ಪಾಕ್ ಗೆ ಒತ್ತಡ, ಉಗ್ರ ಹಫೀಜ್ ಗೆ ಕೈ-ಬಾಯಿ ಕಟ್ಟಲು ಸಿದ್ಧತೆ!
ನವದೆಹಲಿ, ಡಿಸೆಂಬರ್ 28: ಭಾರತದ ಪಾಲಿಗೆ ಇದು ವಿಜಯದ ಸಂಕೇತ ಅನ್ನೋದು ಹೌದು. ಲಷ್ಕರ್ ಇ ತೋಯ್ಬಾದ ಮುಖ್ಯಸ್ಥ ಹಫೀಜ್ ಸಯೀದ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಪಾಕಿಸ್ತಾನ ನಿಷೇಧ ಹೇರುವ ಸಾಧ್ಯತೆ ಇದೆ. ಗುಪ್ತಚರ ಇಲಾಖೆ ಮೂಲಗಳ ಪ್ರಕಾರ, ನಿಷೇಧ ಹೇರುವ ನಿರ್ಧಾರದ ಹಿಂದೆ ವಿಪರೀತ ಒತ್ತಡಗಳು ಕೆಲಸ ಮಾಡುತ್ತಿವೆ.
ಭಾರತ ಪದೇಪದೇ ದೂರುತ್ತಿತ್ತು. ಸಯೀದ್ ಮೋಸ್ಟ್ ವಾಂಟೆಡ್ ಭಯೋತ್ಪಾದಕ. ಮುಂಬೈನ 26/11ರ ಮಾಸ್ಟರ್ ಮೈಂಡ್. ಆತನನ್ನು ಪಾಕಿಸ್ತಾನವು ಆರಾಮವಾಗಿ ಓಡಾಡಿಕೊಂಡಿರಲು ಬಿಟ್ಟಿದೆ ಎಂದಿತ್ತು. ಆತ ಸಾರ್ವಜನಿಕವಾಗಿ ಸಭೆಗಳನ್ನು ನಡೆಸಿ, ಭಾರತದ ವಿರುದ್ಧ ದ್ವೇಷ ಬಿತ್ತುವ ಭಾಷಣಗಳನ್ನು ನಿಷೇಧಿಸಬೇಕು ಎಂದು ಕೂಡ ಒತ್ತಾಯಿಸಿತ್ತು.[ಉಗ್ರಗಾಮಿಗಳ ಸಂಬಳ, ಪೆನ್ಷನ್ ಇತರ ಬೆನಿಫಿಟ್ ಗಳು..]
ಸಾರ್ವಜನಿಕ ಭಾಷಣಗಳ ಬಗ್ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು. ಅದಕ್ಕೆ ಸಹಮತ ವ್ಯಕ್ತಪಡಿಸಿ ಅಮೆರಿಕಾ ಹಾಗೂ ಯುಕೆ ಸಹ ಪಾಕಿಸ್ತಾನದ ಮೇಲೆ ಒತ್ತಡ ಹಾಕಿದ್ದವು. ಅಧಿಕೃತವಾಗಿ ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ ಆ ಎರಡು ದೇಶಗಳು, ಸಯೀದ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಥವಾ ಕನಿಷ್ಠ ಅವನ ಸಾರ್ವಜನಿಕ ಸಭೆಗಳನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದ್ದವು.
ಇನ್ನು ಅಮೆರಿಕಾವಂತೂ ಪಾಕಿಸ್ತಾನಕ್ಕೆ ಸ್ಪಷ್ಟ ನುಡಿಗಳಲ್ಲಿ ಹೇಳಿತ್ತು: ಭಯೋತ್ಪಾದನೆ ನಿಗ್ರಹಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಕೇವಲ ಅಯ್ದ ಕ್ರಮಗಳನ್ನಷ್ಟೇ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕಿಸ್ತಾನ ಕೈಗೊಳ್ಳುತ್ತಿದೆ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿತ್ತು.['ನೋಟು ನಿಷೇಧದಿಂದ ಉಗ್ರರಿಗೇನೂ ಹಣಕಾಸು ತೊಂದರೆ ಆಗಿಲ್ಲ']
ಹಫೀಜ್ ಸಯೀದ್ ಸಾರ್ವಜನಿಕ ಭಾಷಣಗಳಿಗೆ ನಿಷೇಧ ಹೇರುವುದಕ್ಕೆ ವ್ಯವಸ್ಥೆಯೊಳಗೇ ಪಾಕಿಸ್ತಾನ ವಿರೋಧ ಎದುರಿಸಲಿದೆ. ಇನ್ನು ಈ ನಿರ್ಧಾರವನ್ನು ಪ್ರಶ್ನಿಸಿ, ಸಯೀದ್ ಕೋರ್ಟ್ ಮೆಟ್ಟಿಲೇರಬಹುದು. ವಿಶ್ವಸಂಸ್ಥೆ ತನ್ನನ್ನು ಭಯೋತ್ಪಾದಕ ಎಂದು ಘೋಷಿಸಿಲ್ಲ ಎಂಬ ವಾದ ಹೂಡಬಹುದು.
ಹಲವು ದೇಶಗಳು ಲಷ್ಕರ್ ಇ ತೋಯ್ಬಾವನ್ನು ಭಯೋತ್ಪಾದನೆ ಸಂಘಟನೆ ಎಂದೇ ಬಿಂಬಿಸಿವೆ. ಆದರೆ ಸಯೀದ್ ಹೇಳೋದೇ ಬೇರೆ. "ನನಗೂ ಆ ಸಂಘಟನೆಗೂ ಸಂಬಂಧವಿಲ್ಲ. ನಾನು ಜಮಾತ್ ಉದ್ ದವಾದ ಭಾಗವಷ್ಟೇ. ಅದೊಂದು ದತ್ತಿ ಸಂಸ್ಥೆ" ಎನ್ನುತ್ತಾನೆ.