ಗುಲಾಬ್ ಚಂಡಮಾರುತ: ಆಂಧ್ರ, ಒಡಿಶಾದಲ್ಲಿ ಹೈ ಅಲರ್ಟ್, ರಾಜ್ಯದಲ್ಲೂ ಮಳೆ ಸಾಧ್ಯತೆ
ನವದೆಹಲಿ, ಸೆಪ್ಟೆಂಬರ್ 26: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ತೀರದಲ್ಲಿ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ. ಇನ್ನು ಗುಲಾಬ್ ಚಂಡಮಾರುತದಿಂದಾಗಿ ಆಂಧ್ರಪ್ರದೇಶ, ಒಡಿಶಾದಲ್ಲಿ ಭೂಕುಸಿತವೂ ಉಂಟಾಗುವ ಸಾಧ್ಯತೆಗಳು ಇದೆ ಎಂದು ವರದಿಯಾಗಿದೆ.
"ಈ ಗುಲಾಬ್ ಚಂಡಮಾರುತದಿಂದಾಗಿ ಒಡಿಶಾದ ಗೋಪಾಲ್ಪುರ ಹಾಗೂ ಆಂಧ್ರ ಪ್ರದೇಶದ ಕಾಳಿಂಗ ಪಟ್ಟಣಂನಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ. ಗಾಳಿಯು ಸುಮಾರು ಗಂಟೆಗೆ 95 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ," ಎಂದು ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.
ಕರ್ನಾಟಕದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಮುನ್ಸೂಚನೆ
ಪಾಕಿಸ್ತಾನವು ಗುಲಾಬ್ ಎಂದು ಹೆಸರಿಟ್ಟಿರುವ ಈ ಚಂಡಮಾರುತವು ಒಡಿಶಾದ ಗೋಪಾಲಪುರದ 270 ಕಿಲೋ ಮೀಟರ್ ಪೂರ್ವ-ಆಗ್ನೇಯದಲ್ಲಿ ಹಾಗೂ ಆಂಧ್ರಪ್ರದೇಶದ ಕಾಳಿಂಗ ಪಟ್ಟಣಂನಿಂದ 330 ಕಿಲೋ ಮೀಟರ್ ಪೂರ್ವದಲ್ಲಿದೆ ಎಂದು ಹವಾಮಾನ ಇಲಾಖೆಯು ಈ ಗುಲಾಬ್ ಚಂಡಮಾರುತದ ಬಗ್ಗೆ ಮಾಹಿತಿ ನೀಡಿದೆ.
"ಪ್ರಸ್ತುತ ಒಡಿಶಾದಲ್ಲಿ ಒಟ್ಟು 13 ರಾಷ್ಟ್ರೀಯ ವಿಪತ್ತು ನಿಗ್ರಹ ದಳವನ್ನು (ಎನ್ಡಿಆರ್ಎಫ್) ಹಾಗೂ ಆಂಧ್ರಪ್ರದೇದಲ್ಲಿ ಒಟ್ಟು ಐದು ಎನ್ಡಿಆರ್ಎಫ್ ಪಡೆಯನ್ನು ನಿಯೋಜನೆ ಮಾಡಲಾಗಿದೆ," ಎಂದು ಎನ್ಡಿಆರ್ಎಫ್ನ ಮಹಾನಿರ್ದೇಶಕರು ಸತ್ಯ ನಾರಾಯಣ್ ಪ್ರಧಾನ್ ತಿಳಿಸಿದ್ದಾರೆ.
ಇನ್ನು ಈ ನಡುವೆ ಒಡಿಶಾ ಸರ್ಕಾರವು ಈಗಾಗಲೇ ಸ್ಥಳಾಂತರ ಪ್ರಕ್ರಿಯೆಯನ್ನು ಆರಂಭ ಮಾಡಿದೆ. ಈ ಗುಲಾಬ್ ಚಂಡಮಾರುತಕ್ಕೆ ತುತ್ತಾಗುವ ಸಾಧ್ಯತೆ ಇರುವ ಪ್ರಮುಖ ಏಳು ಜಿಲ್ಲೆಗಳಲ್ಲಿ ಈ ಸ್ಥಳಾಂತರ ಪ್ರಕ್ರಿಯೆಯನ್ನು ಆರಂಭ ಮಾಡಲಾಗಿದೆ. ಮುಖ್ಯವಾಗಿ ಗಂಜಮ್ ಹಾಗೂ ಗಜಪತಿ ಜಿಲ್ಲೆಯ ಮೇಲೆ ಅಧಿಕ ಗಮನ ಹರಿಸಲಾಗಿದೆ. ಈ ಎರಡು ಜಿಲ್ಲೆಗಳು ಹೆಚ್ಚಾಗಿ ಈ ಗುಲಾಬ್ ಚಂಡಮಾರುತಕ್ಕೆ ಪರಿಣಾಮಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ "ಗಂಜಮ್ ಒಂದು ಜಿಲ್ಲೆಯಲ್ಲೇ ಸುಮಾರು 15 ರಕ್ಷಣಾ ಪಡೆಯನ್ನು ನಿಯೋಜಿಸಲಾಗಿದೆ," ಎಂದು ಅಧಿಕಾರಿಗಳು ಹೇಳಿದ್ದಾರೆ.
'ಗುಲಾಬ್' ಚಂಡಮಾರುತ ಪ್ರಭಾವ; ಈ ಎರಡು ರಾಜ್ಯಗಳಿಗೆ ಹೈಅಲರ್ಟ್
ನಾಲ್ಕು ತಿಂಗಳುಗಳ ಹಿಂದೆ ಯಾಸ್ ಚಂಡಮಾರುತವು ಒಡಿಶಾದಲ್ಲಿ ಭಾರೀ ನಷ್ಟ, ಪ್ರಾಣ ಹಾನಿಗೆ ಕಾರಣವಾಗಿದೆ. ಇದೀಗ ಒಡಿಶಾಕ್ಕೆ ಗುಲಾಬ್ ಚಂಡಮಾರುತವೂ ಕೂಡಾ ಅಪ್ಪಳಿಸಲಿದೆ. ಇನ್ನು ಈ ಗುಲಾಬ್ ಚಂಡಮಾರುತದ ತೀವ್ರತೆಯು 2018 ರಲ್ಲಿ ಕಾಣಿಸಿಕೊಂಡ ತಿತ್ಲಿ ಚಂಡಮಾರುತದಷ್ಟೇ ಇರಲಿದೆ ಎಂದು ಹೇಳಲಾಗಿದೆ.
ಇನ್ನು ಗುಲಾಬ್ ಚಂಡಮಾರುತದ ಹಿನ್ನೆಲೆ ಒಡಿಶಾದ ಗೋಪಾಲ್ಪುರದಲ್ಲಿ ಹಾಗೂ ಆಂಧ್ರ ಪ್ರದೇಶದ ಕಾಳಿಂಗ ಪಟ್ಟಣಂನಲ್ಲಿ ಹಲವಾರು ರೈಲುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಹಾಗೂ ಇನ್ನು ಹಲವಾರು ರೈಲುಗಳ ಹಳಿಯನ್ನು ಬದಲು ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಗುಲಾಬ್ ಚಂಡಮಾರುತದ ಹಿನ್ನೆಲೆ ಇಂದು ಸುಮಾರು ಹನ್ನೆರಡು ರೈಲುಗಳನ್ನು ರದ್ದು ಮಾಡಲಾಗಿದೆ. ಹಾಗೆಯೇ ನಾಳೆ ಆರು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಮೀನುಗಾರರಿಗೂ ಮೀನುಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.
ರಾಜ್ಯದಲ್ಲೂ ಗುಲಾಬ್ ಪರಿಣಾಮ
ಈ ನಡುವೆ ಗುಲಾಬ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿಯೂ ಕಾಣಿಸಿಕೊಳ್ಳಲಿದೆ. ಗುಲಾಬ್ ಚಂಡಮರುತದ ಕಾರಣ ಕರ್ನಾಟಕದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಅಧಿಕ ಮಳೆಯಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇನ್ನು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸೆಪ್ಟೆಂಬರ್ 28 ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಇಂದಿನಿಂದ ಎರಡು ದಿನಗಳ ಕಾಲ ಕರಾವಳಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮಾತ್ರವಲ್ಲದೇ ಬಾಗಲಕೋಟೆ, ಹಾವೇರಿ, ಕೊಪ್ಪಳ, ಕಲಬುರಗಿ, ರಾಯಚೂರು, ಯಾದಗಿರಿ, ಧಾರವಾಡ ಜಿಲ್ಲೆಯಲ್ಲಿಯೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
(ಒನ್ಇಂಡಿಯಾ ಸುದ್ದಿ)