ಬ್ರಹ್ಮಪುತ್ರಾ ನದಿಯಲ್ಲಿ ದೋಣಿ ಮಗುಚಿ 2 ಸಾವು, 30 ಮಂದಿ ನಾಪತ್ತೆ
ಗುವಾಹತಿ (ಅಸ್ಸಾಂ), ಸೆಪ್ಟೆಂಬರ್ 5: ಬ್ರಹ್ಮಪುತ್ರಾ ನದಿಯಲ್ಲಿ ಬುಧವಾರ ಮಧ್ಯಾಹ್ನ ಐವತ್ತು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಕನಿಷ್ಠ ಇಬ್ಬರು ಮೃತಪಟ್ಟು, ಮೂವತ್ತು ಮಂದಿ ನಾಪತ್ತೆಯಾಗಿದ್ದಾರೆ. ದೇಶಿ ನಿರ್ಮಿತ ದೋಣಿ ಭುಟ್-ಭುಟಿಗೆ ಎಂಜಿನ್ ಅಳವಡಿಸಲಾಗಿತ್ತು.
ಗುವಾಹತಿಯಲ್ಲಿ ದೋಣಿಯು ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಸಿಮೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು, ಈ ಘಟನೆ ಸಂಭವಿಸಿದೆ. ಯುವತಿಯ ಶವವೂ ಸೇರಿದಂತೆ ಇಬ್ಬರ ಶವ ಪತ್ತೆಯಾಗಿದೆ. ಕನಿಷ್ಠ ಮೂವತ್ತು ಮಂದಿ ನಾಪತ್ತೆಯಾಗಿದ್ದಾರೆ. ಹತ್ತು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿ ಕಾರಣಕ್ಕೆ ಪರಿಹಾರ ಕಾರ್ಯಾಚರಣೆ ಕಷ್ಟವಾಗಿದೆ.
ಆಂಧ್ರ ಪ್ರದೇಶದಲ್ಲಿ ದೋಣಿ ದುರಂತ, ಭಾರಿ ಸಾವು-ನೋವು ಶಂಕೆ
ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಗೆ ಕರೆ ಕಳುಹಿಸಿದ್ದು, ರಾಜ್ಯ ಹಾಗೂ ಎನ್ ಡಿಆರ್ ಎಫ್ ತಂಡಕ್ಕೆ ನೆರವು ನೀಡಲಿದೆ. ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸರ್ಬನಂದ ಸೋನೋವಾಲ್ ಆದೇಶ ನೀಡಿದ್ದಾರೆ. ದೋಣಿ ಮಗುಚಲು ಕಾರಣ ಏನು ಎಂಬ ಬಗ್ಗೆ ವಿಚಾರಣೆ ನಡೆಸಲು ಮುಖ್ಯ ಕಾರ್ಯದರ್ಶಿ ಜಿಷ್ಣು ಬರುವಾ ನಿರ್ದೇಶನ ನೀಡಿದ್ದಾರೆ.
ಫ್ಯಾನ್ಸಿ ಬಜಾರ್ ನಿಂದ ಉತ್ತರ ಗುವಾಹತಿಯ ಮಧ್ಯಮ್ ಖಾಂಡಕ್ಕೆ ದೋಣಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿತ್ತು. ಇಪ್ಪತ್ತೆರಡು ಮಂದಿ ಬಳಿ ಮಾತ್ರ ಅಧಿಕೃತ ಟಿಕೆಟ್ ಇತ್ತು. ಸಾಮರ್ಥ್ಯಕ್ಕಿಂತ ಹೆಚ್ಚು ಮಂದಿ ದೋಣಿಯಲ್ಲಿದ್ದರು. ಜತೆಗೆ ಹದಿನೆಂಟು ಮೋಟಾರ್ ಸೈಕಲ್ ಕೂಡ ಇದ್ದವು ಎಂದು ಕಾಮ್ ರೂಪ್ ಡೆಪ್ಯೂಟಿ ಕಮಿಷನರ್ ಕಮಲ್ ಕುಮಾರ್ ತಿಳಿಸಿದ್ದಾರೆ.