ಶಶಿ ತರೂರ್ ಯೋಚ್ನೆ ಮಾಡಿಯೇ ಮಾತಾಡಿರ್ತಾರೆ ಎಂದ ಹಮೀದ್ ಅನ್ಸಾರಿ
ನವದೆಹಲಿ, ಜುಲೈ 12 : "ಅವರು ಎಲ್ಲವನ್ನು ತಿಳಿದುಕೊಂಡಿರುವ ವ್ಯಕ್ತಿ. ಅವರೇನೇ ಹೇಳಿದರೂ ಚೆನ್ನಾಗಿ ಯೋಚನೆ ಮಾಡಿಯೇ ಹೇಳಿರ್ತಾರೆ. ತಮ್ಮದೇ ತೀರ್ಮಾನ ಮಾಡುವ ಹಕ್ಕು ಅವರಿಗೆ ಇದೆ" ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದಾರೆ. ಅಂದಹಾಗೆ ಸಂಸದ ಶಶಿ ತರೂರ್ ಹಾಗೂ 'ಹಿಂದೂ ಪಾಕಿಸ್ತಾನ' ಹೇಳಿಕೆ ಬಗ್ಗೆ ಅವರು ಈ ರೀತಿ ಹೇಳಿದರು.
ಶಶಿ ತರೂರ್ ಹೇಳಿಕೆ ಬಗ್ಗೆ ನಾನೇನೂ ಓದಿಲ್ಲ. ಅವರು ಚೆನ್ನಾಗಿ ತಿಳಿದುಕೊಂಡಿರುವ ವ್ಯಕ್ತಿ. ಅವರು ಏನೇ ಹೇಳಬೇಕಿದ್ದರೂ ಚೆನ್ನಾಗಿ ಯೋಚಿಸಿಯೇ ಮಾತನಾಡಿರುತ್ತಾರೆ ಎಂದರು.
ಜನರು ಸಾಮಾಜಿಕ ಪದ್ಧತಿಯನ್ನು ಕಾನೂನು ವ್ಯವಸ್ಥೆ ಜತೆಗೆ ಗೊಂದಲ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಕಾನೂನು ಗುರುತಿಸಿದೆ: ಪ್ರತಿ ಸಮುದಾಯವು ತಮ್ಮದೇ ನಿಯಮ ಹೊಂದಿರಬಹುದು. ಭಾರತದಲ್ಲಿ ವೈಯಕ್ತಿಕ ಕಾನೂನು ಅಡಿಯಲ್ಲಿ ಮದುವೆ, ವಿಚ್ಛೇದನ, ದತ್ತು ಮತ್ತು ಉತ್ತರಾಧಿಕಾರ ಬರುತ್ತದೆ. ಪ್ರತಿ ಸಮುದಾಯಕ್ಕೂ ತನ್ನದೇ ಪದ್ಧತಿ ಅನುಸರಿಸುವ ಹಕ್ಕಿದೆ ಎಂದು ಶರಿಯಾ ಕಾನೂನಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಗೆದ್ದರೆ ಭಾರತ ಹಿಂದು ಪಾಕಿಸ್ತಾನವಾಗುತ್ತೆ: ಶಶಿ ತರೂರ್
ನನಗೆ ಟ್ವಿಟ್ಟರ್ ಸೇರುವ ಯಾವುದೇ ಉದ್ದೇಶ ಇಲ್ಲ. ತಂತ್ರಜ್ಞಾನದ ವಿಚಾರದಲ್ಲಿ ನಾನಿನ್ನೂ ಇಪ್ಪತ್ತನೇ ಶತಮಾನದ ಮನುಷ್ಯ. ನನ್ನ ಹತ್ತಿರ ಕಂಪ್ಯೂಟರ್ ಮತ್ತು ಪುಸ್ತಕಗಳಿವೆ. ನಾನು ಅದರಲ್ಲೇ ತೃಪ್ತ ಎಂದು, ಟ್ವಿಟ್ಟರ್ ಖಾತೆ ತೆರೆಯುವ ಇರಾದೆ ಇದೆಯೇ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ನನಗೆ ಅನ್ನಿಸುತ್ತದೆ ಸಾರ್ವಜನಿಕರ ಪ್ರತಿಕ್ರಿಯೆಯೇ ಎಲ್ಲವನ್ನೂ ಹೇಳುತ್ತದೆ. ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಇತ್ತೀಚೆಗೆ ಸಾರ್ವಜನಿಕರಿಂದ ಆಗುತ್ತಿರುವ ಹಲ್ಲೆ ಮತ್ತು ಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದರು.