ರಾಮ್ ರಹೀಮ್ ತೀರ್ಪು : ಪ್ರಧಾನಿಗೆ ನಾರಿಮನ್ ನೀಡಿದ ಸಲಹೆ ಏನು?
ಬೆಂಗಳೂರು, ಆಗಸ್ಟ್. 28 : 'ದೇಶದ ಪ್ರಧಾನಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದ ಮುಖ್ಯಸ್ಥರಲ್ಲ. ಕೇವಲ ದೇಶದ ಪ್ರಧಾನಿಯಂತೆ ಕಾರ್ಯ ನಿರ್ವಹಿಸಬೇಕು' ಎಂದು ಖ್ಯಾತ ವಕೀಲ ಫಾಲಿ ಎಸ್.ನಾರಿಮನ್ ಹೇಳಿದ್ದಾರೆ.
ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದ ಬಳಿಕ ಹರ್ಯಾಣ, ಪಂಜಾಬ್ನಲ್ಲಿ ಗಲಭೆ ನಡೆದಿತ್ತು. ಈ ಗಲಭೆಯ ಬಳಿಕ ಪಂಜಾಬ್-ಹರ್ಯಾಣ ಹೈಕೋರ್ಟ್ ನೀಡಿರುವ ಆದೇಶವನ್ನು ನಾರಿಮನ್ ಸ್ವಾಗತಿಸಿದ್ದಾರೆ.
ರಾಮ್ ರಹೀಮ್ ಶಿಕ್ಷೆ ಪ್ರಕಟ, ಕಂಡಲ್ಲಿ ಗುಂಡು ಆದೇಶ
ನ್ಯಾಯಾಲಯದ ತೀರ್ಪಿನ ಬಳಿಕ ನಡೆದ ಗಲಭೆ ತಡೆಯುವಲ್ಲಿ ವಿಫಲವಾದ ಕೇಂದ್ರ ಮತ್ತು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಗಲಭೆಯಿಂದ ಆದ ನಷ್ಟ ಭರಿಸಲು ರಾಮ್ ರಹೀಮ್ ಸಿಂಗ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೋರ್ಟ್ ಹೇಳಿತ್ತು.
ಧರ್ಮ, ರಾಜಕೀಯದ ಹೆಸರಲ್ಲಿ ಹಿಂಸಾಚಾರ ಸಹಿಸಲು ಸಾಧ್ಯವಿಲ್ಲ: ಮೋದಿ
ನಾರಿಮನ್ ಅವರು ತಮ್ಮ ಹೇಳಿಕೆಯಲ್ಲಿ, 'ಶುಕ್ರವಾರ ನಡೆದ ಗಲಭೆಯನ್ನು ತಡೆಯಲು ವಿಫಲವಾದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳ ಕಾರ್ಯವನ್ನು ನಾನು ಮೆಚ್ಚುತ್ತೇನೆ. ಅವರನ್ನು ಅಭಿನಂದಿಸುತ್ತೇನೆ' ಎಂದು ಹೇಳಿದ್ದಾರೆ.
'ದೇಶದ ಪ್ರಧಾನಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಮುಖ್ಯಸ್ಥನಲ್ಲ. ಅವರು ದೇಶದ ಪ್ರಧಾನಿ, ಅವರು ಹಾಗೆಯೇ ಕಾರ್ಯವನ್ನು ನಿರ್ವಹಣೆ ಮಾಡಬೇಕು. 'ರಾಜ್ಯದ ಮುಖ್ಯಮಂತ್ರಿಯೂ ಅಷ್ಟೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷದ ಮುಖ್ಯಸ್ಥರು ಅವರಲ್ಲ. ಅವರು ರಾಜ್ಯದ ಮುಖ್ಯಮಂತ್ರಿಯಾಗಿ, ಜನರ ಪ್ರತಿನಿಧಿಯಾಗಿ ಕೆಲಸ ಮಾಡಬೇಕು' ಎಂದು ನಾರಿಮನ್ ಹೇಳಿದ್ದಾರೆ.
2002ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಅಪರಾಧಿ ಎಂದು ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಇಂದು ರಾಮ್ ರಹೀಮ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ. ಶುಕ್ರವಾರ ಕೋರ್ಟ್ ತೀರ್ಪಿನ ಬಳಿಕ ನಡೆದ ಗಲಭೆಯಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದರು.