ಕಸಾಯಿಖಾನೆ ಮುಚ್ಚಿ, ಆಹಾರ ಹಕ್ಕು ಕಸಿದುಕೊಂಡಿದ್ದೇಕೆ? : ಯೋಗಿಗೆ ಪ್ರಶ್ನೆ
ಆಹಾರಕ್ರಮದ ಆಯ್ಕೆ, ಕಸಾಯಿಖಾನೆ ಮುಚ್ಚಿದ್ದರಿಂದ ಉಂಟಾಗಿರುವ ಆಹಾರಕ್ಷಾಮದ ಬಗ್ಗೆ ಮುಂದಿನ 10ದಿನದೊಳಗೆ ಉತ್ತರಿಸುವಂತೆ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಲಕ್ನೋ, ಏಪ್ರಿಲ್ 05: ಪ್ರಜೆಗಳು ತಮಗೆ ಬೇಕಾದ ಆಹಾರಕ್ರಮದ ಆಯ್ಕೆಮಾಡಿಕೊಳ್ಳುವುದು ಮತ್ತು ಆಹಾರ ಪದಾರ್ಥಗಳ ವ್ಯಾಪಾರ ಅವರವರ ಬದುಕಿನ ಹಕ್ಕಾಗಿದೆ, ಕಸಾಯಿಖಾನೆ ಮುಚ್ಚಿದ್ದರಿಂದ ಆಹಾರ ಕೊರತೆ ಉಂಟಾಗಿದೆ. ಈ ಬಗ್ಗೆ ಉತ್ತರ ನೀಡಿ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಬುಧವಾರದಂದು ಪ್ರಶ್ನೆ ಹಾಕಿದೆ.
ಮುಂದಿನ 10ದಿನದೊಳಗೆ ಉತ್ತರಿಸುವಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಸೂಚಿಸಿದೆ. ತನ್ನ ಮಾಂಸದಂಗಡಿಯ ಪರವಾನಿಗೆಯನ್ನು ನವೀಕರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವ್ಯಾಪಾರಿಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಉತ್ತರಪ್ರದೇಶದಲ್ಲಿ ಹಲವು ಆಹಾರ ಸಂಸ್ಕೃತಿಯಿದೆ. ಇದು ರಾಜ್ಯದ ಜಾತ್ಯಾತೀತ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಮಾಂಸವನ್ನು ನಿಷೇಧಿಸುವ ಅಥವಾ ಎಲ್ಲಾ ಕಸಾಯಿಖಾನೆಗಳನ್ನೂ ನಿಷೇಧಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿಲ್ಲ. ಸುಪ್ರೀಂಕೋರ್ಟಿನ ಆದೇಶದಂತೆ ಅಕ್ರಮ ಕಸಾಯಿಖಾನೆಗಳನ್ನು ನಿಷೇಧಿಸಿ, ಕಸಾಯಿಖಾನೆಗಳ ಚಟುವಟಿಕೆಯನ್ನು ಕ್ರಮಬದ್ಧಗೊಳಿಸಲಾಗುತ್ತಿದೆ ಎಂದು ಸರ್ಕಾರಿ ವಕೀಲರು ಕೋರ್ಟಿಗೆ ತಿಳಿಸಿದರು.
ಪರವಾನಿಗೆಯನ್ನು ನವೀಕರಣ ವಿಳಂಬ ಕುರಿತಂತೆ ಹಲವಾರು ಮಂದಿ ಅರ್ಜಿ ಸಲ್ಲಿಸಿದ್ದು ಈ ಎಲ್ಲಾ ಅರ್ಜಿಗನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಲು ಹೈಕೋರ್ಟ್ ನಿರ್ಧರಿಸಿದೆ. ಮುಂದಿನ ವಿಚಾರಣೆಯನ್ನು ಎಪ್ರಿಲ್ 13ಕ್ಕೆ ನಿಗದಿಗೊಳಿಸಲಾಗಿದೆ.