ಕೊವಿಡ್-19 ಸಂದೇಶ: ಒಂದು ಕ್ಲಿಕ್ ಮಾಡಿದರೆ ಬ್ಯಾಂಕ್ ಅಕೌಂಟ್ ಹ್ಯಾಕ್!
ನವದೆಹಲಿ, ಮೇ.20: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವ ಬಗ್ಗೆ ಕ್ಷಣಕ್ಷಣದ ಮಾಹಿತಿ ಬೇಕೇ, ಒಂದೇ ಒಂದು ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಗಳಿಗೆ ಈ ರೀತಿಯ ಸಂದೇಶಗಳು ಬಂದಿದ್ದು, ಒಮ್ಮೆ ಕುತೂಹಲಕ್ಕೆ ಅಂಥ ಸಂದೇಶಗಳನ್ನು ತೆರೆಯುವ ಮುನ್ನ ಎಚ್ಚರಿಕೆ ವಹಿಸಿ.
ಕೊವಿಡ್-19 ಬಗ್ಗೆ ಮಾಹಿತಿ ನೀಡುವುದನ್ನೇ ಹ್ಯಾಕರ್ಸ್ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ಕೇಂದ್ರ ತನಿಖಾ ತಂಡ(ಸಿಬಿಐ) ಎಚ್ಚರಿಕೆ ನೀಡಿದೆ. ಮೊಬೈಲ್ ಗಳಲ್ಲಿ ಸಂದೇಶಗಳ ಮೂಲಕ ಅಪಾಯಕಾರಿ ಸಾಫ್ಟ್ ವೇರ್ ರವಾನಿಸಲಾಗುತ್ತಿದೆ.
ಲಸಿಕೆ ಸಂಶೋಧನೆ ಹ್ಯಾಕ್: ಅಮೆರಿಕ ಆರೋಪಕ್ಕೆ ಚೀನಾ ಹೇಳಿದ್ದೇನು?
ಟ್ರೋಜನ್ ಸಾಫ್ಟ್ ವೇರ್ ಬಳಸಿಕೊಂಡು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ವೈಯಕ್ತಿಕ ಮಾಹಿತಿಯನ್ನು ಕಳ್ಳತನ ಮಾಡುವುದಕ್ಕೆ ಹ್ಯಾಕರ್ಸ್ ಸಂಚು ರೂಪಿಸಿದ್ದಾರೆ. ಸಿಬಿಐ ಅಧಿಕಾರಿಗಳು ಈ ಬಗ್ಗೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.
ಭಾರತೀಯ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ
ಕೊರೊನಾ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಎನ್ನುವಂತಾ ಸಂದೇಶಗಳ ಮೂಲಕ ಮೊಬೈಲ್ ಗಳಿಗೆ ಟ್ರೋಜನ್ ಸಾಫ್ಟ್ ವೇರ್ ಗಳನ್ನು ರವಾನಿಸಲಾಗುತ್ತಿದೆ. ಆ ಮೂಲಕ ಬ್ಯಾಂಕಿಂಗ್, ಹಣಕಾಸು ಮಾಹಿತಿ ಹಾಗೂ ವೈಯಕ್ತಿಕ ಮಾಹಿತಿಯನ್ನು ಕದಿಯಲಾಗುತ್ತದೆ. ಕಳೆದ ಏಪ್ರಿಲ್.07ರಂದೇ ಗುಪ್ತಚರ ಇಲಾಖೆ ಸಿಬಿಐ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದೆ.
ಟ್ರೋಜನ್ ಎಂದರೇನು? ಅದರಿಂದ ಹೇಗೆ ಅಪಾಯ?
ಟ್ರೋಜನ್ ಎನ್ನುವುದು ದುರುದ್ದೇಶದಿಂದ ಕೂಡಿದ ಒಂದು ಕೋಡ್ ಅಥವಾ ಸಾಫ್ಟ್ ವೇರ್ ಆಗಿದೆ. ಮೊಬೈಲ್ ಮತ್ತು ಕಂಪ್ಯೂಟರ್ ಗಳಲ್ಲಿ ಸಂಗ್ರಹಿಸಿದ ದತ್ತಾಂಶ(ಡಾಟಾ)ಗಳನ್ನು ಕಳ್ಳತನ ಮಾಡುವುದಕ್ಕೆ, ಹಾನಿ ಉಂಟು ಮಾಡುವುದಕ್ಕೆ ಹಾಗೂ ಸಂಪೂರ್ಣವಾಗಿ ನಾಶ ಪಡಿಸುವುದಕ್ಕೆ ಹ್ಯಾಕರ್ಸ್ ಟ್ರೋಜನ್ ಸಾಫ್ಟ್ ವೇರ್ ನ್ನು ಬಳಸಿಕೊಳ್ಳುತ್ತಾರೆ.
ಮೆಸೇಜ್ ಮೂಲಕ ಮೊಬೈಲ್ ಗೆ ಟ್ರೋಜನ್ ಲಗ್ಗೆ!
ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಇ-ಮೇಲ್ ರೀತಿಯ ಸಂದೇಶವು ಬರುತ್ತದೆ. ಅದೇನು ಅಂತಾ ತಿಳಿಯಲು ಒಂದು ಬಾರಿ ಕ್ಲಿಕ್ ಮಾಡಿದ್ರೆ ನೀವು ಮೂರ್ಖರಾಗುತ್ತೀರಿ. ಏಕೆಂದರೆ ಈ ಟ್ರೋಜನ್ ಹ್ಯಾಕರ್ ಗಳು ಕಳಹಿಸಿದ ಸಂದೇಶವಾಗಿರುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿದಾಕ್ಷಣ ನಿಮ್ಮ ಮೊಬೈಲ್ ನಲ್ಲಿ ಅದು ಇನ್ ಸ್ಟಾಲ್ ಆಗುತ್ತದೆ. ಒಮ್ಮೆ ಅದನ್ನು ಓಪನ್ ಮಾಡಿದರೆ, ಟ್ರೋಜನ್ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿರುವ ಎಲ್ಲ ದತ್ತಾಂಶಗಳನ್ನು ನಾಶಪಡಿಸುತ್ತದೆ.
ಬ್ಯಾಂಕ್ ನಲ್ಲಿ ಕೂಡಿಟ್ಟ ಹಣದ ಮೇಲೆ ಹ್ಯಾಕರ್ಸ್ ಕಣ್ಣು
ಟ್ರೋಜನ್ ಸಾಫ್ಟ್ ವೇರ್ ಮೂಲಕ ಬ್ಯಾಂಕಿಂಗ್ ಗೆ ಸಂಬಂಧಿಸಿದ ಮಾಹಿತಿ ಹಾಗೂ ಕ್ರೆಡಿಟ್, ಡೆಬಿಟ್ ಕಾರ್ಡ್ ಗಳ ಪಾಸ್ ವರ್ಡ್ ಗಳನ್ನು ಹ್ಯಾಕರ್ಸ್ ಪಡೆದುಕೊಳ್ಳುತ್ತಾರೆ. ಅನಧಿಕೃತ ವಹಿವಾಟಿನ ಮೂಲಕ ಹಣಕ್ಕೆ ಕನ್ನ ಹಾಕುವ ಅಪಾಯವಿರುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹ್ಯಾಕರ್ಸ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಮೆಸೇಜ್ ಪಾಸ್ ಮಾಡಲಾಗಿದೆ.
ಝೂಮ್ ಆಪ್ ಬಳಕೆಗೂ ಆರಂಭದಲ್ಲಿ ವಿರೋಧ
ಭಾರತ ಲಾಕ್ ಡೌನ್ 4.0 ಸಂದರ್ಭದಲ್ಲಿ ಆನ್ ಲೈನ್ ತರಗತಿ, ಕಂಪನಿಗಳಿಗೆ ಸಂಬಂಧಿಸಿದ ಮೀಟಿಂಗ್ ಗಳನ್ನು ನಡೆಸುವುದಕ್ಕೆ ಝೂಮ್ ಆಪ್ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಆರಂಭದಲ್ಲಿ ಈ ಝೂಮ್ ಆಪ್ ಕೂಡಾ ಅಷ್ಟೊಂದು ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರವು ಆಪ್ ಬಳಕೆಗೆ ವಿರೋಧ ವ್ಯಕ್ತಪಡಿಸಿತ್ತು. ನಂತರದಲ್ಲಿ ಕಂಪನಿಯು ಈ ಆಪ್ ನಿಂದ ಯಾವುದೇ ರೀತಿ ಮಾಹಿತಿ ಕಳ್ಳತನ ಆಗುವ ಸಾಧ್ಯತೆಗಳಿಲ್ಲ ಎಂದು ಸ್ಪಷ್ಟನೆ ನೀಡಿತು.