ಹರಿದ್ವಾರ ದ್ವೇಷ ಭಾಷಣ ಪ್ರಕರಣ: ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ನೋಟಿಸ್
ಉತ್ತರಾಖಂಡ, ಜನವರಿ 12: ಹರಿದ್ವಾರ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಆದರೆ ಮುಂಬರುವ ಧರ್ಮ ಸಂಸದ್ ಕಾರ್ಯಕ್ರಮಗಳಿಗೆ ತಡೆ ನೀಡಿಲ್ಲ.
ಇಂತಹ ಕೂಟಗಳ ವಿರುದ್ಧ ಕ್ರಮ ಕೈಗೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಹಿಂದಿನ ತೀರ್ಪುಗಳಲ್ಲಿ ಆದೇಶ ಹೊರಡಿಸಲಾಗಿತ್ತು. ಆದರೆ ನೋಡಲ್ ಅಧಿಕಾರಿಯನ್ನು ನೇಮಿಸಿಲ್ಲ, ಸುಪ್ರೀಂ ಕೋರ್ಟ್ನ ಆದೇಶ ಪಾಲನೆಯಾಗುತ್ತಿಲ್ಲ ಎಂದು ಪ್ರಕರಣದ ಅರ್ಜಿದಾರರು ಗಮನ ಸೆಳೆದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಹೆಚ್ಚಿನ ಧರ್ಮ ಸಂಸದ್ ಘೋಷಿಸಲಾಗಿದೆ. ಮುಂದಿನ ಸಂಸದ್ಗೂ ಮುನ್ನ ಏನಾದರೂ ಮಾಡಲೇಬೇಕು ಎಂದು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದರು.
"ಡಿಸೆಂಬರ್ 17ರಿಂದ ಡಿಸೆಂಬರ್ 19ರವರೆಗೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಮೂರು ದಿನಗಳ 'ಧರ್ಮ ಸಂಸದ್' ಅಥವಾ ಧಾರ್ಮಿಕ ಸಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಪ್ರಚೋದನಕಾರಿ ಮತ್ತು ಕೋಮುವಾದಿ ಭಾಷಣಗಳನ್ನು ಮಾಡಲಾಗಿದೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಲವಾರು ಹಿಂದೂ ಧಾರ್ಮಿಕ ಮುಖಂಡರು, ಹಿಂದೂ ಸಮುದಾಯಕ್ಕೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದರು. ಮುಸಲ್ಮಾನರ ವಿರುದ್ಧ ಅವರು 'ಹಿಂದೂ ರಾಷ್ಟ್ರ'ದ ಘೋಷಣೆಯನ್ನು ನೀಡಿದ್ದಾರೆ," ಎಂದು ತಿಳಿಸಿದರು.
ಇತ್ತೀಚೆಗೆ ದೆಹಲಿ ಮತ್ತು ಹರಿದ್ವಾರದಲ್ಲಿ ನಡೆದ ಎರಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ 'ದ್ವೇಷ ಭಾಷಣ' ಮತ್ತು 'ಜನಾಂಗೀಯ ನಿರ್ಮೂಲನೆ'ಗೆ ಕರೆ ನೀಡುವುದನ್ನು ಸ್ವಯಂ ಪ್ರೇರಿತವಾಗಿ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ನ 76 ವಕೀಲರು ಈ ಹಿಂದೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರಿಗೆ ಪತ್ರ ಬರೆದಿದ್ದರು.
"ಈ ವಿಷಯವನ್ನು ತುರ್ತಾಗಿ ವಿಚಾರಣೆ ನಡೆಸಬೇಕು. ಉತ್ತರಾಖಂಡ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಉನಾ, ದಸ್ನಾ, ಅಲಿಗಢದಲ್ಲಿ ಹೆಚ್ಚಿನ ಧರ್ಮ ಸಂಸದ್ ಘೋಷಿಸಲಾಗಿದೆ. ಇದು ವಾತಾವರಣವನ್ನು ಕಲುಷಿತಗೊಳಿಸುತ್ತದೆ ಮತ್ತು ಇದು ಹಿಂಸೆಯ ಪ್ರಚೋದನೆಯಾಗಿದೆ," ಎಂದು ಹಿರಿಯ ವಕೀಲ ಸಿಬಲ್ ಬುಧವಾರ ನ್ಯಾಯಾಲಯಕ್ಕೆ ಹೇಳಿದರು.
Recommended Video
ಹರಿದ್ವಾರ ಧರ್ಮ ಸಂಸದ್ನಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷದ ಭಾಷಣಗಳ ಕುರಿತು ತನಿಖೆ ನಡೆಸಬೇಕು. ಅಂತಹ ವಿಷಯವನ್ನು ನಿಖರವಾಗಿ ತಡೆಗಟ್ಟಲು ತಡೆಗಟ್ಟುವ ಬಂಧನ ಕಾನೂನು ಇದೆ ಎಂದು ಅವರು ತಿಳಿಸಿದರು.
ಭಾರತ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರ ತ್ರಿಸದಸ್ಯ ಪೀಠವು ಈ ವಿಷಯವನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ (ಪಿಐಎಲ್) ವಿಚಾರಣೆ ನಡೆಸುತ್ತಿದೆ.