ಗುಂಪು ಹತ್ಯೆಗಳಿಗೆ ಅನವಶ್ಯಕ ಪ್ರಾಮುಖ್ಯತೆ ಕೊಡಲಾಗುತ್ತಿದೆ: ಯೋಗಿ ಆದಿತ್ಯನಾಥ
ಲಖನೌ, ಜುಲೈ 25: ಗುಂಪು ಹತ್ಯೆಗಳು ಅಷ್ಟೇನು ಪ್ರಮುಖವಾದ ವಿಷಯವಲ್ಲ ಎಂಬರ್ಥದ ಮಾತನ್ನಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, 'ಗುಂಪು ಹತ್ಯೆಗಳಿಗೆ ಅನಗತ್ಯ ಪ್ರಾಮುಖ್ಯತೆ ನೀಡಲಾಗುತ್ತಿದೆ' ಎಂದಿದ್ದಾರೆ.
ಇತ್ತೀಚೆಗಷ್ಟೆ ರಾಜಸ್ತಾನದಲ್ಲಿ ವ್ಯಕ್ತಿಯೊಬ್ಬನನ್ನು ಗೋರಕ್ಷಕರು ಹೊಡೆದು ಕೊಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಇಂದು ಬೆಳಿಗ್ಗೆಯಷ್ಟೆ ಗೋರಕ್ಷಕ ದಳವೊಂದು 5 ಜನರ ಮೇಲೆ ಹಲ್ಲೆ ನಡೆಸಿದೆ, ಸಂಜೆ ವೇಳೆಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಯೋಗಿ ಅವರು ಈ ಘಟನೆಗಳು ಅಷ್ಟೇನು ಪ್ರಮುಖವಲ್ಲ ಎಂಬರ್ಥದ ಮಾತನ್ನಾಡಿದ್ದಾರೆ.
ನಾನು ಶಾಲೆಗೆ ಹೋಗ್ಬೇಕು ಹೆಲಿಕ್ಯಾಪ್ಟರ್ ಕಳಿಸಿ: ಆದಿತ್ಯನಾಥ್ಗೆ ಪತ್ರ
'ಮನುಷ್ಯರಷ್ಟೆ ಗೋವುಗಳೂ ಮುಖ್ಯವಾದವು, ನಾವು ಎರಡನ್ನೂ ರಕ್ಷಿಸಲು ಬದ್ಧರಾಗಿದ್ದೇವೆ' ಎಂದಿರುವ ಯೋಗಿ ಅವರು ಪರೋಕ್ಷವಾಗಿ ಗೋ ರಕ್ಷಕರ ಹಿಂಸಾತ್ಮಕ ದಾಳಿಗಳನ್ನು ಬೆಂಬಲಿಸಿಯೇ ಮಾತನ್ನಾಡಿದ್ದಾರೆ.
ಗೋ ಸೇವೆಯಿಂದಲೇ ದಿನ ಪ್ರಾರಂಭಿಸುವ, ಗೋರಖನಾಥ ಮಠದ ಮಠಾಧೀಶರೂ ಆಗಿರುವ ಯೋಗಿ ಆದಿತ್ಯನಾಥ ಅವರು, ಗೋ ರಕ್ಷಕರ ದಾಳಿಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತಿದೆ.
ಮನುಷ್ಯರು ಮತ್ತು ಗೋವುಗಳು ಎರಡೂ ಮುಖ್ಯವಾದವೇ, ಎರಡಕ್ಕೂ ಪ್ರಕೃತಿಯಲ್ಲಿ ಅದರದ್ದೇ ಆದ ಸ್ಥಾನವಿದೆ ನಮ್ಮ ಸರ್ಕಾರವು ಎರಡಕ್ಕೂ ರಕ್ಷಣೆ ಕೊಡುತ್ತದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಗುಡ್ಡವನ್ನು ಬೆಟ್ಟವನ್ನಾಗಿ ತೋರಿಸಲು ಹೊರಟಿದೆ ಎಂದ ಅವರು, ಗುಂಪು ಹತ್ಯೆಯಂತಹಾ ಪ್ರಮುಖ ವಿಷಯವನ್ನು ಕ್ಷುಲ್ಲಕ ಎಂದರು. ನೀವು ಗುಂಪು ಹತ್ಯೆಯ ಬಗ್ಗೆ ಮಾತನಾಡುವುದಾದರೆ 1984 ರ ಗಲಭೆ ಬಗ್ಗೆ ಏನು ಹೇಳುತ್ತೀರಿ? ಎಂದು ಅವರು ಮರು ಪ್ರಶ್ನಿಸಿದ್ದಾರೆ.