ಎಷ್ಟೇ ಗೋಳಾಡಿದರೂ ಸತ್ತವರು ವಾಪಸ್ ಬರುವುದಿಲ್ಲ; ವಿವಾದ ಸೃಷ್ಟಿಸಿದ ಹರಿಯಾಣ ಸಿಎಂ ಹೇಳಿಕೆ
ಹರಿಯಾಣ, ಏಪ್ರಿಲ್ 28: ಹರಿಯಾಣದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈ ನಡುವೆ ಹರಿಯಾಣ ಸಿಎಂ ಮನೋಹರ್ ಲಾಲ್ ಖತ್ತಾರ್, ಕೊರೊನಾದಿಂದಾಗಿ ಸಂಭವಿಸುತ್ತಿರುವ ಸಾವಿನ ಕುರಿತು ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.
"ಕೊರೊನಾದಿಂದ ಎಷ್ಟು ಮಂದಿ ಸತ್ತಿದ್ದಾರೆ ಎಂಬುದನ್ನೇ ಪದೇ ಪದೇ ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಬಿಕ್ಕಟ್ಟಿನಲ್ಲಿ ನಾವು ಅಂಕಿ ಸಂಖ್ಯೆಯ ಗೀಳು ಇಟ್ಟುಕೊಳ್ಳಬಾರದು. ಸದ್ಯಕ್ಕೆ ಸೋಂಕಿನಿಂದ ಜನರನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತಷ್ಟೇ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಜೊತೆಗೆ, "ನಾವು ಎಷ್ಟೇ ಗೋಳಾಡಿದರೂ ಸತ್ತವರು ಯಾರೂ ವಾಪಸ್ ಬರುವುದಿಲ್ಲ. ನಾವು ಜನರನ್ನು ಸೋಂಕಿನಿಂದ ರಕ್ಷಿಸಲು ಏನೇನು ಪರ್ಯಾಯ ಮಾರ್ಗವಿದೆಯೋ ಅವನ್ನೆಲ್ಲಾ ಪ್ರಯತ್ನಿಸುತ್ತಿದ್ದೇವೆ. ನಮಗೆ ಎಲ್ಲರ ಬೆಂಬಲ ಬೇಕು" ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
"ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮೋದಿಯವರ ಚಿತ್ರಹಿಂಸೆಯಿಂದ ಸಾವನ್ನಪ್ಪಿದರು"
ಆಮ್ಲಜನಕ ಪೂರೈಕೆಗೆ ತನ್ನೆಲ್ಲಾ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಸದ್ಯಕ್ಕೆ ವೈದ್ಯಕೀಯ ಆಮ್ಲಜನಕದ ಕೋಟಾವನ್ನು 162 ಮೆಟ್ರಿಕ್ ಟನ್ನಿಂದ 240 ಮೆಟ್ರಿಕ್ ಟನ್ ಗೆ ಹೆಚ್ಚಿಸುವ ಪ್ರಯತ್ನದಲ್ಲಿದೆ. ಇದುವರೆಗೂ ರಾಜ್ಯದಲ್ಲಿ ಆಮ್ಲಜನಕ ಬಿಕ್ಕಟ್ಟು ಎದುರಾಗಿಲ್ಲ. ಸದ್ಯದ ಪರಿಸ್ಥಿತಿಯನ್ನು ಗಮನಿಸಿ ನಮ್ಮ ಆಮ್ಲಜನಕ ಕೋಟಾವನ್ನು ಹೆಚ್ಚಿಸಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.
ಹರಿಯಾಣದಲ್ಲಿ ಇದುವರೆಗೂ 4,31,981 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 3842 ಸಾವುಗಳು ಸಂಭವಿಸಿವೆ. ಸದ್ಯಕ್ಕೆ 79,466 ಸಕ್ರಿಯ ಪ್ರಕರಣಗಳಿವೆ.