ಹರ್ ಘರ್ ತಿರಂಗಾ: ಇದುವರೆಗೆ ಅಂಚೆ ಇಲಾಖೆ ಮಾರಿದ ಧ್ವಜಗಳೆಷ್ಟು?
ನವದೆಹಲಿ, ಆಗಸ್ಟ್ 12: ಕೇವಲ ಹತ್ತು ದಿನಗಳ ಅಲ್ಪಾವಧಿಯಲ್ಲಿ ಭಾರತೀಯ ಅಂಚೆ ಇಲಾಖೆ ತನ್ನ 1.5 ಲಕ್ಷ ಅಂಚೆ ಕಚೇರಿಗಳು ಮತ್ತು ಆನ್ಲೈನ್ ಮೂಲಕ ನಾಗರಿಕರಿಗೆ 1 ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಿದೆ ಎಂದು ಮಾಹಿತಿ ಸಚಿವಾಲಯ ತಿಳಿಸಿದೆ.
1.5 ಲಕ್ಷ ಅಂಚೆ ಕಚೇರಿಗಳ ಸರ್ವವ್ಯಾಪಿ ಜಾಲದೊಂದಿಗೆ ಅಂಚೆ ಇಲಾಖೆ ದೇಶದ ಪ್ರತಿಯೊಬ್ಬ ನಾಗರಿಕರಿಗೂ 'ಹರ್ ಘರ್ ತಿರಂಗ' ಕಾರ್ಯಕ್ರಮವನ್ನು ಕೊಂಡೊಯ್ದಿದೆ. 10 ದಿನಗಳ ಅಲ್ಪಾವಧಿಯಲ್ಲಿ ಅಂಚೆ ಕಚೇರಿಗಳು ಮತ್ತು ಆನ್ಲೈನ್ ಮೂಲಕ ಭಾರತೀಯ ಅಂಚೆ 1 ಕೋಟಿಗೂ ಹೆಚ್ಚು ರಾಷ್ಟ್ರೀಯ ಧ್ವಜಗಳನ್ನು ಮಾರಾಟ ಮಾಡಿದೆ ಎಂದು ತಿಳಿಸಿದೆ.
'ಹರ್ ಘರ್ ತಿರಂಗಾ' ಹವಾ: ತಿರಂಗಾ ನಡೆಗೆ ಜೋಶಿ ಚಾಲನೆ
ಒಂದು ಧ್ವಜಕ್ಕೆ ಅಂಚೆ ಇಲಾಖೆಯು 25 ರೂ.ಗಳ ಬೆಲೆಗೆ ಮಾರಾಟ ಮಾಡಿದೆ. ಆನ್ಲೈನ್ ಮೂಲಕ ಅಂಚೆ ಇಲಾಖೆಯು ದೇಶಾದ್ಯಂತ ಯಾವುದೇ ವಿಳಾಸಕ್ಕೆ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸುವ ಸೇವೆ ಒದಗಿಸಿದೆ. ಇ ಪೋಸ್ಟ್ ಆಫೀಸ್ ಸೌಲಭ್ಯದ ಮೂಲಕ ನಾಗರಿಕರು 1.75 ಲಕ್ಷಕ್ಕೂ ಹೆಚ್ಚು ಧ್ವಜಗಳನ್ನು ಆನ್ಲೈನ್ನಲ್ಲಿ ಖರೀದಿಸಿದ್ದು, ಅಂಚೆ ಇಲಾಖೆಯು ತ್ರಿವರ್ಣ ಧ್ವಜವನ್ನು 25 ರೂ.ಗೆ ಮಾರಾಟ ಮಾಡುತ್ತಿದೆ ಸಚಿವಾಲಯ ಹೇಳಿದೆ.
ಪರ್ವತ, ಬುಡಕಟ್ಟು ಪ್ರದೇಶಗಳಿಗೂ ಧ್ವಜ ಮಾರಾಟ
ದೇಶಾದ್ಯಂತ 4.2 ಲಕ್ಷ ಅಂಚೆ ನೌಕರರು ವಿವಿಧ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ, ಗಡಿ ಪ್ರದೇಶಗಳಲ್ಲಿ, ಜಿಲ್ಲೆಗಳಲ್ಲಿ ಮತ್ತು ಪರ್ವತ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ "ಹರ್ ಘರ್ ತಿರಂಗ" ಸಂದೇಶವನ್ನು ಉತ್ಸಾಹದಿಂದ ಪ್ರಚಾರ ಮಾಡಿದ್ದಾರೆ ಎಂದು ಇಲಾಖೆ ಹೇಳಿದೆ. ಪ್ರಭಾತ್ ಫೆರಿಸ್, ಬೈಕ್ ರ್ಯಾಲಿ ಮತ್ತು ಚೌಪಲ್ಸ್ ಸಭೆಗಳ ಮೂಲಕ ಇಂಡಿಯಾ ಪೋಸ್ಟ್ ಸಮಾಜದ ಪ್ರತಿಯೊಂದು ವರ್ಗಕ್ಕೂ "ಹರ್ ಘರ್ ತಿರಂಗ" ಸಂದೇಶವನ್ನು ಕೊಂಡೊಯ್ದಿದೆ. ಡಿಜಿಟಲ್ ಸಂಪರ್ಕಿತ ನಾಗರಿಕರಲ್ಲಿ ಕಾರ್ಯಕ್ರಮದ ಸಂದೇಶವನ್ನು ಹರಡಲು ಟ್ವಿಟರ್ ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮ ಸಾಧನಗಳನ್ನು ವ್ಯಾಪಕವಾಗಿ ಬಳಸಲಾಗಿದೆ ಎಂದು ಹೇಳಿಕೊಂಡಿದೆ.
ಇ- ಪೋಸ್ಟ್ ಆಫೀಸ್ನಲ್ಲೂ ಖರೀದಿಸಬಹುದು
ಎಲ್ಲ ದಿನಗಳಲ್ಲಿಯೂ ಅಂಚೆ ಕಚೇರಿಗಳ ಮೂಲಕ ರಾಷ್ಟ್ರಧ್ವಜದ ಮಾರಾಟವು 15 ಆಗಸ್ಟ್ 2022 ರವರೆಗೆ ತೆರೆದಿರುತ್ತದೆ. ನಾಗರಿಕರು ಹತ್ತಿರದ ಅಂಚೆ ಕಚೇರಿಗಳಿಗೆ ನಡೆದುಕೊಂಡು ಹೋಗಬಹುದು ಅಥವಾ ಇ- ಪೋಸ್ಟ್ ಆಫೀಸ್ (epostoffice.gov.in) ಗೆ ಭೇಟಿ ನೀಡಿ ರಾಷ್ಟ್ರಧ್ವಜವನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ "ಹರ್ ಘರ್ ತಿರಂಗ" ಅಭಿಯಾನದ ಭಾಗವಾಗಬಹುದಾಗಿದೆ. ನಾಗರಿಕರು ಇವರೊಂದಿಗೆ ಸೆಲ್ಫಿ ತೆಗೆದುಕೊಂಡು ಧ್ವಜವನ್ನು ಮತ್ತು ಸೆಲ್ಫಿಯನ್ನು www.hargartiranga.com ನಲ್ಲಿ ಅಪ್ಲೋಡ್ ಮಾಡಿ ಮತ್ತು ನವ ಭಾರತದ ಅತಿದೊಡ್ಡ ಆಚರಣೆಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ನೋಂದಾಯಿಸಿ ಎಂದು ಅಂಚೆ ಇಲಾಖೆ ಹೇಳಿದೆ.
ಪ್ರತಿ ಮನೆಯಲ್ಲೂ ಧ್ವಜ ಹಾರಿಸಲು ಪ್ರೇರಣೆ
'ಹರ್ ಘರ್ ತಿರಂಗ' ಅಭಿಯಾನವು 'ಆಜಾದಿ ಕಾ ಅಮೃತ್ ಮಹೋತ್ಸವ'ದ ಭಾಗವಾಗಿದೆ. ಇದು ಭಾರತದ 75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಸ್ಮರಣಾರ್ಥ ಆಗಸ್ಟ್ 13 ರಿಂದ 15 ರವರೆಗೆ ನಡೆಯಲಿದೆ. 'ಹರ್ ಘರ್ ತಿರಂಗಾ' ಎಂಬುದು ಆಜಾದಿ ಕಾ ಅಮೃತ್ ಮಹೋತ್ಸವದ ಆಶ್ರಯದಲ್ಲಿ ತಿರಂಗ ಧ್ವಜವನ್ನು ಪ್ರತಿ ಮನೆಗೆ ತರಲು ಮತ್ತು ಭಾರತದ 75ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸಲು ಅದನ್ನು ಹಾರಿಸಲು ಜನರನ್ನು ಪ್ರೋತ್ಸಾಹಿಸಲು ಒಂದು ಅಭಿಯಾನವಾಗಿದೆ.
ಭಾರತ ಸರ್ಕಾರದ ಉಪಕ್ರಮ
ಆಜಾದಿ ಕಾ ಅಮೃತ್ ಮಹೋತ್ಸವವು 75 ವರ್ಷಗಳ ಸ್ವಾತಂತ್ರ್ಯ ಮತ್ತು ಭಾರತದ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವಯುತ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು ಭಾರತ ಸರ್ಕಾರದ ಉಪಕ್ರಮವಾಗಿದೆ. ಈ ಕಾರ್ಯಕ್ರಮವು ಎಲ್ಲೆಡೆ ಭಾರತೀಯರನ್ನು ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಪ್ರೇರೇಪಿಸುತ್ತದೆ. ಕಾರ್ಯಕ್ರಮದ ಉದ್ದೇಶವು ರಾಷ್ಟ್ರಧ್ವಜದೊಂದಿಗಿನ ಸಂಬಂಧವನ್ನು ಕೇವಲ ಔಪಚಾರಿಕ ಅಥವಾ ಸಾಂಸ್ಥಿಕವಾಗಿ ಇಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ವೈಯಕ್ತಿಕವಾಗಿ ಮಾಡುವುದಾಗಿದೆ.