ಜಲಾಶಯಗಳು ಭರ್ತಿ,ತಮಿಳುನಾಡಿಗೆ ನೀರು ಬಿಡಿ: ಕುಮಾರಸ್ವಾಮಿ
Recommended Video
ಬೆಂಗಳೂರು, ಜು.10: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಸೋಮವಾರ ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳು ಭರ್ತಿಯಾಗಿದೆ ಹಾಗಾಗಿ ತಮಿಳುನಾಡಿಗೆ ನೀರು ಬಿಡಿ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ತಮಿಳುನಾಡಿಗೆ ನೀರು ಬಿಡಿ: ರಾಜ್ಯಕ್ಕೆ ಕಾವೇರಿ ಪ್ರಾಧಿಕಾರ ಆದೇಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿತ್ತು .ಕಳೆದ ಫೆಬ್ರವರಿಯಲ್ಲಿ ನೀರು ಹಂಚಿಕೆ ಬಗ್ಗೆ ಅಂತಿಮ ತೀರ್ಪು ನೀಡಿದ ಸುಪ್ರೀಂಕೋರ್ಟ್ ತಮಿಳುನಾಡಿಗೆ 177.25 ಟಿಎಂಸಿ ನೀರನ್ನಷ್ಟೇ ನೀಡುವ ಬಾಧ್ಯತೆಯನ್ನು ಕರ್ನಾಟಕದ ಮೇಲೆ ಹೊರಿಸಿತ್ತು. ಅಂದರೆ ನ್ಯಾಯಾಧೀಕರಣದ ತೀರ್ಪಿನಿಂದ 14.75 ಟಿಎಂಸಿ ನೀರನ್ನು ಕಡಿತ ಮಾಡಿತ್ತು.
ಆದರೆ ಈ ಕಡಿತಗೊಳಿಸಿದ ನೀರನ ಪ್ರಮಾಣವನ್ನು ಮಾಸಿಕ ಲೆಕ್ಕಾಚಾರಕ್ಕೆ ಅನುಗುಣವಾಗಿ ಹಂಚುವ ಪ್ರಯತ್ನವನ್ನು ಪ್ರಾಧಿಕಾರದ ಮುಖ್ಯಸ್ಥ ಮಸೂದ್ ಹುಸೇನ್ ನೇತೃತ್ವದಲ್ಲಿ ನಡೆಸಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ 31.24 ಟಿಎಂಸಿ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ.
ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯವು ಜುಲೈನಲ್ಲಿ 31.24 ಟಿಎಂಸಿ ನೀರನ್ನು ಬಿಡುವಂತೆ ತಿಳಿಸಿದೆ. ಕೇಂದ್ರ ಜಲಮಂಡಳಿ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್. ಮಸೂದ್ ಹುಸೇನ್ ನೇತೃತ್ವದಲ್ಲಿ ಸಭೆ ನಡೆದಿದೆ.
ಕಾವೇರಿಯಿಂದ ತಮಿಳುನಾಡಿಗೆ ಯಾವ ತಿಂಗಳಲ್ಲಿ ಎಷ್ಟು ಟಿಎಂಸಿ ನೀರು ಬಿಡಬೇಕು?
ಆಗಸ್ಟ್ನಲ್ಲಿ ಟ್ರಿಬ್ಯುನಲ್ ಪ್ರಕಾರ 50 ಟಿಎಂಸಿ ಹಾಗೂ ಸುಪ್ರೀಂ ಪ್ರಕಾರ 45.95 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು. ಅಕ್ಟೋಬರ್ನಲ್ಲಿ ಟ್ರಿಬ್ಯುನಲ್ ಪ್ರಕಾರ 22 ಟಿಎಂಸಿ ಹಾಗೂ ಸುಪ್ರೀಂಕೋರ್ಟ್ ಪ್ರಕಾರ 20.22 ಟಿಎಂಸಿ ನೀರು ಬಿಡಬೇಕು. ನವೆಂಬರ್ನಲ್ಲಿ ಟ್ರಿಬ್ಯುನಲ್ ಪ್ರಕಾರ 15 ಟಿಎಂಸಿ ಹಾಗೂ ಸುಪ್ರೀಂ ಪ್ರಕಾರ 13.82 ಟಿಎಂಸಿ ನೀರು ಬಿಡಬೇಕಾಗಿದೆ. ಈ ನೀರನ್ನು ಬಿಡುವಂತೆ ಕುಮಾರಸ್ವಾಮಿ ಸೂಚಿಸಿದ್ದಾರೆ.
ಕೆಆರ್ಎಸ್ ಜಲಾಶಯ ಮಟ್ಟ 112.70 ಅಡಿ ಇದೆ, 31490 ಕ್ಯೂಸೆಕ್ಸ್ ಒಳಹರಿವು, 3571 ಕ್ಯೂಸೆಕ್ಸ್ ಹೊರ ಹರಿವಿದೆ, ಜಲಾಶಯದಲ್ಲಿ 34.525 ಟಿಎಂಸಿ ನೀರು ಸಾಮರ್ಥ್ಯ ಹೊಂದಿದೆ, ಈಗ ಜಲಾಶಯದಲ್ಲಿ 26.146 ಟಿಎಂಸಿ ನೀರಿದೆ.