ಗುಜರಾತ್ ಚುನಾವಣೆ: ಡಿಕೆ ಶಿವಕುಮಾರ್ ಅಖಾಡಕ್ಕಿಳಿದರೂ ಗೆಲುವು ಸುಲಭದ ತುತ್ತಲ್ಲ
ಮಂಗಳವಾರ (ಆ 8) ಗುಜರಾತ್ ನಿಂದ ರಾಜ್ಯಸಭೆಯ 3ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಹ್ಮದ್ ಪಟೇಲ್ ಮತ್ತು ಬಿಜೆಪಿ ಅಭ್ಯರ್ಥಿ ಭಲವಂತ್ ಸಿನ್ಹಾ ರಜಪೂತ್ ನಡುವೆ ತೀವ್ರ ಪೈಪೋಟಿಯಿದೆ. ಜೊತೆಗೆ, ಡಿಕೆ ಶಿವಕುಮಾರ್ ಅವರಿಗೂ ಇದರ ಫಲಿತಾಂಶ ನಿರ್ಣಾಯಕ.
ಗುಜರಾತ್ ನಿಂದ ರಾಜ್ಯಸಭೆಗೆ ಆಯ್ಕೆಯಾಗಲು ಅಭ್ಯರ್ಥಿಗಳಿಗೆ ಬೇಕಾದ ಮತ 47, ಸದ್ಯ ವಿರೋಧ ಪಕ್ಷ ಕಾಂಗ್ರೆಸ್ಸಿಗೆ ಇರುವ ಒಟ್ಟು ಮತಗಳು 51. ಆದರೆ, ಈ 51 ಮತಗಳು ಮೇಲ್ನೋಟಕ್ಕೆ ಮಾತ್ರ ಕಾಂಗ್ರೆಸ್ ಪರವಾಗಿರುವುದರಿಂದಲೇ, ಮಂಗಳವಾರ (ಆ 8) ನಡೆಯಲಿರುವ ಚುನಾವಣೆ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವುದು.
60ಸ್ಥಾನವನ್ನು ಹೊಂದಿದ್ದ ಕಾಂಗ್ರೆಸ್ಸಿನ ಕೆಲವು ಶಾಸಕರು ಬಿಜೆಪಿ ಸೇರ್ಪಡೆಗೊಂಡಿರುವುದರಿಂದ ಪಕ್ಷದ ಈಗಿನ ಬಲ 51ಕ್ಕೆ ಇಳಿದಿದೆ. ಕಾಂಗ್ರೆಸ್ ತೊರೆದಿರುವ ಶಾಸಕರಿಗೆ ಮತ ಚಲಾಯಿಸುವ ಹಕ್ಕಿಲ್ಲ. ಜೊತೆಗೆ ನೋಟಾ (None of the above) ಆಯ್ಕೆಗೆ ಸುಪ್ರೀಂಕೋರ್ಟ್ ಅಸ್ತು ಎಂದಿರುವುದರಿಂದ ಕಾಂಗ್ರೆಸ್, ಚಿಂತೆ ಪಡಬೇಕಾಗಿರುವುದು ಇಲ್ಲೇ..
ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಹಲವು ಉಪಚುನಾವಣೆಯ ಜವಾಬ್ದಾರಿಯನ್ನು ನೀಡಿತ್ತು ಮತ್ತು ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದರು ಕೂಡಾ. ಈಗ, ಗುಜರಾತಿನ ರಾಜ್ಯಸಭಾ ಚುನಾವಣೆಯ ಸರದಿ.
ಕರ್ನಾಟಕದಲ್ಲಿ ಚುನಾವಣಾ ತಂತ್ರ ರೂಪಿಸುವುದಕ್ಕೂ ಗುಜರಾತಿನಲ್ಲಿ ತಂತ್ರಗಾರಿಕೆ ಹಣೆಯುವುದಕ್ಕೂ ಬಹಳಷ್ಟು ವ್ಯತ್ಯಾಸವಿದ್ದರೂ, ಎರಡೂ ರಾಜ್ಯಗಳಲ್ಲಿ ಕೊನೆಗೆ ಕಾಮನ್ ಆಗಿ ನಿಲ್ಲುವುದು ದುಡ್ಡು. ಹಾಗಾಗಿ, ಬಿಜೆಪಿಯವರು ಕೋಟ್ಯಾಂತರ ರೂಪಾಯಿ ಆಮಿಷವೊಡ್ದುತ್ತಿದ್ದಾರೆ ಎನ್ನುವ ಕಾಂಗ್ರೆಸ್ಸಿಗರ ಆರೋಪ ನಿಜವೇ ಆದಲ್ಲಿ ಅದನ್ನು ಮೆಟ್ಟಿ ಕಾಂಗ್ರೆಸ್, ಡಿ ಕೆ ಶಿವಕುಮಾರ್ ಹೇಗೆ ನಿಲ್ಲುತ್ತಾರೆ ಎನ್ನುವುದೇ ಇಲ್ಲಿ ಕುತೂಹಲ.
ಒಂದು ವೇಳೆ ಮಂಗಳವಾರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅಹ್ಮದ್ ಪಟೇಲ್ ಜಯಗಳಿಸಿದ್ದೇ ಆದಲ್ಲಿ, ಡಿ ಕೆ ಶಿವಕುಮಾರ್ ಅವರು ಹೈಕಮಾಂಡ್ ಅಂಗಣದಲ್ಲಿ ಇನ್ನಷ್ಟು ಸನಿಹವಾಗುವುದಂತೂ ಹೌದು, ಜೊತೆಗೆ ಕರ್ನಾಟಕದಲ್ಲಿ ಡಿಕೆಶಿ ವಿರೋಧಿಗಳಿಗೂ (ಪಕ್ಷದಲ್ಲಿ) ಭಾರೀ ಹಿನ್ನಡೆಯಾಗಲಿದೆ. ಮುಂದೆ ಓದಿ..
ಪಕ್ಷದ ಅಭ್ಯರ್ಥಿ ಅಹ್ಮದ್ ಪಟೇಲ್ ಅವರಿಂದಲೇ ಪಕ್ಷಕ್ಕೆ ಹಿನ್ನಡೆ
ಕೆಲವೊಂದು ಖಚಿತ ಮಾಹಿತಿಗಳ ಪ್ರಕಾರ, ಕಾಂಗ್ರೆಸ್ಸಿಗೆ ಒಂದು ವೇಳೆ ಹಿನ್ನಡೆಯಾದರೆ ಅದು ತಮ್ಮ ಪಕ್ಷದ ಅಭ್ಯರ್ಥಿ ಅಹ್ಮದ್ ಪಟೇಲ್ ಅವರಿಂದಲೇ. ಪಟೇಲ್ ಅವರ ಉಮೇದುವಾರಿಕೆಯೇ ಕೆಲವು ಶಾಸಕರಿಗೆ ಸಹಿಸಲು ಸಾಧ್ಯವಾಗದೇ ಇರುವುದು ಮತ್ತು ಬಿಜೆಪಿಯವರ ಆಮಿಷದಿಂದ ರೆಸಾರ್ಟ್ ರಾಜಕಾರಣದ ಮೊರೆಗೆ ಕಾಂಗ್ರೆಸ್ ಹೋಗಿದ್ದು.
ಗುಜರಾತ್ ಅಸೆಂಬ್ಲಿಯಲ್ಲಿ ಬಿಜೆಪಿ 120 ಮತ್ತು ಕಾಂಗ್ರೆಸ್ 51
182ಸ್ಥಾನಗಳ ಗುಜರಾತ್ ಅಸೆಂಬ್ಲಿಯಲ್ಲಿ ಬಿಜೆಪಿ 120 ಮತ್ತು ಕಾಂಗ್ರೆಸ್ 51ಸ್ಥಾನವನ್ನು ಹೊಂದಿದೆ. ಇನ್ನು ಗುಜರಾತ್ ಪರಿವರ್ತನ್ ಪಾರ್ಟಿ ಮತ್ತು ಎನ್ಸಿಪಿ ತಲಾ ಎರಡೆರಡು ಮತ್ತು ಜೆಡಿಯು ಮತ್ತು ಪಕ್ಷೇತರರು ಒಂದೊಂದು ಸ್ಥಾನವನ್ನು ಹೊಂದಿದ್ದಾರೆ. ಗುಜರಾತಿನ ಪ್ರಭಾವಿ ಮುಖಂಡ ಶಂಕರ್ ಸಿಂಗ್ ವಘೇಲಾ ಕಾಂಗ್ರೆಸ್ ತೊರೆದಿರುವುದು ಕಾಂಗ್ರೆಸ್ಸಿಗಾಗುತ್ತಿರುವ ಬಹುದೊಡ್ಡ ಹೊಡೆತ.
ಅಮಿತ್ ಶಾ, ಸ್ಮೃತಿ ಇರಾನಿ ಗೆಲ್ಲುವುದು ಬಹುತೇಕ ಖಚಿತ
ಗೆಲ್ಲಲು 47 ಮತ ಬೇಕಿರುವುದರಿಂದ ಕಣದಲ್ಲಿರುವ ಅಮಿತ್ ಶಾ, ಸ್ಮೃತಿ ಇರಾನಿ ಗೆಲ್ಲುವುದು ಬಹುತೇಕ ಖಚಿತ, ಇನ್ನು ಮೂರನೇ ಸ್ಥಾನಕ್ಕೆ ಅಹ್ಮದ್ ಪಟೇಲ್ ಮತ್ತು ವಘೇಲಾ ಅವರ ಸೋದರ ಸಂಬಂಧಿ ಭಲವಂತ್ ಸಿನ್ಹಾ ರಜಪೂತ್ ನಡುವೆ ಸ್ಪರ್ಧೆ. ವಘೇಲಾ ಅವರ ಬಹಳಷ್ಟು ಹಿಂಬಾಲಕರು ಕಾಂಗ್ರೆಸ್ಸಿನಲ್ಲಿರುವುದರಿಂದ ಪಕ್ಷಕ್ಕೆ ಹಿನ್ನಡೆಯಾದರೆ ಆಶ್ಚರ್ಯ ಪಡಬೇಕಾಗಿಲ್ಲ.
ಎನ್ಸಿಪಿಯ ಇಬ್ಬರು ಶಾಸಕರ ಮತಯಾರಿಗೆ?
ಒಂದೊಂದು ಮತಗಳು ಮಹತ್ವ ಪಡೆದುಕೊಂಡಿರುವ ಈ ಸಮಯದಲ್ಲಿ ನಮ್ಮ ಪಕ್ಷ ಯಾರ ಪರವಾಗಿ ಮತ ಚಲಾಯಿಸಲಿದೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ ಎಂದು ಎನ್ಸಿಪಿ ಮುಖಂಡ ಪ್ರಫುಲ್ ಪಟೇಲ್ ಹೇಳಿರುವುದು ಕಾಂಗ್ರೆಸ್ಸಿಗೆ ದೊಡ್ದ ತಲೆನೋವಾಗಿದೆ. ಎನ್ಸಿಪಿಯ ಇಬ್ಬರು ಶಾಸಕರಿದ್ದಾರೆ.
ಡಿ ಕೆ ಶಿವಕುಮಾರ್ ಅಖಾಡಕ್ಕಿಳಿದಿದ್ದರೂ ಕಾಂಗ್ರೆಸ್ಸಿಗೆ ಗೆಲುವು ಸುಲಭದ ತುತ್ತಲ್ಲ
ರಾಷ್ಟ್ರಪತಿ ಚುನಾವಣೆಯಲ್ಲಿನ ಕ್ರಾಸ್ ವೋಟಿಂಗ್ ಮತ್ತು ನೋಟಾ, ಕಾಂಗ್ರೆಸ್ಸಿಗೆ ಹಿನ್ನಡೆಯಾದರೂ ಆಗಬಹುದು. ಗುಜರಾತಿನ ಸಿಎಂ ರೂಪಾನಿ ತಮ್ಮ ಪಕ್ಷದ ಮೂರೂ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದು ಖಚಿತ ವಿಶ್ವಾಸದಿಂದ ಹೇಳುತ್ತಿರುವುದು, ಕಾಂಗ್ರೆಸ್ ಪಕ್ಷವನ್ನು ಚಿಂತೆಗೀಡು ಮಾಡಿದೆ. ಹಾಗಾಗಿ, ಡಿ ಕೆ ಶಿವಕುಮಾರ್ ಅಖಾಡಕ್ಕಿಳಿದಿದ್ದರೂ ಕಾಂಗ್ರೆಸ್ಸಿಗೆ ಗೆಲುವು ಸುಲಭದ ತುತ್ತಲ್ಲ.