ಪತಿಯನ್ನು ನೋಡುವ ಮನಸ್ಸಾಗಿದೆ : ಹಾದಿಯಾ
ಸೇಲಂ, ನವೆಂಬರ್ 29 : ದೇಶದ ಗಮನ ಸೆಳೆದಿರುವ ಕೇರಳದ 'ಲವ್ ಜಿಹಾದ್' ಪ್ರಕರಣದ ಕೇಂದ್ರ ಬಿಂದು ಹಾದಿಯಾ ಇಂದು (ನವೆಂಬರ್ 29)ರಂದು ಮಾಧ್ಯಮಗಳ ಜೊತೆ ತಮ್ಮ ಮನದ ಮಾತುಗಳನ್ನು ಆಡಿದ್ದಾರೆ.
ಮೊನ್ನೆ ನಡೆದ ಸುಪ್ರಿಂ ಕೋರ್ಟ್ ವಿಚಾರಣೆ ಬಳಿಕ ತನ್ನ ವಿದ್ಯಾಭ್ಯಾಸ ಪೂರ್ತಿ ಮಾಡಲು ತಮಿಳುನಾಡಿನ ಸೇಲಂ ನಗರಕ್ಕೆ ಆಗಮಿಸಿರುವ ಹಾದಿಯ ಇಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿ ತನಗೆ ಗಂಡನ ಜೊತೆ ಮಾತನಾಡಬೇಕು, ಆತನನ್ನು ನೋಡಬೇಕು ಎನಿಸುತ್ತಿದೆ' ಎಂದಿದ್ದಾರೆ.
ಲವ್ ಜಿಹಾದ್: 'ನನಗೆ ನನ್ನ ಸ್ವಾತಂತ್ರ್ಯ ಬೇಕು' ಎಂದ ಹಾದಿಯಾ
'ಕಳೆದ ಆರು ತಿಂಗಳಿನಿಂದ ನನಗೆ ಇಷ್ಟವಿಲ್ಲದವರ ಜೊತೆಯೇ (ಹಾದಿಯಾ ಅವರ ಪೋಷಕರು) ಮಾತನಾಡುತ್ತಿದ್ದೇನೆ. ಅವರು ನನಗೆ ಹಿಂಸೆ ನೀಡಿದ್ದಾರೆ' ಎಂದು ಹಾದಿಯಾ ತನ್ನ ಪೋಷಕರ ವಿರುದ್ಧ ದೂರಿದ್ದಾರೆ.
ಆರು ತಿಂಗಳಿನಿಂದ ತನ್ನ ಪೋಷಕರೊಂದಿಗೆ ಇದ್ದ ಹಾದಿಯಾ ಇದೀಗ ಸುಪ್ರಿಂ ಕೋರ್ಟ್ ಆದೇಶದಂತೆ ಶಿಕ್ಷಣ ಪೂರ್ತಿಗೊಳಿಸಲು ಹೋಗಿದ್ದಾರೆ. ಆರು ತಿಂಗಳ ನಂತರ ಇದೇ ಮೊದಲ ಬಾರಿಗೆ ಹಾದಿಯಾ ಹೊರ ಬಂದಿದ್ದಾರೆ.
ಪತಿ ಶಫಿ ಜಹಾನ್ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತಿರಿಸಿದ ಹಾದಿಯಾ 'ನಾನು ಅವರೊಂದಿಗೆ ಮಾತನಾಡಿ ತಿಂಗಳುಗಳೇ ಗತಿಸಿವೆ, ನನ್ನ ಬಳಿ ಮೊಬೈಲ್ ಕೂಡ ಇಲ್ಲದ ಕಾರಣ ಅವರ ಯೋಗ ಕ್ಷೇಮ ಕೇಳಲೂ ಆಗಿಲ್ಲ' ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಕೈಗೆ ಬಂದ ನಂತರ ಮಾಧ್ಯಮಗಳ ಜೊತೆ ಹೆಚ್ಚಿಗೆ ಮಾತನಾಡುವುದಾಗಿ ಹೇಳಿರುವ ಹಾದಿಯಾ, ಕಾಲೇಜಿನಲ್ಲಿ ಒದಗಿಸಿರುವ ಸೌಲಭ್ಯ ಮತ್ತು ಭದ್ರತೆಯ ಬಗ್ಗೆ ಮಾತನಾಡಲಿಲ್ಲಾ.
ಕಾಲೇಜಿನ ಮುಖ್ಯಸ್ಥರಿಗೆ ಹಾದಿಯಾ ಅವರ ರಕ್ಷಣೆಯ ಉಸ್ತುವಾರಿ ಒದಗಿಸಿದ್ದು, ಸಮಸ್ಯೆ ಇದ್ದಲ್ಲಿ ಹಾದಿಯಾ ನೇರವಾಗಿ ಸುಪ್ರಿಂ ಕೋರ್ಟ್ ಅನ್ನು ಸಂಪರ್ಕಿಸುವಂತೆ ಹಾದಿಯಾಗೆ ಸೂಚಿಸಲಾಗಿದೆ.
ಹಿಂದೂ ಯುವತಿಯಾಗಿದ್ದ ಹಾದಿಯಾ (ಅಖಿಲಾ) ಶಪಿನ್ ಜಹಾನ್ ಅವರ ಮದುವೆ ಆದ ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದ್ದರು. ಈ ಮದುವೆಯನ್ನು "ಲವ್ ಜಿಹಾದ್' ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು, ಆನಂತರ ಶಪಿನ್ ಜಹಾನ್ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಪ್ರಕರಣ ಸುಪ್ರಿಂ ಕೋರ್ಟ್ ಅಂಗಳದಲ್ಲಿದೆ.