ಹತ್ರಾಸ್ಗೆ ಹೊರಟಿದ್ದ ರಾಹುಲ್, ಪ್ರಿಯಾಂಕಾ ಬಂಧನ
ನೋಯ್ಡಾ, ಅಕ್ಟೋಬರ್ 1: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಪ್ರಕರಣದ ಘಟನೆ ಖಂಡಿಸಿ ಘಟನೆ ನಡೆದ ಊರಿಗೆ ತೆರಳಲು ಪ್ರಯತ್ನಿಸಿದ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸೆಕ್ಷನ್ 188ರ ಅಡಿ ರಾಹುಲ್ ಗಾಂಧಿ ಅವರನ್ನು ಬಂಧಿಸಲಾಗಿದೆ. ತಮ್ಮೊಂದಿಗೆ ಪ್ರಿಯಾಂಕಾ ಗಾಂಧಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ ಎಂದು ರಾಹುಲ್ ತಿಳಿಸಿದ್ದಾರೆ.
ಹತ್ರಾಸ್ನಲ್ಲಿನ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕರು ತೆರಳಿದ್ದಾಗ ಅವರನ್ನು ಯಮುನಾ ಎಕ್ಸ್ಪ್ರೆಸ್ ವೇ ಬಳಿ ತಡೆದು ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರಿಗೂ ಕಾಂಗ್ರೆಸ್ ನಾಯಕರಿಗೂ ಮಾತಿನ ಚಕಮಕಿ ನಡೆಯಿತು. ಹತ್ರಾಸ್ನಲ್ಲಿ ಸೆಕ್ಷನ್ 144 ಜಾರಿ ಮಾಡಿರುವುದರಿಂದ ಅಲ್ಲಿಗೆ ತೆರಳುವಂತಿಲ್ಲ ಎಂದು ಪೊಲೀಸರು ತಡೆಯೊಡ್ಡಿದ್ದರು.
ಹೀಗಾಗಿ ವಾಹನದಿಂದ ಇಳಿದ ರಾಹುಲ್ ಗಾಂಧಿ ಮತ್ತು ಇತರೆ ನಾಯಕರು ನೋಯ್ಡಾದಿಂದ ಸುಮಾರು 160 ಕಿ.ಮೀ. ಇರುವ ಹತ್ರಾಸ್ಗೆ ಮೆರವಣಿಗೆ ಮೂಲಕ ತಲುಪುವುದಾಗಿ ಹೇಳಿದರು. ಆ ಸಂದರ್ಭದಲ್ಲಿ ಪೊಲೀಸರು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿದ್ದಾರೆ. ಮುಂದೆ ಓದಿ.
ಕಾನೂನು ಉಲ್ಲಂಘಿಸಿದ್ದಾರೆ
'ನಾವು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಇಲ್ಲಿ ತಡೆದಿದ್ದೆವು. ಎಪಿಡಮಿಕ್ ಕಾಯ್ದೆಯ ಉಲ್ಲಂಘನೆಯಾಗುತ್ತಿತ್ತು. ಹೀಗಾಗಿ ಅವರು ಮುಂದುವರಿಯಲು ನಾವು ಅವಕಾಶ ನೀಡುವುದಿಲ್ಲ' ಎಂದು ನೋಯ್ಡಾ ಎಡಿಸಿಪಿ ರಣ್ವಿಜಯ್ ಸಿಂಗ್ ಹೇಳಿದರು.
ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ
ಈ ವೇಳೆ ರಾಹುಲ್ ಗಾಂಧಿ ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ತಮ್ಮನ್ನು ಯಾವ ನಿಯಮದಡಿ ಬಂಧಿಸಲಾಗಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಇದಕ್ಕೂ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪೊಲೀಸರು ಲಾಠಿ ಚಾರ್ಜ್ ನಡೆಸಿ ತಮ್ಮನ್ನು ನೆಲಕ್ಕೆ ತಳ್ಳಿದರು ಎಂದು ಆರೋಪಿಸಿದ್ದರು.
ಮೋದಿ ಮಾತ್ರ ಓಡಾಡಬೇಕೇ?
'ಈಗಷ್ಟೇ ಪೊಲೀಸರು ನನ್ನನ್ನು ತಳ್ಳಾಡಿದರು. ನನ್ನ ಮೇಲೆ ಲಾಠಿ ಚಾರ್ಜ್ ನಡೆಸಿದರು. ನೆಲಕ್ಕೆ ತಳ್ಳಿದರು ಕೂಡ. ಈ ದೇಶದಲ್ಲಿ ಮೋದಿ ಅವರು ಮಾತ್ರ ನಡೆಯಬೇಕೇ? ಸಾಮಾನ್ಯ ಜನರು ಇಲ್ಲಿ ಓಡಾಡಬಾರದೇ? ನಮ್ಮ ವಾಹನವನ್ನು ತಡೆಯಲಾಗಿದೆ. ಹೀಗಾಗಿ ನಾವು ನಡೆದುಕೊಂಡೇ ಹೋಗುತ್ತಿದ್ದೇವೆ' ಎಂದು ರಾಹಲ್ ಗಾಂಧಿ ಹೇಳಿದ್ದರು.
ಒಬ್ಬನೇ ನಡೆದುಕೊಂಡು ಹೋಗುತ್ತೇನೆ
ರಾಹುಲ್ ಗಾಂಧಿ ಮತ್ತು ಪೊಲೀಸರ ನಡುವೆ ನಡೆದ ವಾಗ್ಯುದ್ಧ ವಿಡಿಯೋಗಳಲ್ಲಿ ದಾಖಲಾಗಿದೆ. 'ನಾನು ಒಬ್ಬನೇ ಹತ್ರಾಸ್ಗೆ ನಡೆದುಕೊಂಡು ಹೋಗಲು ಬಯಸಿದ್ದೇನೆ. ನನ್ನನ್ನು ಯಾವ ಸೆಕ್ಷನ್ ಅಡಿ ಬಂಧಿಸುತ್ತಿದ್ದೀರಿ ಎಂದು ಹೇಳುತ್ತೀರಾ?' ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಅದಕ್ಕೆ ಪೊಲೀಸರು 'ನಿಮ್ಮನ್ನು ಐಪಿಸಿ ಸೆಕ್ಷನ್ 188ರ ಅಡಿ ಆದೇಶ ಉಲ್ಲಂಘನೆ ಮಾಡಿದ್ದಕ್ಕಾಗಿ ಬಂಧಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.