ನೇತಾಡುವ ನೀರ್ಗಲ್ಲು ಒಡೆದು ಬಿದ್ದದ್ದೇ ಹಿಮಪ್ರವಾಹಕ್ಕೆ ಕಾರಣವಾಯಿತೇ?
ಡೆಹ್ರಾಡೂನ್, ಫೆಬ್ರುವರಿ 10: ಉತ್ತರಾಖಂಡದ ಚಾಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಪ್ರವಾಹಕ್ಕೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಹಲವು ತಜ್ಞರು ಈ ಘಟನೆ ಹಿಂದಿನ ನೈಜ ಕಾರಣದ ಬೆನ್ನು ಬಿದ್ದಿದ್ದು, ವಿಶ್ಲೇಷಣೆಗಳನ್ನು ಮಾಡುತ್ತಿದ್ದಾರೆ. ಇದೀಗ ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ಕೂಡ ವಿಶ್ಲೇಷಣೆ ನಡೆಸಿ ಕೆಲವು ಸಾಧ್ಯತೆಗಳನ್ನು ತಿಳಿಸಿದೆ.
ರೌಂತಿ /ಮೃಗುಧನಿ ಪರ್ವತಕ್ಕೆ ಹೊಂದಿಕೊಂಡಂತಿರುವ (ಸಮುದ್ರ ಮಟ್ಟಕ್ಕಿಂತ 6063 ಮೀಟರ್ ಎತ್ತರದಲ್ಲಿದೆ ಈ ಹಿಮ ಪರ್ವತ) ನೇತಾಡುವ ಬೃಹತ್ ನೀರ್ಗಲ್ಲು ಕಳಚಿ ಬಿದ್ದಿರುವುದು ಈ ಹಿಮಪ್ರವಾಹ ಸಂಭವಿಸಲು ಕಾರಣ ಎಂದು ವಾಡಿಯಾ ಇನ್ ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ನಿರ್ದೇಶಕ ಕಲಾಚಂದ್ ಸೇನ್ ತಿಳಿಸಿದ್ದಾರೆ. ಮುಂದೆ ಓದಿ...
ನಂದಾದೇವಿ ಎಂಬಲ್ಲಿ ಒಡೆದಿರುವ ನೀರ್ಗಲ್ಲು
ಹಿಮಪರ್ವತದ ಭಾಗವೇ ಆಗಿರುವ ನೀರ್ಗಲ್ಲು ಒಮ್ಮೆ ಒಡೆದರೆ ಪ್ರಪಾತಕ್ಕೆ ಜಾರಿ ಅನಾಹುತವನ್ನು ಸೃಷ್ಟಿಸುತ್ತದೆ ಎಂದು ವಿವರಿಸಿದ್ದಾರೆ ಅವರು. ಸೋಮವಾರ ಈ ಕುರಿತು ಪರಿಶೀಲನೆಗೆ ಇಬ್ಬರು ನೀರ್ಗಲ್ಲು ತಜ್ಞರು ಜೋಶಿಮಠ ಹಾಗೂ ತಪೋವನಕ್ಕೆ ಭೇಟಿ ನೀಡಿದ್ದು ಕೂಲಂಕಷವಾಗಿ ಗ್ರಹಿಸಿದ್ದಾರೆ. ನಂದಾದೇವಿಯಲ್ಲಿ ನೀರ್ಗಲ್ಲು ಒಡೆದಿರುವುದು ಈ ವೇಳೆ ಕಂಡುಬಂದಿದೆ. ಮಂಗಳವಾರ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದು, ಈ ಕುರಿತು ಕುರುಹುಗಳು ದೊರೆತಿವೆ.
ನಾಲ್ಕು ಗಂಟೆಗಳ ಕಾಲ ಕಂಬಿ ಹಿಡಿದೇ ತೂಗಾಡುತ್ತಿದ್ದೆವು; ದುರಂತದಲ್ಲಿ ಬದುಕಿ ಬಂದವರ ಕಥೆ
2013ರಲ್ಲಿಯೂ ಇದೇ ರೀತಿ ಆಗಿತ್ತು
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಾಯದೊಂದಿಗೆ ವಾಡಿಯಾ ಸಂಸ್ಥೆ ಘಟನೆ ನಡೆದ ಸ್ಥಳದಲ್ಲಿನ ಹಲವು ಅಂಶಗಳನ್ನು ಅಧ್ಯಯನ ಮಾಡುವುದರೊಂದಿಗೆ ಈ ಹಿಮಪ್ರದೇಶದಲ್ಲಿ ಭೂಕಂಪನದ ಸಾಧ್ಯತೆಯ ಕುರಿತು ಪರಿಶೀಲಿಸಿದ್ದಾರೆ. 2013ರಲ್ಲಿಯೂ ಇದೇ ರೀತಿ ಹಿಮಪ್ರವಾಹ ಸಂಭವಿಸಿ ಸುಮಾರು ಐದು ಸಾವಿರ ಮಂದಿ ಸಾವನ್ನಪ್ಪಿದ್ದರ ಕುರಿತು ಸಂಸ್ಥೆ ಈ ಹಿಂದೆ ಅಧ್ಯಯನ ನಡೆಸಿತ್ತು. ಈ ಬಾರಿಯೂ ಅಧ್ಯಯನ ನಡೆಸಿ ಪ್ರಾಥಮಿಕ ಅಂಶಗಳನ್ನು ನೀಡಿದೆ.
ದುರ್ಬಲಗೊಂಡ ನೀರ್ಗಲ್ಲಿನಿಂದ ಅನಾಹುತ
ವಿಜ್ಞಾನಿಗಳು ಗ್ರಹಿಕೆ ಪ್ರಕಾರ ಈ ಬೃಹತ್ ನೀರ್ಗಲ್ಲು ಕೆಲವು ಸಮಯದಿಂದ ದುರ್ಬಲವಾಗಿದ್ದು, ಕರಗುತ್ತಿರುವ ಹಿಮದಿಂದಾಗಿ ದುರ್ಬಲ ವಲಯ ಸೃಷ್ಟಿಯಾಗಿದೆ. ಈ ನೀರ್ಗಲ್ಲು ಕರಗಿ ಕಾಲಕ್ರಮೇಣ ತಾತ್ಕಾಲಿಕ ಅಣೆಕಟ್ಟಿನಂತೆ ಕಟ್ಟಿಕೊಂಡಿದ್ದು, ಒಮ್ಮೆಲೇ ಆ ನೀರು ಒಡೆದು ಪ್ರವಾಹ ಸೃಷ್ಟಿಯಾಗಿದೆ ಎನ್ನಲಾಗಿದೆ. ರಿಷಿಗಂಗಾಗೆ ಈ ಹಿಮನದಿ ಸೇರುತ್ತಿದ್ದು, ರಿಷಿಗಂಗಾ ಧೌಲಿಗಂಗಾ ನದಿ ಸೇರುತ್ತದೆ. ಹೀಗಾಗಿ ಈ ನದಿಗಳಲ್ಲಿ ಪ್ರವಾಹ ಸಂಭವಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರಾಖಂಡ ಹಿಮ ಪ್ರವಾಹ; ಅಷ್ಟಕ್ಕೂ ಘಟನೆ ಹಿಂದಿನ ಕಾರಣವೇನು?
ಹಿಮಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆ
ಉತ್ತರಾಖಂಡದ ಹಿಮಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆಯು 32ಕ್ಕೆ ಏರಿದ್ದು, ಆರು ದೇಹಗಳು ಮಂಗಳವಾರ ಪತ್ತೆಯಾಗಿವೆ. ಪವರ್ ಪ್ರಾಜೆಕ್ಟ್ನ ಸುರಂಗದಲ್ಲಿ 30 ಕೆಲಸಗಾರರು ಸಿಲುಕಿರುವ ಶಂಕೆ ಇದ್ದು, ಅವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 174 ಮಂದಿ ನಾಪತ್ತೆಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು 600 ಮಂದಿ ತೊಡಗಿಕೊಂಡಿದ್ದಾರೆ.