ಜಾಮೀನು ಪಡೆದ ಬೆನ್ನಲ್ಲೇ ಶಾಸಕ ಜಿಗ್ನೇಶ್ ಮೇವಾನಿ ಮತ್ತೆ ಬಂಧನ
ನವದೆಹಲಿ, ಏಪ್ರಿಲ್ 25: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡಿದ ಪ್ರಕರಣದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅಸ್ಸಾಂನ ನ್ಯಾಯಾಲಯದಿಂದ ಜಾಮೀನು ಪಡೆದ ಬೆನ್ನಲ್ಲೇ ಮತ್ತೆ ಹೊಸ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ.
ಟ್ವೀಟ್ ಪ್ರಕರಣದಲ್ಲಿ ಜಾಮೀನು ಅರ್ಜಿಯ ಆದೇಶವನ್ನು ನಿನ್ನೆ ನ್ಯಾಯಾಲಯ ಕಾಯ್ದಿರಿಸಿತ್ತು. ಇಂದು ಆದೇಶ ಪ್ರಕಟ ಮಾಡಿದ್ದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಸೋಮವಾರ ಅಸ್ಸಾಂನ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಆ ಬೆನ್ನಲ್ಲೇ ಅಸ್ಸಾಂ ಪೊಲೀಸರು ಜಿಗ್ನೇಶ್ ಮೇವಾನಿಯನ್ನು ಮತ್ತೆ ಬಂಧನ ಮಾಡಿದ್ದಾರೆ.
Breaking; ಶಾಸಕ ಜಿಗ್ನೇಶ್ ಮೇವಾನಿಗೆ ಜಾಮೀನು ಮಂಜೂರು
ಜಿಗ್ನೇಶ್ ಮೇವಾನಿಯನ್ನು ಅಸ್ಸಾಂನ ಬರ್ಪೇಟಾ ಪೊಲೀಸರು ಬಂಧನ ಮಾಡಿದ್ದರು. ಆದರೆ, ಗುಜರಾತ್ ಶಾಸಕರನ್ನು ಯಾವ ಪ್ರಕರಣದಲ್ಲಿ ಮತ್ತೆ ಬಂಧನ ಮಾಡಲಾಗಿದೆ ಎಂದು ಇನ್ನೂ ಕೂಡಾ ತಿಳಿಸಿಲ್ಲ. ಈ ಹೊಸ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗೆ ತನ್ನ ಕಾರ್ಯ ಮಾಡಲು ಅಡ್ಡಿ ಮಾಡಿದ ಆರೋಪ ಕೂಡಾ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಧಾನ ಮಂತ್ರಿ ಮೋದಿ ವಿರುದ್ಧ ಟೀಕೆಗೆ ಬಂಧನ
ಅಸ್ಸಾಂನ ಕೊಕ್ರಜಾರ್ನ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಜಿಗ್ನೇಶ್ ಮೇವಾನಿ ವಿರುದ್ಧ ದೂರು ದಾಖಲಿಸಿದ ನಂತರ ಅಸ್ಸಾಂ ಪೊಲೀಸರ ತಂಡವು ಗುರುವಾರ ಗುಜರಾತ್ನ ಪಾಲನ್ಪುರದಲ್ಲಿ ಜಿಗ್ನೇಶ್ ಮೇವಾನಿಯನ್ನು ಬಂಧನ ಮಾಡಿತ್ತು.
ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬಂಧನಕ್ಕೆ ಏನು ಕಾರಣ?
"ಗೋಡ್ಸೆಯನ್ನು ದೇವರೆಂದು ಪರಿಗಣಿಸುವ" ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನಲ್ಲಿ ಕೋಮು ಘರ್ಷಣೆಗಳ ವಿರುದ್ಧ ಶಾಂತಿ ಮತ್ತು ಸೌಹಾರ್ದತೆಗಾಗಿ ಮನವಿ ಮಾಡಬೇಕು ಎಂಬರ್ಥದಲ್ಲಿ ಮೇವಾನಿ ಟ್ವೀಟ್ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಭಬಾನಿಪುರದ ನಿವಾಸಿ ಅನುಪ್ ಕುಮಾರ್ ಡೇ ಎಂಬಾತ ನೀಡಿದ ದೂರಿನ ಆಧಾರದ ಮೇಲೆ ಮೇವಾನಿ ಬಂಧನವಾಗಿದೆ. ಮೇವಾನಿ ವಿರುದ್ಧ ಸೆಕ್ಷನ್ 120 ಬಿ (ಅಪರಾಧ ಪಿತೂರಿ), ಸೆಕ್ಷನ್ 153 (ಎ) (ನಡುವೆ ದ್ವೇಷವನ್ನು ಉತ್ತೇಜಿಸುವ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದಾಖಲೆ ತೋರಿಸುತ್ತದೆ. ಸೆಕ್ಷನ್ 295(ಎ) (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ವಿರೂಪಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಮತ್ತು ಐಟಿ ಕಾಯಿದೆ ಉಲ್ಲಂಘನೆ ಆರೋಪ ಮಾಡಲಾಗಿದೆ.
ಇದು ಬಿಜೆಪಿ, ಆರ್ಎಸ್ಎಸ್ ಷತ್ಯಂತ್ರ ಎಂದಿದ್ದ ಜಿಗ್ನೇಶ್
"ಇದು ಬಿಜೆಪಿ ಮತ್ತು ಆರ್ಎಸ್ಎಸ್ನ ಷಡ್ಯಂತ್ರ. ಅವರು ನನ್ನ ವರ್ಚಸ್ಸನ್ನು ಹಾಳುಮಾಡಲು ನನ್ನ ಬಂಧನ ಮಾಡಿಸಿದ್ದಾರೆ. ಬಿಜೆಪಿ, ಆರ್ಎಸ್ಎಸ್ ಮುಖಂಡರು ಇದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ರೋಹಿತ್ ವೇಮುಲಾಗೆ ಕೂಡಾ ಈ ಸರ್ಕಾರ ಇದನ್ನೇ ಮಾಡಿದ್ದು. ಚಂದ್ರಶೇಖರ್ ಆಜಾದ್ಗೆ ಕೂಡಾ ಇದನ್ನೇ ಮಾಡಿದ್ದು. ಈಗ ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ," ಎಂದು ಜಿಗ್ನೇಶ್ ಮೇವಾನಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು.