿದೆ. ಸರಬರಾಜು ಬಗ್ಗೆ 15 ದಿನಗಳ ಮುಂಚಿತವಾಗಿ ರಾಜ್ಯಗಳಿಗೆ ತಿಳಿಸಲಾಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಗಂಭೀರವಾಗಿರುವ ಬದಲಾಗಿ ಸಣ್ಣ ರಾಜಕಾರಣದ ಪ್ರದರ್ಶನ ಈ ಸಮಯದಲ್ಲಿ ಸೂಕ್ತವಲ್ಲ ಎಂದು ರಾಹುಲ್ ಗಾಂಧಿ ಅರ್ಥಮಾಡಿಕೊಳ್ಳಬೇಕು,'' ಎಂದು ಹೇಳಿದ್ದರು.
भारत में जुलाई महीने में 13 करोड़ से अधिक टीके लगाए गए हैं।
— Mansukh Mandaviya (@mansukhmandviya) August 1, 2021
इस महीने इसमें और तेजी आने वाली है। इस उपलब्धि के लिए हमें अपने स्वास्थ्यकर्मियों पर गर्व है।
अब तो उन पर और देश पर आपको भी गर्व होना चाहिए। https://t.co/fgdifM26k6
ರಾಹುಲ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ''ನಿನ್ನೆ, ನಾನು ಜುಲೈ ತಿಂಗಳ ಲಸಿಕೆ ಲಭ್ಯತೆಯ ಬಗ್ಗೆ ಸತ್ಯಾಂಶವನ್ನು ತಿಳಿಸಿದ್ದೇನೆ. ಹಾಗಿರುವಾಗ ರಾಹುಲ್ ಗಾಂಧಿ ಜಿ ಅವರ ಸಮಸ್ಯೆ ಏನು? ಅವರು ಓದುವುದಿಲ್ಲವೇ? ಅವರಿಗೆ ಅರ್ಥವಾಗುತ್ತಿಲ್ಲವೇ?,'' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಹಾಗೆಯೇ ''ದುರಹಂಕಾರ ಮತ್ತು ಅಜ್ಞಾನದ ವೈರಸ್ಗೆ ಲಸಿಕೆ ಇಲ್ಲ, ಕಾಂಗ್ರೆಸ್ ತನ್ನ ನಾಯಕತ್ವದ ಕೂಲಂಕುಷ ಪರೀಕ್ಷೆಯ ಬಗ್ಗೆ ಯೋಚಿಸಬೇಕು,'' ಎಂದು ಲೇವಡಿ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)