ಕುಂಭಮೇಳಕ್ಕೆ ಜಮಾಯಿಸಿದ ಲಕ್ಷಾಂತರ ಜನ; ಎರಡೇ ದಿನದಲ್ಲಿ ಕೊರೊನಾ ಏರಿಕೆ
ನವದೆಹಲಿ, ಏಪ್ರಿಲ್ 12: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಕೊರೊನಾ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ. ದಿನನಿತ್ಯದ ಕೊರೊನಾ ಪ್ರಕರಣಗಳು ಒಂದೂವರೆ ಲಕ್ಷದ ಗಡಿಯನ್ನು ದಾಟಿದೆ. ಈ ನಡುವೆ ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದಾರೆ. ಜೊತೆಗೆ ಹರಿದ್ವಾರದಲ್ಲಿ ಕೊರೊನಾ ಪ್ರಕರಣಗಳಲ್ಲೂ ಏರಿಕೆ ಕಂಡುಬಂದಿರುವುದು ಆತಂಕ ಮೂಡಿಸಿದೆ.
ಮಂಗಳವಾರ ಹರಿದ್ವಾರದಲ್ಲಿ 594 ಹೊಸ ಪ್ರಕರಣಗಳು ದಾಖಲಾಗಿವೆ. ಮಹಾಕುಂಭದ 13ನೇ ದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸೋಮವಾರ ಗಂಗಾ ಸ್ನಾನ ಮಾಡಿದ್ದಾರೆ. ಈ ಬೆನ್ನಲ್ಲೇ ನಗರದಲ್ಲಿ ಕೊರೊನಾ ಪ್ರಕರಣಗಳು ದಿಢೀರ್ ಏರಿಕೆಯಾಗಿವೆ. ಸೋಮವಾರ ಹರಿದ್ವಾರದಲ್ಲಿ 408 ಹೊಸ ಕೊರೊನಾ ಪ್ರಕರಣಗಳು ಕಂಡುಬಂದಿದ್ದರೆ, ಮಂಗಳವಾರ ಈ ಸಂಖ್ಯೆ 594ಕ್ಕೆ ಏರಿಕೆಯಾಗಿದೆ. ಉತ್ತರಾಖಂಡದಲ್ಲಿ ಕಳೆದ 24 ಗಂಟೆಗಳಲ್ಲಿ 1925 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 13 ಸಾವು ಸಂಭವಿಸಿದೆ.
ಕೊರೊನಾವೈರಸ್ ಹೆಚ್ಚಿಸುವ ಆತಂಕ ಸೃಷ್ಟಿಸಿದ ಕುಂಭಮೇಳ!
ಸೋಮವಾರ ಶಾಹಿ ಸ್ನಾನದಲ್ಲಿ ಕೇಂದ್ರದ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಭಕ್ತರು ಲಕ್ಷಾಂತರ ಭಾಗವಹಿಸಿದ್ದರು. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಪಾಲಿಸದೇ ಇರುವುದು ಕಂಡುಬಂದಿದೆ. ಹರ್ ಕೀ ಪೌರ್ ಘಾಟ್ ಬಳಿ ಸಾವಿರಾರು ಭಕ್ತರು ಶಾಹಿ ಸ್ನಾನ್(ಪುಣ್ಯ ಸ್ನಾನ) ಸಂದರ್ಭ ಕೊರೊನಾ ಸೋಂಕಿನ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕೊರೊನಾವೈರಸ್ ಹರಡುವಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ, ಕುಂಭಮೇಳಕ್ಕೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರು 72 ಗಂಟೆಗಳಿಗೂ ಮೊದಲು ಕೊವಿಡ್-19 ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಹೊಂದಿರಬೇಕು ಎಂದು ಉತ್ತರಾಖಂಡ್ ಹೈಕೋರ್ಟ್ ಮೊದಲೇ ಆದೇಶ ನೀಡಿದೆ. ಈ ಎಲ್ಲಾ ಕ್ರಮಗಳ ನಡುವೆಯೂ ಕೊರೊನಾ ಪ್ರಕರಣಗಳು ಏರಿಕೆಯಾಗಿವೆ.
12 ವರ್ಷಗಳಿಗೆ ಒಂದು ಬಾರಿ ನಡೆಯುವ ಕುಂಭಮೇಳ ಸಾಮಾನ್ಯವಾಗಿ 4 ತಿಂಗಳವರೆಗೆ ನಡೆಯುತ್ತದೆ. ಆದರೆ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಏಪ್ರಿಲ್ 1 ರಿಂದ 30ರವರೆಗೆ ಮಾತ್ರ ಕುಂಭಮೇಳ ನಡೆಸುವುದಕ್ಕೆ ಅನುಮತಿ ನೀಡಲಾಗಿದೆ.
ಈ ನಡುವೆ ಕುಂಭಮೇಳ ಆಯೋಜನೆಗೆ ಆಕ್ಷೇಪ ವ್ಯಕ್ತವಾಗಿದ್ದು, ಕುಂಭಮೇಳ ಕೊರೊನಾ ಸ್ಫೋಟಕ್ಕೆ ಕಾರಣವಾಗಬಹುದು. ಈ ಹಿಂದೆ ನಿಜಾಮುದ್ದೀನ್ ಸಭೆಯಲ್ಲಿಯೂ ಹೀಗೇ ಆಗಿತ್ತು ಎಂಬ ಟೀಕೆ ಕೇಳಿಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಉತ್ತರಾಖಂಡ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್, ಕುಂಭಮೇಳವನ್ನು ನಿಜಾಮುದ್ದೀನ್ ಮಾರ್ಕಜ್ಗೆ ಹೋಲಿಸಬೇಡಿ. ನಿಜಾಮುದ್ದಿನ್ ಸಭೆಯನ್ನು ಇಕ್ಕಟ್ಟಿನ ಜಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ವಿದೇಶಿಯರು ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆದರೆ ಕುಂಭಮೇಳದಲ್ಲಿ ಹಾಗಿಲ್ಲ ಎಂದು ಹೇಳಿದ್ದಾರೆ.