ಪಟೇಲ್ ಸಮುದಾಯದ ಕಣ್ಮಣಿ ಹಾರ್ದಿಕ್ ಪಟೇಲ್ ಗೆ 2 ವರ್ಷ ಜೈಲು ಶಿಕ್ಷೆ
Recommended Video
ಮೆಹ್ಸಾನಾ, ಜುಲೈ 25: 2015 ರ ಪಾಟೀದಾರ್ ಚಳವಳಿಯ ಸಮಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಮತೆ ಈ ಚಳವಳಿಯ ರೂವಾರಿ ಹಾರ್ದಿಕ್ ಪಟೇಲ್ ಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಗುಜರಾತಿನ ಪಟೇಲರಿಗೆ ಮೀಸಲಾತಿ ಏಕೆ ಸಿಗುತ್ತಿಲ್ಲ?
ಗುಜರಾತಿನ ವಿಸ್ನಗರ್ ನ್ಯಾಯಾಲಯ ಅವರನ್ನು ದೋಷಿ ಎಂದು ಪರಿಗಣಿಸಿ, ಈ ಶಿಕ್ಷೆ ನೀಡಿದೆ.
ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಂತೆ 2015ರಲ್ಲಿ ಗುಜರಾತಿನಾದ್ಯಂತ ಹೋರಾಟ ನಡೆಸಿದ್ದ ಹಾರ್ದಿಕ್ ಪಟೇಲ್ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ(PAAS)ಯ ಸಂಚಾಲಕರೂ ಹೌದು.
ಗುಜರಾತ್ ಸರ್ಕಾರ ಅಲ್ಲಾಡಿಸುತ್ತಿರುವ ಹಾರ್ದಿಕ್ ಪಟೇಲ್ ಯಾರು?
2015 ರಲ್ಲಿ ನಡೆದ ಪಟೇಲ್ ಸಮುದಾಯದ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಹಲವು ಹಿಂಸಾಚಾರ ಪ್ರಕರಣಗಳು ನಡೆದಿದ್ದವು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಋಷಿಕೇಶ್ ಪಟೇಲ್ ಅವರ ವಿಸ್ನಗರ ಕಚೇರಿಯನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಅವರನ್ನು ದೋಷಿ ಎಂದು ಪರಿಗಣಿಸಲಾಗಿದೆ. ಎರಡು ವರ್ಷಗಳ ಕಾಲ ಜೈಲು ಶಿಕ್ಷೆಯ ಜೊತೆಗೆ 50,000 ರೂ. ದಂಡ ವಿಧಿಸಲಾಗಿದೆ.
ಈ ಮೊದಲು ಅಕ್ಟೋಬರ್ 26 ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಜಾಮೀನು ಮಂಜೂರಾಗಿತ್ತು.
ಹಾರ್ದಿಕ್ ಜೊತೆ ಇನ್ನಿಬ್ಬರಿಗೆ ಶಿಕ್ಷೆ
ಹಾರ್ದಿಕ್ ಪಟೇಲ್ ಅವರೊಂದಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಲಾಲ್ ಜೀ ಪಟೇಲ್, ಎಕೆ ಪಟೇಲ್ ಅವರನ್ನೂ ದೋಷಿ ಎಂದು ಪರಿಗಣಿಸಿ, ಅವರಿಗೂ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ 50,000 ರೂ. ದಂಡ ವಿಧಿಸಲಾಗಿದೆ.
ಯಾರು ಹಾರ್ದಿಕ್ ಪಟೇಲ್?
ಗುಜರಾತ್ ಸರ್ಕಾರವನ್ನೇ ಅಲ್ಲಾಡಿಸಿದ್ದ 23 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಜೊತೆ ಅಭಿಮಾನಿಗಳ ದಂಡೇ ಇದೆ. ಪಟೇಲ್ ಸಮುದಾಯಕ್ಕೆ ಒಬಿಸಿ(ಇತರ ಹಿಂದುಳಿದ ವರ್ಗ) ಮಾನ್ಯತೆ ಸಿಗಬೇಕು ಎಂಬ ಬೇಡಿಕೆಯೊಂದಿಗೆ ಹೋರಾಟ ಆರಂಭಿಸಿದ ಪಟೇಲ್ ನಂತರ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ, ರಾಜಕೀಯ ನಾಯಕರಾಗಿಯೂ ಬೆಳೆದರು.ಪಾಟೀದಾರ್ ಸಮುದಾಯಕ್ಕೆ ಸರ್ಕಾರಿ ಕೆಲಸ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕು ಎಂದು ಆರಂಭವಾದ ಹೋರಾಟ ವಿಕೋಪಕ್ಕೆ ತೆರಳಿ ಹಿಂಸಾಚಾರವಾಗಿ ಬದಲಾಗಿತ್ತು. 2015 ರ ಈ ಘಟನೆಯಲ್ಲಿ 14 ಜನ ಮೃತರಾಗಿದ್ದರು.
ಅಭಿನವ ಮೋದಿ!
ಋಷಿಕೇಶ್ ಪಟೇಲ್ ಕಚೇರಿ ಮೇಲೆ ದಾಳಿ ನಡೆಸಿ, ದಾಂಧಲೆ ನಡೆಸಿದ ಪ್ರಕರಣ ಮತ್ತು ಅನುಮತಿ ಪಡೆಯದೆ ಹಲವೆಡೆ ಜಾಥಾ ನಡೆಸಿದ ಪ್ರಕರಣ ಸೇರಿದಂತೆ ಕೆಲವು ಪ್ರಕರಣಗಳನ್ನು ಹಾರ್ದಿಕ್ ಪಟೇಲ್ ಎದುರಿಸುತ್ತಿದ್ದಾರೆ. ಒಂದು ಹಂತದಲ್ಲಿ ಅಭಿನವ ಮೋದಿ ಎಂದೇ ಕರೆಸಿಕೊಂಡ ಹಾರ್ದಿಕ್ ಪಟೇಲ್ 2018 ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡಬಹುದು ಎಂದು ಅಂದಾಜಿಸಲಾಗಿತ್ತಾದರೂ, ಅವರು ಬಹಿರಂಗವಾಗಿ ಯಾರನ್ನೂ ಬೆಂಬಲಿಸದೆ ತಟಸ್ಥವಾಗಿ ಉಳಿದರು.
ಉಪವಾಸ ಸತ್ಯಾಗ್ರಹಕ್ಕೆ ಸಿದ್ಧರಾಗಿದ್ದ ಹಾರ್ದಿಕ್!
ಏಕಾ ಏಕಿ ಇಡೀ ಗುಜರಾತಿನ ಪಟೇಲ್ ಸಮುದಾಯದ ಕಣ್ಮಣಿಯಾಗಿ ನಿಂತಿರುವ ಹಾರ್ದಿಕ್ ಪಟೇಲ್ ಅವರಿಗೆ ಜೈಲು ಶಿಕ್ಷೆಯಾಗಿರುವ ಕುರಿತು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ, ಆಗಸ್ಟ್ 25 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ಹಾರ್ದಿಕ್ ಪಟೇಲ್ ನಿರ್ಧರಿಸಿದ್ದರು.