ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಹೈಡ್ರಾಮ, ಮತ ಎಣಿಕೆ ವಿಳಂಬ
ಅಹಮದಾಬಾದ್, ಆಗಸ್ಟ್ 8: ಗುಜರಾತ್ ರಾಜ್ಯಸಭೆ ಚುನಾವಣೆಯ ಮತ ಎಣಿಕೆ ತಡವಾಗಿ ಆರಂಭವಾಗಲಿದೆ. ಅಡ್ಡ ಮತದಾನ ಮಾಡಿದ ಕಾಂಗ್ರೆಸ್ ಶಾಸಕರ ಮತಗಳನ್ನು ರದ್ದುಗೊಳಿಸಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿರುವುದರಿಂದ ಮತ ಎಣಿಕೆ ಆರಂಭವಾಗಿಲ್ಲ.
ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿ ಪರ ಮತ ಚಲಾಯಿಸಿದ್ದಾರೆ ಎಂದು ಸ್ವತಃ ಕಾಂಗ್ರೆಸ್ ನಾಯಕ ಶಕ್ತಿ ಸಿನ್ಹಾ ಗೋಹಿಲ್ ಹೇಳಿರುವುದರಿಂದ ಅಹ್ಮದ್ ಪಟೇಲ್ ಗೆಲುವಿನ ಬಗ್ಗೆ ಅನುಮಾನಗಳು ಎದ್ದಿವೆ.
ಯಾರು ಯಾರಿಗೆ ಮತದಾನ ಮಾಡಿದ್ದಾರೆ ಎಂಬ ದೊಡ್ಡ ಮಟ್ಟದ ಗೊಂದಲಗಳು ಕೊನೆಯ ಕ್ಷಣದಲ್ಲಿ ಹುಟ್ಟಿಕೊಂಡಿವೆ. ಈ ಎಲ್ಲಾ ಅನುಮಾನಗಳಿಗೆ ಇನ್ನು ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿರುವ ಅಂತಿಮ ಫಲಿತಾಂಶ ಉತ್ತರ ನೀಡಲಿದೆ.
ಗುಜರಾತ್ ರಾಜ್ಯಸಭಾ ಚುನಾವಣೆಯ ಕ್ಷಣ ಕ್ಷಣದ ಮಾಹಿತಿಗಳ ಲೈವ್ ಕವರೇಜ್ ಇಲ್ಲಿದೆ..
5.55: ಅಡ್ಡ ಮತದಾನ ಮಾಡಿದ ಶಾಸಕ ಖಂಢಲಾ ಜಡೇಜಾ ವಜಾ ಮಾಡುವುದಾಗಿ ಎನ್.ಸಿ.ಪಿಯ ಶರದ್ ಪವಾರ್ ಹೇಳಿದ್ದಾರೆ. ಆದರೆ ಸದ್ಯಕ್ಕೆ ಅವರು ಹಾಕಿರುವ ಮತವನ್ನು ಏನೂ ಮಾಡಲು ಬರುವುದಿಲ್ಲ.
5.53: ಎನ್.ಸಿ.ಪಿಯ ಓರ್ವ ಶಾಸಕ ಕೂಡ ಬಿಜೆಪಿ ಪರವಾಗಿ ಮತದಾನ ಮಾಡಿರುವುದು ಬೆಳಕಿಗೆ ಬಂದದೆ. ಈ ಸಂಬಂಧ ಎನ್.ಸಿ.ಪಿ ನಾಯಕ ಶರದ್ ಪವಾರ್ ಮೇಲೆ ಸೋನಿಯಾ ಗಾಂಧಿ ಅಸಮಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.
5.45: ಕಾಂಗ್ರೆಸ್ ನ ರಣದೀಪ್ ಸುರ್ಜೇವಾಲಾ ಮತ್ತು ಆರ್.ಪಿ.ಎಸ್ ಸಿಂಗ್ ಅಡ್ಡ ಮತದಾನ ಮಾಡಿದ ಶಾಸಕರ ಮತಗಳನ್ನು ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಮೊರೆ ಹೋಗಿದ್ದಾರೆ. ಕೊನೆಯ ಕ್ಷಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಫಲಿತಾಂಶದ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿಸಿವೆ.
5.30: "ನಮ್ಮ ಗುಜರಾತ್ ಶಾಸಕರಿಗೆ ಛೋಟುಬಾಯಿ ವಾಸವಾರಿಗೆ ಬಿಜೆಪಿಗೆ ಮತದಾನ ಮಾಡುವಂತೆ ನಿತೀಶ್ ಕುಮಾರ್ ಹೇಳಿದ್ದರು. ಅದರಂತೆ ಅವರು ಬಿಜೆಪಿ ಮತ ಹಾಕಿದ್ದಾರೆ," ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದು ಅಹ್ಮದ್ ಪಟೇಲ್ ಗೆ ಮತ್ತಷ್ಟು ಆತಂಕ ಹುಟ್ಟಿಸಿದೆ.
5.23: ಭೋಲಾ ಭಾಯಿ ಮತ್ತು ರಾಘವ್ ಜೀ ಬಾಯಿ ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದು ಶಕ್ತಿ ಸಿನ್ಹಾ ಗೋಹಿಲ್ ಹೇಳಿದ್ದಾರೆ.
5.16: ರಾಜ್ಯಸಭೆ ಚುನಾವಣೆಯ ಫಲಿತಾಂಶಕ್ಕೂ ಮೊದಲೇ ಅಹಮದಾಬಾದ್ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ.
5.10: "ಪಕ್ಷದ ಏಜೆಂಟ್ ಅಲ್ಲದವರಿಗೆ ಮತ ಪತ್ರ ತೋರಿಸಿದರೆ ಆ ಮತಗಳು ಅಸಿಂಧುವಾಗುತ್ತವೆ. ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಮತ ಹಾಕಿದ್ದು ಮತ ಪತ್ರಗಳನ್ನು ಅಮಿತ್ ಶಾಗೆ ತೋರಿಸಿದ್ದಾರೆ. ಇದು ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ," ಎಂದ ಕಾಂಗ್ರೆಸ್ ನಾಯಕ ಶಕ್ತಿ ಸಿನ್ಹಾ ಗೋಹಿಲ್ ಹೇಳಿದ್ದಾರೆ. "ಅಧಿಕೃತ ದೃಶ್ಯಾವಳಿಗೆ ನಾವು ಮನವಿ ಸಲ್ಲಿಸಲಿದ್ದೇವೆ. ಒಂದೊಮ್ಮೆ ದೃಶ್ಯಾವಳಿ ತಿರುಚಿದರೆ ಸುಪ್ರಿಂ ಕೋರ್ಟ್ ಮೊರೆ ಹೋಗಲಿದ್ದೇವೆ," ಎಂದು ಅವರು ಗುಡುಗಿದ್ದಾರೆ.
5.00: ಮತಎಣಿಕೆ ಕೇಂದ್ರಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಚುನಾವಣಾ ಅಭ್ಯರ್ಥಿ ಅಮಿತ್ ಶಾ ಆಗಮಿಸಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದು ಮತಗಳನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
3.00: ಒಟ್ಟು 176 ಶಾಸಕರು ಮತ ಚಲಾಯಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಅಡ್ಡ ಮತದಾನ ಮಾಡಿರುವ ಶಂಕೆ ವ್ಯಕ್ತವಾಗಿದೆ.
2.30: 'ಅಹ್ಮದ್ ಪಟೇಲ್ ಗೆ ಸುಲಭ ಗೆಲುವು' ಗುಜರಾತ್ ಕಾಂಗ್ರೆಸ್ ಉಸ್ತುವಾರಿ ಅಶೋಕ್ ಗೆಹ್ಲೋಟ್ ಹೇಳಿಕೆ.
2.10: "ಕಾಂಗ್ರೆಸ್ ಪರವಾಗಿ ಸಾಕಷ್ಟು ಮತ ಚಲಾವಣೆಯಾಗಿವೆ. ನನ್ನ ಗೆಲುವು ನಿಶ್ಚಿತ," ಅಹ್ಮದ್ ಪಟೇಲ್.
2.00: ಗುಜರಾತ್ ನಲ್ಲಿ ರಾಜ್ಯಸಭಾ ಚುನಾವಣೆಗೆ ಮತದಾನ ಅಂತ್ಯ. ಫಲಿತಾಂಶಕ್ಕಾಗಿ ಕ್ಷಣಗಣನೆ.
1.00: ಬದಲಿ ಮತದಾನಕ್ಕೆ ಅವಕಾಶ ನೀಡದ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಧರ್ಷಿ ಕಾನ್ಪುರ ಖುದ್ದು ಬಂದು ಮತ ಚಲಾವಣೆ ಮಾಡಿದ್ದಾರೆ. ಅವರು ಬದಲಿ ಮತದಾನಕ್ಕೆ ಅವಕಾಶ ಕೇಳಿದ್ದರು. ಆದರೆ ಇದಕ್ಕೆ ಮೂರು ದಿನ ಹಿಂದೆಯೇ ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಹೇಳಿ, ಬದಲಿ ಮತದಾನಕ್ಕೆ ಚುನಾವಣಾಧಿಕಾರಿಗಳು ಅವಕಾಶ ನಿರಾಕರಿಸಿದ್ದರು.
12.40: ಕಾಂಗ್ರೆಸ್ ನ 43 ಮತ್ತು ಬಿಜೆಪಿಯ 61 ಶಾಸಕರು ಇಲ್ಲಿಯವರೆಗೆ ಮತದಾನ ಮಾಡಿದ್ದಾರೆ. ಒಟ್ಟು 107 ಶಾಸಕರು ಮತ ಚಲಾಯಿಸಿದ್ದಾರೆ. ಜೆಡಿಯುನ ಒಬ್ಬರು, ಎನ್.ಸಿ.ಪಿಯ ಇಬ್ಬರು ಶಾಸಕರು ಮತ ಚಲಾಯಿಸಿದ್ದಾರೆ.
12.30: ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಗುಜರಾತ್ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಆನಂದಿಬೆನ್ ಪಟೇಲ್ ಹೇಳಿದ್ದಾರೆ.
12.20: "ನಮಗೆ ಇಲ್ಲಿಯವರೆಗೆ 43 ಜನರು ಮತ ಹಾಕಿದ್ದಾರೆ. ಇನ್ನೂ ಒಬ್ಬರು ಮತ ಚಲಾಯಿಸಲು ಹೋಗಿದ್ದಾರೆ. ಜೆಡಿಯುನ ಶಾಸಕ ಛೋಟುಬಾಯಿ ವಸಾವ ನಮಗೆ ಮತ ಹಾಕಿರುವುದಾಗಿ ಬಹಿರಂಗವಾಗಿ ಹೇಳಿದ್ದಾರೆ," ಎಂದು ಕಾಂಗ್ರೆಸ್ ನ ಅರ್ಜುನ್ ಮೊದ್ವಾಡಿಯಾ ಹೇಳಿದ್ದಾರೆ.
10.50: ವಿಜಯ್ ರೂಪಾಣಿ ಹೇಳಿಕೆಯನ್ನು ತಿರಸ್ಕರಿಸಿರುವ ಎನ್'ಸಿಪಿಯ ಜಯಂತ್ ಪಟೇಲ್, "ನಾವು ಯುಪಿಎಯ ಭಾಗವಾಗಿದ್ದೇವೆ. ಹೈಕಮಾಂಡ್ ನಿರ್ದೇಶನದಂತೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇವೆ," ಎಂದಿದ್ದಾರೆ.
10.49: ನಾನು ಪ್ರಜಾಪ್ರಭುತ್ವದ ನಿಯಮದಂತೆ ಗೌಪ್ಯ ಮತದಾನ ಮಾಡಿದ್ದೇನೆ : ಮಹೇಂದ್ರ ಸಿನ್ಹಾ ವಘೇಲಾ.
10.45: "ವಿಪ್ ನಂತೆ ಮತಚಲಾಯಿಸಿದ್ದೇವೆ. ನಮ್ಮ ಎಲ್ಲಾ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ," ಮುಖ್ಯಮಂತ್ರಿ ವಿಜಯ್ ರೂಪಾಣಿ. ಅವರು ಎನ್.ಸಿ.ಪಿಯ ಇಬ್ಬರೂ ಶಾಸಕರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ. ಇದು ಕುತೂಹಲ ಹುಟ್ಟಿಸಿದೆ.
10.06: "ಎಲ್ಲರಿಗಿಂತ ಹೆಚ್ಚಿನ ಮತವನ್ನು ಕಾಂಗ್ರೆಸ್ ನ ಅಹ್ಮದ್ ಪಟೇಲ್ ಪಡೆದು ವಿಜಯಿಯಾಗಲಿದ್ದಾರೆ," ಕಾಂಗ್ರೆಸ್ ಸಚೇತಕ ಶೈಲೇಶ್ ಪರ್ಮಾರ್ ಹೇಳಿಕೆ.
10.00: ಗುಜರಾತ್ ವಿಧಾನಸಭೆಗೆ ಕಾಂಗ್ರೆಸ್ ಶಾಸಕರ ಆಗಮನ.
9.50: ಕಾಂಗ್ರೆಸ್ ನ ಇಬ್ಬರು ಶಾಸಕರಿಂದ ಬಿಜೆಪಿ ಅಭ್ಯರ್ಥಿ ಬಲ್ವಂತ್ ಸಿಂಗ್ ರಜಪೂತ್ ಪರ ಮತ ಚಲಾವಣೆ. ಈ ಕುರಿತು ಶಾಸಕರಾದ ರಾಘವ್ಜೀ ಪಟೇಲ್ ಮತ್ತು ಧರ್ಮೇಂದ್ರ ಜಡೇಜಾರಿಂದ ಬಹಿರಂಗ ಹೇಳಿಕೆ. ಇನ್ನು ಈ ಶಾಸಕರ ವಿರುದ್ಧ ಕಾಂಗ್ರೆಸ್ ನಾಯಕ ಶಕ್ತಿ ಸಿಂಗ್ ಗೋಹಿಲ್ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಶಾಸಕ ಅರ್ಜುನ್ ಮೊಧ್ವಾಡಿಯಾ ಹೇಳಿದ್ದಾರೆ.
9.40: "ಎಲ್ಲವೂ ನಿನ್ನೆಯೇ ನಿರ್ಧಾರವಾಗಿದೆ. ನಿಮಗೆ ಎಲ್ಲಾ ಸಂಜೆ ವೇಳೆಗೆ ಗೊತ್ತಾಗಲಿದೆ," ಎಂದು ಎನ್.ಸಿ.ಪಿಯ ಶಾಸಕ ಕಂಧಾಲ್ ಜಡೇಜಾ ಹೇಳಿದ್ದಾರೆ. ಗುಜರಾತ್ ವಿಧಾನಸಭೆಯಲ್ಲಿ ಎನ್.ಸಿ.ಪಿಯ ಇಬ್ಬರು ಶಾಸಕರಿದ್ದು ಇಬ್ಬರೂ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ.
9.30: "ನನಗೆ ವಿಶ್ವಾಸ ಇರುವಾಗ ಪಕ್ಷಕ್ಕೂ ವಿಶ್ವಾಸವಿದೆ. ನಾವೇ ಜಯಶಾಲಿಯಾಗುತ್ತೇವೆ. ಫಲಿತಾಂಶಕ್ಕಾಗಿ ಕಾಯಿರಿ," ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಹೇಳಿಕೆ.
9.03: ಮತದಾನ ಮಾಡಲು ವಿಧಾನಸಭೆಗೆ ಬಂದ ಮಾಜಿ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಸಿನ್ಹಾ ವಘೇಲಾ
9.00: ರಾಜ್ಯಸಭೆ ಚುನಾವಣೆಯ ಮತದಾನ ಆರಂಭ
8.52: ರಾಜ್ಯ ವಿಧಾನಸಭೆಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿಗಳಾದ ಅಮಿತ್ ಶಾ, ಸ್ಮೃತಿ ಇರಾನಿ. ಇವರಿಗೆ ಮುಖ್ಯಮಂತ್ರಿ ವಿಜಯ್ ರೂಪಾಣಿ ಸಾಥ್.
7.52: ನೀಜಾನಂದ್ ರೆಸಾರ್ಟ್ ನಿಂದ ಕಾಂಗ್ರೆಸ್ ಶಾಸಕರು ವಿಧಾನಸಭೆಯತ್ತ ಪ್ರಯಾಣ
6.52: ಕಾಂಗ್ರೆಸ್ ಶಾಸಕರಿದ್ದ ನೀಜಾನಂದ್ ರೆಸಾರ್ಟ್ ಗೆ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಅಹ್ಮದ್ ಪಟೇಲ್ ಆಗಮನ