ಪ್ರಧಾನಿ ಮೋದಿ 70ನೇ ಜನ್ಮದಿನ: ದೇವೇಗೌಡ, ರಾಹುಲ್ ಗಾಂಧಿ ಶುಭಾಶಯ
ಬೆಂಗಳೂರು, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಗುರುವಾರ 70ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸೇವಾ ಸಪ್ತಾಹ ಆಚರಿಸುತ್ತಿದ್ದಾರೆ. ದೇಶ ವಿದೇಶಗಳ ರಾಜಕೀಯ ಪ್ರಮುಖರು, ಅವರ ಅಭಿಮಾನಿಗಳು ಹಾಗೂ ವಿರೋಧಿಗಳು ಕೂಡ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಹಾರೈಸಿರುವ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ, ನಿಮಗೆ ಆರೋಗ್ಯ ಹಾಗೂ ಸಂತೋಷ ಸಿಗಲಿ ಎಂದು ದೇವರನ್ನು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಜಪಾನ್ ನೂತನ ಪ್ರಧಾನಿ ಯೋಶಿಹಿದೆ ಸುಗಾಗೆ ಮೋದಿ ಶುಭಾಶಯ
ಜಾಗತಿಕ ಪಿಡುಗಿನ, ಆರ್ಥಿಕ ಬಿಕ್ಕಟ್ಟು ಹಾಗೂ ಗಡಿಯಲ್ಲಿನ ಚೀನಾ ತಂಟೆಯಂತಹ ಸಂಕಷ್ಟಕರ ಸಮಯದಲ್ಲಿ ದೇಶವನ್ನು ಮುನ್ನೆಡೆಸುತ್ತಿದ್ದೀರಿ. ಈ ಮಹಾನ್ ದೇಶದ ಶಾಂತಿ ಮತ್ತು ಸಮೃದ್ಧಿಯನ್ನು ನಿಭಾಯಿಸುವ ನಿಮ್ಮ ಎಲ್ಲ ಪ್ರಯತ್ನಗಳಿಗೆ ಒಬ್ಬ ನಾಗರಿಕನಾಗಿ ಮತ್ತು ಒಬ್ಬ ಸಹೋದ್ಯೋಗಿಯಾಗಿ ನನ್ನ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಮುಂದೆ ಓದಿ.
ಯಡಿಯೂರಪ್ಪ ಶುಭಾಶಯ ಟ್ವೀಟ್
ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಅಭಿಮಾನಪೂರ್ವಕ ಶುಭಕಾಮನೆಗಳು. ಆರೋಗ್ಯಪೂರ್ಣವಾಗಿ ಇನ್ನೂ ಬಹಳ ವರ್ಷಗಳ ಕಾಲ ತಮ್ಮ ರಾಷ್ಟ್ರಸೇವೆ ಹೀಗೆಯೇ ಮುಂದುವರಿಯುವಂತೆ ದೇವರು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಶುಭಾಶಯ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ವಿಟ್ಟರ್ ಮೂಲಕ ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ. 'ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಜನಾಥ್ ಸಿಂಗ್ ಹಾರೈಕೆ
ನರೇಂದ್ರ ಮೋದಿ ಅವರ ಚುರುಕಿನ ನಾಯಕತ್ವ, ದೃಢ ನಿರ್ಧಾರಗಳು ಹಾಗೂ ನಿರ್ಣಾಯಕ ಕ್ರಿಯೆಗಳಿಂದ ಭಾರತಕ್ಕೆ ದೊಡ್ಡ ಮಟ್ಟದ ಪ್ರಯೋಜನವಾಗಿದೆ. ಬಡ ಹಾಗೂ ಸಂಕಷ್ಟದಲ್ಲಿರುವ ಜನರ ಸಬಲೀಕರಣಕ್ಕಾಗಿ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಉತ್ತಮ ಆರೋಗ್ಯ ಹಾಗೂ ಸುದೀರ್ಘ ಆಯಸ್ಸಿಗಾಗಿ ಪ್ರಾರ್ಥಿಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನೇಪಾಳ ಪ್ರಧಾನಿ ಕೆ.ಪಿ. ಒಲಿ
'ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಮ್ಮ ಜನ್ಮದಿನದ ಈ ಶುಭ ಸಂದರ್ಭದಲ್ಲಿ ಹಾರೈಕೆಗಳು. ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷ ಸಿಗಲಿ. ನಮ್ಮ ಎರಡು ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಮೀಪದಿಂದ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ' ಎಂದು ನೇಪಾಳದ ಪ್ರಧಾನಿ ಕೆ.ಪಿ. ಒಲಿ ಹೇಳಿದ್ದಾರೆ.
ಶಶಿ ತರೂರ್ ಹಾರೈಕೆ
ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ದೇಶ ಸೇವೆಯಲ್ಲಿ ಅವರಿಗೆ ಆರೋಗ್ಯ ಹಾಗೂ ಯಶಸ್ಸು ಸಿಗಲಿ. ನಮ್ಮ ದೇಶದಲ್ಲಿ ವಾಸ್ತವವಾಗಿ ಗೋಚರಿಸುತ್ತಿರುವ ಮತ್ತು ಎಲ್ಲರ ಹಾಗೂ ಎಲ್ಲರ ಜತೆಗಿನ ವಿಕಾಸವನ್ನು ತರುವ ನಿಟ್ಟಿನಲ್ಲಿ ಅವರು ಮತ್ತಷ್ಟು ಯಶಸ್ವಿಯಾಗಿ ಕೆಲಸ ಮಾಡುವಂತೆ ಆಗಲಿ ಎಂದು ಶಶಿ ತರೂರ್ ಹೇಳಿದ್ದಾರೆ.