ಗ್ಯಾನವಾಪಿ ಪ್ರಕರಣ: ಒಬ್ಬ ಹಿಂದು ಅರ್ಜಿದಾರ ಕೇಸ್ನಿಂದ ಹೊರಕ್ಕೆ; ಮೇ 9ಕ್ಕೆ ವಿಚಾರಣೆ
ವಾರಣಾಸಿಯ ಕಾಶಿ ವಿಶ್ವನಾಥ್ ಮಂದಿರದ ಬದಿಯಲ್ಲಿರುವ ಗ್ಯಾನವಾಪಿ ಮಸೀದಿ (Gyanvapi Masjid Complex) ವಿಚಾರ ಹಿಂದೂ ಮುಸ್ಲಿಮ್ ನಡುವಿನ ತಿಕ್ಕಾಟಕ್ಕೆ ಕಾರಣವಾಗುತ್ತಿದೆ. ಪುರಾತನ ಹಿಂದೂ ಮಂದಿರ ಕೆಡವಿ ಆ ಸ್ಥಳದಲ್ಲಿ ಗ್ಯಾನವಾಪಿ ಮಸೀದಿ ಕಟ್ಟಲಾಗಿದೆ ಎಂಬುದು ಕೆಲ ಹಿಂದೂಗಳ ಆರೋಪ.
ಗ್ಯಾನವಾಪಿ ಮಸೀದಿ ಆವರಣದಲ್ಲಿ ಶೃಂಗಾರ್ ಗೌರಿ ಮತ್ತಿತರ ದೇವರುಗಳ ವಿಗ್ರಹಗಳಿದ್ದು ಅಲ್ಲಿ ದಿನವೂ ಪೂಜೆ ಸಲ್ಲಿಸಬೇಕೆಂದು ಐವರು ಮಹಿಳೆಯರು ಕಳೆದ ವರ್ಷ ವಿಶೇಷ ಕೋರ್ಟ್ ಮೆಟ್ಟಿಲೇರಿದ್ದರು. ಇಲ್ಲಿರುವ ಹಿಂದೂ ದೇವರ ವಿಗ್ರಹಗಳಿಗೆ ಯಾವುದೇ ಹಾನಿಯಾಗದಂತೆ ಭದ್ರತೆ ಒದಗಿಸಬೇಕೆಂದು ಇವರು ಕೋರಿದ್ಧಾರೆ.
ನ್ಯಾಯಾಲಯ ನೇಮಿಸಿದ ತಂಡದಿಂದ ಜ್ಞಾನವಾಪಿ ಮಸೀದಿ ಸಮೀಕ್ಷೆ ವಿಫಲ
ಈ ಅರ್ಜಿ ಮೇರೆಗೆ ವಾರಾಣಸಿಯ ಸಿವಿಲ್ ಕೋರ್ಟ್, ಅಡ್ವೊಕೇಟ್ ಆಯುಕ್ತರಿಗೆ ಈದ್ ಬಳಿಕ ಆ ಸ್ಥಳದಲ್ಲಿ ವಿಡಿಯೋ ಸರ್ವೆ ನಡೆಸಿ ಮೇ 10ರೊಳಗೆ ವರದಿ ಸಲ್ಲಿಸಬೇಕೆಂದು ಏಪ್ರಿಲ್ 26ರಂದು ಆದೇಶ ಮಾಡಿತ್ತು. ಕೋರ್ಟ್ ಆದೇಶದಂತೆ ಗ್ಯಾನವಾಪಿ ಮಸೀದಿ ಸ್ಥಳದಲ್ಲಿ ವಿಡಿಯೋ ರೆಕಾರ್ಡ್ ಮಾಡುವ ಕಾರ್ಯಕ್ಕೆ ಮುಸ್ಲಿಮ್ ಸಮುದಾಯದವರು ಅಡ್ಡಿಪಡಿಸಿದ ಘಟನೆ ನಡೆದಿದೆ.
ಜ್ಞಾನವಾಪಿ ಮಸೀದಿ ವಿವಾದ: ವೀಡಿಯೋಗ್ರಫಿ ಸಮೀಕ್ಷೆಗೆ ಮುಸ್ಲಿಮರು ವಿರೋಧ, ಪ್ರತಿಭಟನೆ
ಏನಿದು ಗ್ಯಾನವಾಪಿ ಮಸೀದಿ ವಿವಾದ?:
ಮೇ 9ರಂದು ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು, ವಿಡಿಯೋ ಶೂಟ್ಗೆ ತಡೆ ಮಾಡಿದ ಘಟನೆ ಚರ್ಚೆಯಾಗುವ ಸಾಧ್ಯತೆ ಇದೆ. ಕುತೂಹಲವೆಂದರೆ ಗ್ಯಾನವಾಪಿ ಮಸೀದಿಯಲ್ಲಿರುವ ಹಿಂದೂ ದೇವರುಗಳ ಪೂಜೆಗೆ ಅವಕಾಶ ಮಾಡಬೇಕೆಂದು ಕೋರಿದ ಐವರು ಹಿಂದೂ ಮಹಿಳೆಯರ ಪೈಕಿ ರಾಖಿ ಸಿಂಗ್ ಎಂಬಾಕೆ ತಮ್ಮ ಅರ್ಜಿಯನ್ನ ಹಿಂಪಡೆದುಕೊಂಡಿದ್ಧಾರೆ. ಅವರ ಈ ನಿರ್ಧಾರಕ್ಕೆ ಏನು ಕಾರಣ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಈ ಬೆಳವಣಿಗೆ ಬಳಿಕ ಹಿಂದೂ ಅರ್ಜಿದಾರರ ಪರ ನಿಂತಿರುವವರು ಸಭೆ ನಡೆಸಲಿದ್ದು, ಮುಂದಿನ ಕಾರ್ಯತಂತ್ರ ಹೇಗಿರಬೇಕೆಂದು ನಿರ್ಧರಿಸಲಿದ್ದಾರೆ. ಮೂಲಗಳ ಪ್ರಕಾರ, ಅಂತರಧರ್ಮೀಯ ವ್ಯಾಜ್ಯದಲ್ಲಿ ಹಿಂದೂಗಳ ಪರ ವಕಾಲತು ವಹಿಸಿಕೊಂಡು ಬಂದಿರುವ ವೇದಿಕ್ ಸನಾತನ್ ಸಂಘ ಎಂಬ ಸಂಘಟನೆಯು ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗ್ಯಾನವಾಪಿ ಮಸೀದಿಗೆ ಸಂಬಂಧಿಸಿದ ಆರೇಳು ಪ್ರಕರಣಗಳನ್ನ ವಾಪಸ್ ಪಡೆಯುವ ಆಲೋಚನೆಯಲ್ಲಿರುವುದು ತಿಳಿದುಬಂದಿದೆ.
ಗ್ಯಾನವಾಪಿ ವಿವಾದದ ಮೂಲ:
ಗ್ಯಾನವಾಪಿ ಕಾಂಪ್ಲೆಕ್ಸ್ನಲ್ಲಿ ಹಿಂದೂ ದೇವರ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ 1991ರಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಕೆಲವಾರು ಅರ್ಜಿಗಳು ಸಲ್ಲಿಕೆಯಾದವು. 17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬರ ಆದೇಶದಂತೆ ಕಾಶಿ ವಿಶ್ವನಾಥ ಮಂದಿರದ ಒಂದು ಭಾಗವನ್ನು ಕೆಡವಿ ಗ್ಯಾನವಾಪಿ ಮಸೀದಿ ಕಟ್ಟಲಾಯಿತು ಎಂಬುದು ಅರ್ಜಿದಾರರ ವಾದವಾಗಿತ್ತು. 2019ರಲ್ಲಿ ಗ್ಯಾನವಾಪಿ ಮಸೀದಿ ಕಾಂಪ್ಲೆಕ್ಸ್ನ ಇಡೀ ಪ್ರದೇಶದಲ್ಲಿ ಸರ್ವೇಕ್ಷಣೆ ನಡೆಯಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು. 2021 ಸೆಪ್ಟೆಂಬರ್ 9ರಂದು ಅಲಹಾಬಾದ್ ಹೈಕೋರ್ಟ್ ಗ್ಯಾನವಾಪಿಯಲ್ಲಿ ಸರ್ವೇಕ್ಷಣೆ ಕಾರ್ಯಕ್ಕೆ ತಡೆ ನೀಡಿತು. ಈಗ ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿ ಶೃಂಗಾರ್ ಗೌರಿ ಮತ್ತಿತರ ಹಿಂದೂ ದೇವರ ವಿಗ್ರಹಗಳಿದ್ದು ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಐವರು ಹಿಂದೂ ಅರ್ಜಿದಾರರು ಮನವಿ ಮಾಡಿದ್ದಾರೆ.
ಹಿಂದೂಗಳ ಪರ ಅರ್ಜಿದಾರರ ವಾದವೇನು?:
ಗ್ಯಾನವಾಪಿ ಮಸೀದಿಯಲ್ಲಿರುವ ಹಿಂದೂ ದೇವರುಗಳಿಗೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕು. ಇಡೀ ಸಂಕೀರ್ಣದ ಸರ್ವೇಕ್ಷಣೆ ನಡೆಯಬೇಕು ಎಂಬುದು ಹಿಂದೂ ಸಮುದಾಯದವರ ಬೇಡಿಕೆ. ಶೃಂಗಾರ್ ಗೌರಿ ವಿಗ್ರಹ ಇರುವುದನ್ನು ಋಜುವಾತುಡಿಸಲು ಮಸೀದಿಯೊಳಗೆ ಪ್ರವೇಶ ಮಾಡಬೇಕು. ಅದಕ್ಕಾಗಿ ಮಸೀದಿಗೆ ಹೋಗಿ ವಿಡಿಯೋ ಶೂಟ್ ಮಾಡಲು ಸರ್ವೇಕ್ಷಣಾ ತಂಡಕ್ಕೆ ಅನುವು ಮಾಡಿಕೊಡಬೇಕು ಎಂಬುದು ಹಿಂದೂಗಳ ವಾದ.
ಮುಸ್ಲಿಮರ ವಾದವೇನು?:
ಗ್ಯಾನವಾಪಿ ಮಸೀದಿಯ ಪಶ್ಚಿಮ ಭಾಗದ ಗೋಡೆಯ ಹೊರಗೆ ಶೃಂಗಾರ್ ಗೌರಿ ವಿಗ್ರಹ ಇರುವುದು. ಅಲ್ಲದೇ, ಮಸೀದಿಯೊಳಗೆ ವಿಡಿಯೋ ಶೂಟ್ ಮಾಡಬೇಕೆಂದು ಕೋರ್ಟ್ ಆದೇಶ ಮಾಡಿಲ್ಲ. ಬ್ಯಾರಿಕೇಡ್ ಆಚೆ ಇರುವ ಕೋರ್ಟ್ಯಾರ್ಡ್ವರೆಗೆ ಮಾತ್ರ ವಿಡಿಯೋ ರೆಕಾರ್ಡಿಂಗ್ ಮಾಡಬಹುದು ಎಂದು ಗ್ಯಾನವಾಪಿ ಮಸೀದಿಯ ನಿರ್ವಹಣಾ ಸಮಿತಿ ಹೇಳಿದೆ.
ಮಸೀದಿಯೊಳಗೆ ಮಂದಿರ ಇದೆಯಾ?:
ಗ್ಯಾನವಾಪಿ ಮಸೀದಿ ವಿವಾದದಲ್ಲಿ ಹಿಂದೂಗಳ ಪರ ವಕಾಲತು ಮಾಡುತ್ತಿರುವ ಹರಿಶಂಕರ್ ಜೈನ್ ಪ್ರಕಾರ, ಮಸೀದಿ ಕಟ್ಟಡದಿಂದ ಮಂದಿರದ ಗುರುತುಗಳೆಲ್ಲವನ್ನೂ ಹಂತಹಂತವಾಗಿ ನಾಶ ಮಾಡಲಾಗುತ್ತಿದೆ. ಮಸೀದಿ ಆವರಣದ ಒಳಗೆ ಸರ್ವೇಕ್ಷಣೆ ನಡೆಸಿದರೆ ಅಲ್ಲಿ ಪೂರ್ವದಲ್ಲಿ ಐತಿಹಾಸಿಕ ದೇವಸ್ಥಾನ ಅಸ್ತಿತ್ವದಲ್ಲಿದ್ದುದಕ್ಕೆ ಸಾಕ್ಷಿ ಸಿಗುತ್ತದೆ ಎಂದಿದ್ದಾರೆ. ಮಸೀದಿ ಹೊರಗೆ ನಡೆದ ಉತ್ಖನನದ ವೇಳೆ ಮಸೀದಿಯ ಗೋಡೆಗಳ ಮೇಲೆ ಎರಡು ಪುರಾತನ ಸ್ವಸ್ತಿಕಾ ಚಿಹ್ನೆಗಳ ಕುರುಹು ಸಿಕ್ಕವು. ದೇವರ ವಿಗ್ರಹಗಳ ಅವಶೇಷ, ದೇವರ ಮೂರ್ತಿ ಕೆತ್ತಲಾದ ಕಲ್ಲುಗಳು ಇತ್ಯಾದಿ ವಸ್ತುಗಳು ಸಿಕ್ಕಿರುವುದು ಅಲ್ಲಿ ಹಿಂದೂ ಮಂದಿರ ಅಸ್ತಿತ್ವದಲ್ಲಿದ್ದುಕ್ಕೆ ಸಾಕ್ಷಿಗಳಾಗಿವೆ ಎಂದು ಹರಿಶಂಕರ್ ಜೈನ್ ವಾದಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)