ಎಚ್ಎಎಲ್ಗೆ ಸಿಗದ ಅವಕಾಶ: ಸಚಿವೆ ನಿರ್ಮಲಾ ಸುಳ್ಳು ಹೇಳಿದರೇ?
ನವದೆಹಲಿ, ಸೆಪ್ಟೆಂಬರ್ 20: ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ರಫೇಲ್ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿಲ್ಲ ಎಂಬ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಸತ್ಯಕ್ಕೆ ದೂರ ಎನ್ನುವುದು ಬಹಿರಂಗವಾಗಿದೆ.
ಎಚ್ಎಎಲ್ನ ಮಾಜಿ ಮುಖ್ಯಸ್ಥ ಟಿ. ಸುವರ್ಣ ರಾಜು, ಸಂಸ್ಥೆಗೆ ರಫೇಲ್ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯ ಇತ್ತು. ಭಾರತ ಸರ್ಕಾರವು ದಸಾಲ್ಟ್ ಕಂಪೆನಿಯೊಂದಿಗಿನ ಮೂಲ ವ್ಯವಹಾರಗಳನ್ನು ಅಂತ್ಯಗೊಳಿಸಿದ್ದರೆ ಮತ್ತು ಆ ಫ್ರೆಂಚ್ ಕಂಪೆನಿ ಜತೆ ಕೆಲಸ ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದರೆ ಇದು ಸಾಧ್ಯವಿತ್ತು ಎಂದಿದ್ದಾರೆ.
ಎಚ್ಎಎಲ್ಗೆ ತಪ್ಪಿದ ಅವಕಾಶ: ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ ನಿರ್ಮಲಾ
ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಕಡತಗಳನ್ನು ಸರ್ಕಾರ ಏಕೆ ಬಹಿರಂಗಪಡಿಸಲು ಮುಂದಾಗುತ್ತಿಲ್ಲ ಎಂದು ಸಹ ಅವರು ಪ್ರಶ್ನಿಸಿದ್ದಾರೆ.
ಸುವರ್ಣ ರಾಜು ಅವರು ಎಚ್ಎಎಲ್ ಮುಖ್ಯಸ್ಥನ ಸ್ಥಾನದಿಂದ ಸೆ. 1ರಂದು ನಿವೃತ್ತರಾಗಿದ್ದಾರೆ. ರಫೇಲ್ ವಿಮಾನ ವಿವಾದಕ್ಕೆ ಸಂಬಂಧಿಸಿದಂತೆ ಎಚ್ಎಎಲ್ಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಹೇಳಿಕೆ ನೀಡಿರುವುದು ಇದೇ ಮೊದಲು.
ಅಂದಾಜು ವೆಚ್ಚ ಹೆಚ್ಚಾಗಬಹುದು
ಈಗ ಉದ್ದೇಶಿಸಿರುವ ಅಂದಾಜು ವೆಚ್ಚದ ಲೆಕ್ಕದಲ್ಲಿ ಯುದ್ಧ ವಿಮಾನಗಳನ್ನು ಎಚ್ಎಎಲ್ಗೆ ತಯಾರಿಸಲು ಸಾಧ್ಯವಾಗದೆ ಇರಬಹುದು. ಆದರೆ, ಅತ್ಯಾಧುನಿಕ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಸಂಸ್ಥೆಗೆ ಇದೆ ಎಂದಿದ್ದಾರೆ.
ಈ ಒಪ್ಪಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ಒಂದು ದೊಡ್ಡ ಸವಾಲು ಆಗಿರುತ್ತಿತ್ತು ಎಂದು ವಾಯುಸೇನೆಯ ಮಾಜಿ ಮುಖ್ಯಸ್ಥರೂ ಆಗಿರುವ ಅವರು ಅಭಿಪ್ರಾಯಪಟ್ಟಿದ್ದಾರೆ.
'ಹಾಸ್ಯಗಾರ ರಾಜಕುಮಾರ': ರಾಹುಲ್ ಗಾಂಧಿಯನ್ನು ಮೂದಲಿಸಿದ ಜೇಟ್ಲಿ
ಸುಖೋಯ್ ತಯಾರಿಸಿಲ್ಲವೇ?
'ವಾಯು ಸೇನೆಯಲ್ಲಿ ಪ್ರಮುಖವಾಗಿರುವ ನಾಲ್ಕನೆಯ ಪೀಳಿಗೆಯ 25 ಟನ್ ತೂಕದ ಸುಖೋಯಿ-30 ಯುದ್ಧ ವಿಮಾನವನ್ನು ಅದರ ಕಚ್ಚಾ ಸಾಮಗ್ರಿಯ ಹಂತದಿಂದ ಪ್ರತಿಯೊಂದನ್ನೂ ಎಚ್ಎಎಲ್ ನಿರ್ಮಿಸಿದೆ. ಹೀಗಿರುವಾಗ ನಾವೇನು ಮಾತನಾಡುತ್ತಿದ್ದೇವೆ? ನಾವು ರಫೇಲ್ ಯುದ್ಧವಿಮಾನವನ್ನು ಖಂಡಿತವಾಗಿಯೂ ತಯಾರಿಸುತ್ತಿದ್ದೆವು ಎಂದು ರಾಜು ಹೇಳಿದ್ದಾರೆ.
ರಫೇಲ್ ವಿಮಾನ ನಿರ್ಮಿಸಿದ ದಸಾಲ್ಟ್ ಏವಿಯೇಷನ್ ನಿರ್ಮಿಸಿದ್ದ ಮಿರಾಜ್-2000 ಅನ್ನು ಎಚ್ಎಎಲ್ 20 ವರ್ಷಗಳವರೆಗೂ ನಿರ್ವಹಣೆ ಮಾಡಿತ್ತು. ಮಿರಾಜ್ನ ಕ್ಲಿಷ್ಟಕರವಾದ ಉನ್ನತೀಕರಣ ಯೋಜನೆಯಲ್ಲಿಯೂ ಅದು ಭಾಗಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.
'ನಾವು ರಫೇಲ್ ನಿರ್ಮಾಣದ ಸವಾಲನ್ನು ಕೂಡ ನಿಭಾಯಿಸಬಹುದಾಗಿತ್ತು. ನಾನು ಐದು ವರ್ಷ ತಾಂತ್ರಿಕ ತಂಡದ ಮುಖ್ಯಸ್ಥನಾಗಿದ್ದೆ. ಪ್ರತಿ ಸಮಸ್ಯೆಗಳನ್ನೂ ಅಲ್ಲಿ ಬಗೆಹರಿಸಲಾಗಿತ್ತು ಎಂದರು.
ಎಕೆ-103:ರಷ್ಯಾದ ಯಾವ ಪ್ರಸ್ತಾವವನ್ನು ಭಾರತ ತಿರಸ್ಕರಿಸಿತು ಗೊತ್ತೇ?
ಸೇನೆಗೆ ವೆಚ್ಚ ಮುಖ್ಯವಲ್ಲ
ಭಾರತದಲ್ಲಿಯೇ ವಿಮಾನ ತಯಾರಿಸಿದರೆ ತಗುಲುವ ವೆಚ್ಚ ಅಧಿಕವಾಗುತ್ತದೆ ಎಂಬ ಕಾರಣಕ್ಕೆ ಯುಪಿಎ ಸರ್ಕಾರ ಈ ವ್ಯವಹಾರವನ್ನು ಅಲ್ಲಿಯೇ ಸ್ಥಗಿತಗೊಳಿಸಿತೇ ಎಂಬ ಪ್ರಶ್ನೆಗೆ, ಭಾರತದ ಸೇನಾ ವ್ಯವಸ್ಥೆಯು ಯಾವಾಗಲೂ ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆಯೇ ವಿನಾ, ಅದಕ್ಕೆ ತಕ್ಷಣಕ್ಕೆ ತಗುಲುವ ವೆಚ್ಚದ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳಿದರು.
ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ
ನೀವು ಜೀವನ ಚಕ್ರದ ವೆಚ್ಚವನ್ನು ಗಮನಿಸಬೇಕೇ ವಿನಾ, ಒಂದು ವಿಮಾನಕ್ಕೆ ತಗುಲುವ ವೆಚ್ಚದ ಬಗ್ಗೆ ಅಲ್ಲ. ಜೀವನ ಚಕ್ರದ ವೆಚ್ಚವು ಖಂಡಿತವಾಗಿಯೂ ಕಡಿಮೆಯಾಗುತ್ತದೆ. ಮತ್ತು ಇದು ಅಂತಿಮವಾಗಿ ನಂಬಿಕೆಗೆ ಬಿಟ್ಟಿದ್ದು. ಫ್ರಾನ್ಸ್ ಕಂಪೆನಿ 100 ಗಂಟೆಯಲ್ಲಿ 100 ಜೆಟ್ಗಳನ್ನು ಮಾಡುವುದಾಗಿ ಹೇಳಿಕೊಂಡರೆ, ನಾನು ಮೊದಲ ಬಾರಿಗೆ ಆ ಕೆಲಸ ಮಾಡುತ್ತಿರುವುದರಿಂದ 200 ಗಂಟೆ ತೆಗೆದುಕೊಳ್ಳುತ್ತೇನೆ. ಅದನ್ನು 80 ಗಂಟೆಯಲ್ಲಿ ಮಾಡಲು ನನ್ನಿಂದ ಸಾಧ್ಯವಾಗದು. ಅದು ವೈಜ್ಞಾನಿಕ ಪ್ರಕ್ರಿಯೆ ಎಂದು ಸೂಕ್ಷ್ಮವಾಗಿ ವಿವರಿಸಿದರು.
'ಎಚ್ಎಎಲ್ ವಿಮಾನ ಗುಣಮಟ್ಟದ್ದಾಗಿಲ್ಲ'
ಆದರೆ, ಎಚ್ಎಎಲ್ಗೆ ಈ ಗುಣಮಟ್ಟದ ವಿಮಾನವನ್ನು ತಯಾರಿಸುವ ಸಾಮರ್ಥ್ಯ ಇಲ್ಲ ಎಂದು ಭಾರತೀಯ ವಾಯು ಸೇನೆಯ ಮಾಜಿ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ವೈ. ಟಿಪ್ನಿಸ್ ಹೇಳಿದ್ದಾರೆ.
ಫ್ರಾನ್ಸ್ನಿಂದ ನಿರ್ಮಾಣ ತಂತ್ರಜ್ಞಾನವನ್ನು ಭಾರತಕ್ಕೆ ತರಿಸಿಕೊಂಡರೂ ರಫೇಲ್ಗಳ ನಿರ್ಮಾಣ ಎಚ್ಎಎಲ್ಗೆ ಸವಾಲಾಗಲಿದೆ. ಎಚ್ಎಎಲ್ ತನ್ನಿಂದ ಸಾಧ್ಯವಿರುವ ಮಟ್ಟಕ್ಕೆ ಸಾಮರ್ಥ್ಯ ತೋರಿಸುತ್ತಿಲ್ಲ. ಅದು ತನ್ನಿಂದ ಸಾಧ್ಯ ಇರುವುದಕ್ಕಿಂತಲೂ ಹೆಚ್ಚಿನದ್ದನ್ನು ಭರವಸೆ ನೀಡುತ್ತದೆ. ಅನೇಕ ಪ್ರಕರಣಗಳಲ್ಲಿ ಅದರ ಗುಣಮಟ್ಟ ಕೆಳಮಟ್ಟದ್ದಾಗಿರುತ್ತದೆ. ಅಲ್ಲದೆ, ತನ್ನ ಭರವಸೆಗಳಿಂದ ಅದು ಹಿಂದೆ ಸರಿದಿತ್ತು ಕೂಡ ಎಂದು ಹೇಳಿದ್ದಾರೆ.