ಕೊರೊನಾವೈರಸ್ ಭಯ ಬಿಡಿ: ಬ್ಯಾಂಕ್ ಉದ್ಯೋಗಿಗಳಿಗೆ ಸಿಹಿಸುದ್ದಿ!
ನವದೆಹಲಿ, ಮಾರ್ಚ್.12: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮಧ್ಯೆ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಉದ್ಯೋಗಿಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಬ್ಯಾಂಕಿನ ಉದ್ಯೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ಕೊವಿಡ್-19 ಲಸಿಕೆಯನ್ನು ನೀಡುವ ವೆಚ್ಚವನ್ನು ಬ್ಯಾಂಕ್ ಭರಿಸುವುದಾಗಿ ಘೋಷಿಸಿದೆ.
ಹೆಚ್ ಡಿಎಫ್ ಸಿ ಬ್ಯಾಂಕ್ ಉದ್ಯೋಗಿಗಳು ಮತ್ತು ಅವರ ಕುಟುಂಬದವರು ಸೇರಿದಂತೆ 1 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆಯನ್ನು ಕೊಡಿಸಲಾಗುತ್ತದೆ. ಈ ಹಣವನ್ನು ಬ್ಯಾಂಕ್ ವತಿಯಿಂದಲೇ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
4 ದಿನ ಬ್ಯಾಂಕ್ ರಜೆ: ಮಾರ್ಚ್ 15 ಮತ್ತು 16ರಂದು ಭಾರತ್ ಬಂದ್
ಕೊರೊನಾವೈರಸ್ ಸೋಂಕಿನಿಂದ ರಕ್ಷಣೆ ಪಡೆಯುವುದಕ್ಕೆ ಎರಡು ಹಂತದಲ್ಲಿ ಲಸಿಕೆಯನ್ನು ನೀಡಲಾಗುತ್ತದೆ. ಈ ಎರಡು ಡೋಸ್ ಕೊವಿಡ್-19 ಲಸಿಕೆಯ ವಿತರಣೆಗೆ ತಗಲುವ ವೆಚ್ಚವನ್ನು ಹೆಚ್ ಡಿಎಫ್ ಸಿ ಪ್ರಾಯೋಜತ್ವದಲ್ಲಿ ನೀಡಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಉದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಲು ಉಚಿತ ಕೊರೊನಾ ಲಸಿಕೆ
"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮಧ್ಯೆ ಹೆಚ್ ಡಿಎಫ್ ಸಿ ಬ್ಯಾಂಕ್ ಉದ್ಯೋಗಿಗಳು ತಮ್ಮ ವೃತ್ತಿಪರತೆಯನ್ನು ತೋರಿದ್ದಾರೆ. ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಮೂಲಕ ಪರಿಶ್ರಮ ಪಟ್ಟಿದ್ದಾರೆ. ಅಂಥ ಉದ್ಯೋಗಿಗಳು ಮತ್ತು ಅವರನ್ನು ಅವಲಂಬಿಸಿರುವ ಕುಟುಂಬ ಸದಸ್ಯರಿಗೆ ಕೃತಜ್ಞತೆಯ ಸೂಚಕವಾಗಿ ಸಂಸ್ಥೆಯ ಸಣ್ಣ ಕೊಡುಗೆಯನ್ನು ನೀಡುತ್ತಿದೆ. ಕೊರೊನಾವೈರಸ್ ಲಸಿಕೆಯ ವೆಚ್ಚವನ್ನು ಸಂಸ್ಥೆಯು ಭರಿಸಲಿದೆ" ಎಂದು ಹೆಚ್ ಡಿಎಫ್ ಸಿ ಬ್ಯಾಂಕಿನ ಗ್ರೂಪ್ ಮುಖ್ಯಸ್ಥ ವಿನಯ್ ರಜ್ದಾನ್ ತಿಳಿಸಿದ್ದಾರೆ.
ಲಾಕ್ ಡೌನ್ ನಲ್ಲೂ ಬ್ಯಾಂಕ್ ಉದ್ಯೋಗಿಗಳಿಂದ ಸೇವೆ
ಹೆಚ್ ಡಿಎಫ್ ಸಿ ಬ್ಯಾಂಕಿನ ಎಲ್ಲಾ ಉದ್ಯೋಗಿಗಳು ಮುಂಚೂಣಿ ಕಾರ್ಮಿಕರಂತೆ ಕಾರ್ಯ ನಿರ್ವಹಿಸಿದ್ದಾರೆ. ಅವರು ಭಾರತ ಲಾಕ್ ಡೌನ್ ಸಮಯದಲ್ಲೂ ಸಹ ಬ್ಯಾಂಕಿಂಗ್ನಂತಹ ಅಗತ್ಯ ಸೇವೆಗಳು ಗ್ರಾಹಕರಿಗೆ ಲಭ್ಯವಾಗುವಂತೆ ನೋಡಿಕೊಂಡಿದ್ದಾರೆ. ಅವರ ಆರೋಗ್ಯ ಮತ್ತು ಸುರಕ್ಷತೆಗಾಗಿ, ನಮ್ಮ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರನ್ನು ಚುಚ್ಚುಮದ್ದು ಮತ್ತು ಕೊವಿಡ್-19 ನಿಂದ ರಕ್ಷಿಸಲಾಗುವುದು ಎಂದು ಎಚ್ಡಿಎಫ್ಸಿ ಬ್ಯಾಂಕಿನ ಗ್ರೂಪ್ ಹೆಡ್ ಆಶಿಮಾ ಭಟ್ ತಿಳಿಸಿದ್ದಾರೆ.
ಡೆನ್ಮಾರ್ಕ್, ಇಟಲಿಯಲ್ಲಿ ಆಸ್ಟ್ರಾಜೆನಿಕಾ ಕೊರೊನಾ ಲಸಿಕೆ ವಿತರಣೆ ಸ್ಥಗಿತ!
ಐಸಿಐಸಿಐ ಬ್ಯಾಂಕ್ ಉದ್ಯೋಗಿಗಳಿಗೆ ಕೊರೊನಾವೈರಸ್ ಲಸಿಕೆ
ಹೆಚ್ ಡಿಎಫ್ ಸಿ ಬ್ಯಾಂಕ್ ಈ ಘೋಷಣೆ ನೀಡುವುದಕ್ಕೂ ಮೊದಲೇ ಐಸಿಐಸಿಐ ಬ್ಯಾಂಕ್ ಈ ಬಗ್ಗೆ ಘೋಷಿಸಿತ್ತು. ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಲಸಿಕೆ ನೀಡಲು ಅಗತ್ಯವಿರುವ ಹಣ ನೀಡುವುದಾಗಿ ಹೇಳಿತ್ತು. ಐಸಿಐಸಿಐ ಬ್ಯಾಂಕಿನ 1 ಲಕ್ಷ ಉದ್ಯೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ಲಸಿಕೆ ನೀಡುವುದರ ಖರ್ಚುನ್ನು ಸಂಸ್ಥೆ ಭರಿಸಲಿದೆ ಎಂದು ತಿಳಿಸಿತ್ತು. ಐಸಿಐಸಿಐ ಬ್ಯಾಂಕ್ ಅಷ್ಟೇ ಅಲ್ಲದೇ ಹಲವು ಕಾರ್ಪೋರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲಸಿಕೆ ಕೊಡಿಸುವುದರ ಖರ್ಚು ಭರಿಸುವುದಕ್ಕೆ ಈಗಾಗಲೇ ನಿರ್ಧರಿಸಿದ್ದು, ಈ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆಯನ್ನೂ ನೀಡಿವೆ.
ದೇಶದಲ್ಲಿ ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆ ವಿತರಣೆ
ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಕಳೆದ ಜನವರಿ.16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲು ಕೊರೊನಾವೈರಸ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಅಂದು ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ವಿತರಿಸಲು ಆರಂಭಿಸಲಾಗಿತ್ತು. ಎರಡನೇ ಹಂತದ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಮಾರ್ಚ್.01ರಿಂದ ಆರಂಭವಾಗಿತ್ತು.