ಅಯ್ಯಯ್ಯೋ, ಇಲ್ನೋಡಿ, ಥಾಣೆ ರಸ್ತೆಯಲ್ಲೊಬ್ಬ ತಲೆಯಿಲ್ಲದ ಮನುಷ್ಯ!
ಥಾಣೆ, ಜನವರಿ 20: ಮಹಾರಾಷ್ಟ್ರದ ಥಾಣೆಯ ಸಿಗ್ನಲ್ ವೊಂದರ ಬಳಿ ಜ.19 ರಂದು ಬೆಳಿಗ್ಗೆ ಅಚ್ಚರಿ ಕಾದಿತ್ತು. ಒಂದು ಕೈಯಯಲ್ಲಿ ರುಂಡ, ಇನ್ನೊಂದು ಕೈಯಲ್ಲಿ ಹೆಲ್ಮೇಣ್ ಹಿಡಿದ, ತಲೆಯ ಭಾಗವೇ ಇಲ್ಲದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಿಂತಿದ್ದ!
ಅಯ್ಯೋ ಹೌದಾ! ಅಂತಿದೀರಾ? ಹೌದೇ ಹೌದು. ಕಲಾವಿದನೊಬ್ಬನ ಕೈಚಳಕದಿಂದ ನಿರ್ಮಿತವಾದ ಈ ವ್ಯಕ್ತಿ ರಸ್ತೆ ಸುರಕ್ಷತೆಯ ಸಂದೇಶ ಸಾರುತ್ತಿದ್ದಾನೆ! ಹೆಲ್ಮೇಟ್ ಧರಿಸುವ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ಕಲಾವಿದನೊಬ್ಬ ತಲೆ ಇಲ್ಲದ ಮನುಷ್ಯನ ವೇಷ ತೊಟ್ಟಿದ್ದಾನೆ! ಇದು ಥಾಣೆ ಪೊಲೀಸರ ಐಡಿಯಾ! ಹೆಲ್ಮೇಟ್ ಧರಿಸದಿದ್ದರೆ, ತಲೆ ಕಳೆದುಕೊಳ್ಳಬೇಕಾದೀತು ಎಂಬ ಸಂದೇಶವನ್ನು ಸೂಚ್ಯವಾಗಿ ತಿಳಿಸುವ ಈ ಜೀವಂತ ಕಲಾಕೃತಿ ಜನರನ್ನು ಸೆಳೆದಿದ್ದು ಮಾತ್ರವಲ್ಲದೆ, ಒಂದಷ್ಟು ಜಾಗೃತಿಯನ್ನೂ ನೀಡಿದ್ದು ಸುಳ್ಳಲ್ಲ.
ಬೆಂಗಳೂರು ಮಹಾನಗರ ಎಂತು ಬಣ್ಣಿಸಲಿ ನಿನ್ನ?
ಇದರೊಟ್ಟಿಗೆ ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಎಂದಿನಂತೇ ಕಾಣಿಸಿಕೊಂಡ ಬೆಂಕಿ, ಸಸ್ಯಕಾಶಿ ಲಾಲ್ ಬಾಗಿನಲ್ಲಿ ಮಹಾಮಜ್ಜನಕ್ಕೆ ಕಾದು ನಿಂತ ವಿರಕ್ತ ಪುರುಷ ಬಾಹುಬಲಿ, ಗುವಾಹಟಿಯ ಕೋಳಿಜಗಳ, ಅಮೆರಿಕದ ರಾಕೇಟ್ ಉಡ್ಡಯನ ಸೇರಿದಂತೆ ದೇಶ ವಿದೇಶದ ಚಿತ್ರ ಸಮೇತ ಸುದ್ದಿಗಳು ನಿಮಗಾಗಿ ಇಲ್ಲಿವೆ.
ಥಾಣೆಯ ತಲೆ ಇಲ್ಲದ ಮನುಷ್ಯನ ನೋಡಿ!
ರಸ್ತೆ ಸುರಕ್ಷತೆಯ ಸಂದೇಶ ಸಾರುವ ತಲೆ ಇಲ್ಲದ ಮನುಷ್ಯ ಥಾಣೆಯ ಸಿಗ್ನಲ್ ವೊಂದರಲ್ಲಿ ಕಂಡುಬಂದಿದ್ದು ಹೀಗೆ. ದೇಶದ ಹಲವು ರಾಜ್ಯಗಳಲ್ಲಿ ಹೆಲ್ಮೇಟ್ ಕಡ್ಡಾಯಗೊಳಿಸಿದ್ದರೂ, ಜನರಿಗೆ ಇದುವರೆಗೂ ಹೆಲ್ಮೇಟ್ ಧರಿಸಬೇಕಾದ ಅಗತ್ಯದ ಅರಿವು ಮೂಡಿಲ್ಲ. ಕರ್ನಾಟಕದಲ್ಲಿ ಹಿಂಬದಿ ಸವಾರರಿಗೂ ಹೆಲ್ಮೇಟ್ ಕಡ್ಡಾಯಗೊಳಿಸಲಾಗಿದ್ದರೂ, ಐಎಸ್ ಐ ಗುರುತಿಲ್ಲದ ಕಳಪೆ ಹೆಲ್ಮೇಟ್ ಧರಿಸಿ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿದ ಐಎಸ್ ಐ ಗುರುತಿಲ್ಲದ ಹೆಲ್ಮೇಟ್ ಗಳ ಮೇಲೆ ಸರ್ಕಾರ ನಿರ್ಬಂಧ ಹೇರಿದ್ದು, ಇದೇ ಫೆ.1 ರಿಂದ ಈ ನಿಯಮ ಕರ್ನಾಟಕದಲ್ಲಿ ಜಾರಿಗೆ ಬರಲಿದೆ.
ಮತ್ತೆ ಬೆಂಕಿಯುಗುಳಿದ ಬೆಳ್ಳಂದೂರು ಕೆರೆ
ದುರ್ವಾಸನೆಯ ನೊರೆ ಹೊರಸೂಸುತ್ತಿದ್ದ ಬೆಂಗಳೂರಿನ ಬೆಳ್ಳಂದೂರಿನ ಕೆರೆಯಲ್ಲಿ ಜ.19 ರಂದು ಬೆಂಕಿ ಕಾಣಿಸಿಕೊಂದು ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಇಲ್ಲಿ ಬೆಂಕಿ ಆರಿಸುವ ಕಾರ್ಯ ನಡೆಯುತ್ತಿದೆಯಾದರೂ, ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ. ಕಸ, ರಾಸಾಯನಿಕಗಳಿಂದಾಗಿ ಮಾಲಿನ್ಯಕ್ಕೊಳಗಾಗಿರುವ ಬೆಳ್ಳಂದೂರು ಕೆರೆಯನ್ನು ಆದಷ್ಟು ಶೀಘ್ರವಾಗಿ ಸ್ವಚ್ಛಗೊಳಿಸಿ, ಮಾಲಿನ್ಯ ಮುಕ್ತವಾಗಿಸುವಂತೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, ಈಗಾಗಲೇ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.
ಬೆಳ್ಳಂದೂರು ಕೆರೆಗೆ ಬಿದ್ದ ಬೆಂಕಿ ತಹಬದಿಗೆ
ಸಸ್ಯಕಾಶಿಯಲ್ಲಿ ಮಹಾಮಜ್ಜನಕ್ಕೆ ಸಜ್ಜಾದ ವಿರಾಗಿ
ಸಸ್ಯಕಾಶಿ ಎಂದೇ ಹೆಸರಾದ ಬೆಂಗಳೂರಿನ ಲಾಲ್ ಬಾಗಿನಲ್ಲಿ ಗಣರಾಜ್ಯೋತ್ಸವದ ನಿಮಿತ್ತ ನಡೆಯುತ್ತಿರುವ ಪುಷ್ಪಪ್ರದರ್ಶನಕ್ಕೆ ಈ ಬಾರಿಯ ಥೀಮ್, 'ಮಹಾಮಜ್ಜನ.' ಪ್ರತಿ 12 ವರ್ಷಕ್ಕೊಮ್ಮೆ ಹಾಸನದ ಶ್ರವಣಬೆಳಗೊಳದಲ್ಲಿ ಬಾಹುಬಲಿಗೆ ನಡೆಯುವ ಮಹಾಮಜ್ಜನ ಇದೇ ಫೆಬ್ರವರಿಯಲ್ಲಿ ನಡೆಯಲಿದೆ. ತನ್ನಿಮಿತ್ತ ಲಾಲ್ ಬಾಗಿನಲ್ಲೂ 15 ಅಡಿ ಎತ್ತರದ ವಿರಕ್ತಪುರುಷನನ್ನು ನಿರ್ಮಿಸಲಾಗಿದೆ. ಮಹಾಮಜ್ಜನಕ್ಕೆ ಸಿದ್ದಾದ ವಿರಾಗಿ ಬಾಹುಬಲಿ ಜ.19 ರಂದು ಕಂಡಿದ್ದು ಹೀಗೆ.
ಲಾಲ್ ಬಾಗ್ ಪುಷ್ಪ ಪ್ರದರ್ಶನ: ಈ ಬಾರಿ ಭಕ್ತಿ ಭಾವಗಳ ಸಮ್ಮಿಲನ
ಗುವಾಹಟಿಯಲ್ಲಿ ನೋಡಿ ಕೋಳಿಜಗಳ!
ಗುವಾಹಟಿಯಲ್ಲಿ ಪ್ರತಿವರ್ಷ ನಡೆಯುವ ಸಾಂಪ್ರದಾಯಿಕ ಜಾನ್ಬೀಳ್ ಮೇಳದಲ್ಲಿ ನಡೆದ ಕೋಳಿಜಗಳಕ್ಕೆ ನೂರಾರು ಜನ ಸಾಕ್ಷಿಯಾದರು. ಪ್ರಾಣಿಗಳನ್ನು ಹಿಂಸಿಸುವ ಇಂಥ ಸಾಂಪ್ರದಾಯಿಕ ಕ್ರೀಡೆಗಳಿಗೆ ಕಡಿವಾಣ ಹಾಕಬೇಕೆಂಬ ಕುರಿತು ಸಾಕಷ್ಟು ಹೋರಾಟ ನಡೆಯುತ್ತಲೇ ಇದ್ದರೂ, ಗ್ರಾಮೀಣ ಪ್ರದೇಶದ ಜನ ಇಂದಿಗೂ ಇವನ್ನು ಆಚರಿಸುತ್ತಿದ್ದಾರೆ.
ಅಳಿಲಿನ ಬ್ರೇಕ್ ಫಾಸ್ಟ್ ಏನು ಗೊತ್ತಾ?
ಒಂದು ಕ್ಷಣ ಸುಮ್ಮನಿರದೆ ಚಟುವಟಿಕೆಯಿಂದಿರುವ ದಪ್ಪ ಬಾಲದ ಅಳಿಲಂದ್ರೆ ನೋಡಿದಷ್ಟೂ ಸಾಲದೆಂಬಂಥ ಆಕರ್ಷಣೆ. ಮಧ್ಯಪ್ರದೇಶದ ಭೋಪಾಲ್ ನಲ್ಲಿ ಈ ಮುದ್ದು ಅಳಿಲು ಬ್ರೇಕ್ ಫಾಸ್ಟ್ ಮಾಡುತ್ತಿದ್ದಾಗ ಅಚಾನಕ್ಕಾಗಿ ಫೋಟೋಗ್ರಾಫರ್ ಕಣ್ಣಿಗೆ ಬಿತ್ತು! ಅಷ್ಟಕ್ಕೂ ಅಳಿಲಿನ ಬ್ರೇಕ್ ಫಾಸ್ಟ್ ಏನು ಗೊತ್ತಾ? ಬೇಳೆ, ಜೋಳ! ರಾಮ ಸೇತು ಕಟ್ಟುವಾಗ ಭಗವಾನ್ ಶ್ರೀರಾಮನಿಗೆ ನೆರವು ನೀಡಿ, 'ಅಳಿಲು ಸೇವೆ' ಮಾಡಿದ್ದ ಇಣಚಿಯನ್ನು ನೋಡಿದಷ್ಟೂ ಕಣ್ಣಿಗೆ ನೆಮ್ಮದಿಯಿಲ್ಲ!
ಇದೇನು ಬಿಳಿ ಕಾಮನಬಿಲ್ಲು!
ಇದೇನು ಬಿಳಿ ಕಾಮನಬಿಲ್ಲಾ? ಕಾಮನ ಬಿಲ್ಲು ಸೃಷ್ಟಿಯಾಗೋದೇ ಬಿಳಿ ಬಣ್ಣವನ್ನು ಒಡೆದಾಗ ಸಿಗುವ ಏಳುಬಣ್ಣದಿಂದ! ಮತ್ತೆ ಇದೇನಿದು ಎಂದುಕೊಳ್ಳುತ್ತಿದ್ದೀರಾ? ಅಮೆರಿಕದ ಕೇಪ್ ಕ್ಯಾನಾವೆರಲ್ ಏರ್ ಫೋರ್ಸ್ ಸ್ಟೇಶನ್ ನಿಂದ ಉಡ್ಡಯನಗೊಂಡ ಅಟ್ಲಾಸ್ 5 ರಾಕೆಟ್ ಭೂಮಿಯಿಂದ ನೆಗೆದಾಗ ಕಂಡಿದ್ದು ಹೀಗೆ!
ಪಟಾಕಿಯಲ್ಲ ಕಣ್ರಿ ಇದು, ಜ್ವಾಲಾಮುಖಿ!
ಆಹಾ ಎಷ್ಟು ಚೆಂದ! ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಕಾಣುವ ಕೇಸರಿ ಬಣ್ಣದ ಈ ಚಿತ್ರವನ್ನು ಪಟಾಕಿ ಅಂದುಕೊಂಡರೆ, ಚೆಂದ ಅನ್ನೋ ಉದ್ಗಾರ ತಪ್ಪಲ್ಲ! ಆದರೆ ಅಸಲಿಗೆ ಅಲ್ಲಿರುವುದು ಜೀವಂತ ಜ್ವಾಲಾಮುಖಿ ಎಂದರೆ ನಿಬ್ಬೆರಗಾಗುವುದು ಸಹಜ. ಹೌದು, ಫಿಲಿಪೈನ್ಸ್ ನ ಜೀವಂತ ಮಯಾನ್ ಜ್ವಾಲಾಮುಖಿ ರಾತ್ರಿಯ ಹೊತ್ತಲ್ಲಿ ಕಂಡಿದ್ದು ಹೀಗೆ!