ಚಿರತೆ ಮರಿಯನ್ನು 'ದತ್ತು' ತೆಗೆದುಕೊಂಡು ಹಾಲುಣಿಸಿದ ಸಿಂಹಿಣಿ
ಅಹಮದಾಬಾದ್, ಜನವರಿ 10: ಮಾನವ ಸಂಬಂಧಗಳ ನಡುವಿನ ಬಾಂಧವ್ಯ ಕಡಿಮೆಯಾಗುತ್ತಿರುವ ಈ ಆಧುನಿಕ ಯುಗದಲ್ಲಿ ಪ್ರಾಣಿಗಳೇ ಮನುಷ್ಯನಿಗೆ 'ಮನುಷ್ಯತ್ವ'ದ ಪಾಠ ಹೇಳುತ್ತಿವೆ.
ಮನುಷ್ಯನ ನಡುವೆ ಧರ್ಮ, ಜಾತಿ, ವರ್ಣ, ಅಂತಸ್ತಿನ ಭೇದಗಳಿರುವಂತೆ ಈ ಪ್ರಾಣಿಗಳಿಗಿಲ್ಲ. ಅವುಗಳಿಗೆ 'ಮಾನವೀಯತೆ' ಮೆರೆಯಲು ತಮ್ಮ 'ಜಾತಿ'ಯವರೇ ಆಗಬೇಕಿಂದಿಲ್ಲ. ಅಂತರ್ ಸಂಕುಲ ಜೀವಿಗಳ ನಡುವಿನ ಪ್ರೀತಿ, ವಾತ್ಸಲ್ಯಕ್ಕೆ ನಿದರ್ಶನಗಳನ್ನು ಆಗಾ ನೋಡುತ್ತಿರುತ್ತೇವೆ. ಇದಕ್ಕೆ ಇತ್ತೀಚಿನ ಎರಡು ಘಟನೆಗಳು ತಾಜಾ ಉದಾಹರಣೆಯಾಗಿ ದೊರೆತಿವೆ.
ರೈಲು ಹಳಿ ಮೇಲೆ ಗಿರ್ ಅರಣ್ಯದ ಮೂರು ಸಿಂಹಗಳ ಕಳೇಬರ ಪತ್ತೆ
ಪ್ರಾಣಿಗಳ ಸ್ನೇಹದ ದೃಶ್ಯಗಳು ಬಲು ಬೇಗ ವೈರಲ್ ಆಗುತ್ತವೆ. ಇಂತಹ ಇತ್ತೀಚಿನ ಎರಡು ಘಟನೆಗಳ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದರೆ, ಇನ್ನೊಂದು ಘಟನೆ ಗುಜರಾತ್ನ ಗಿರ್ ಅರಣ್ಯ ಪ್ರದೇಶದಲ್ಲಿ ನಡೆದಿರುವುದು.
|
ತಬ್ಬಲಿಯಾಗಿದ್ದವು ನಾಯಿ ಮರಿಗಳು
ಉತ್ತರ ಪ್ರದೇಶದಲ್ಲಿ ನಾಯಿಯೊಂದು ಮರಿಗಳಿಗೆ ಜನ್ಮವಿತ್ತ ಕೆಲವು ದಿನಗಳ ಬಳಿಕ ಅಪಘಾತದಲ್ಲಿ ಮೃತಪಟ್ಟಿತ್ತು. ಅಮ್ಮನನ್ನು ಕಳೆದುಕೊಂಡ ಈ ನಾಲ್ಕು ಮರಿಗಳು ತಬ್ಬಲಿಯಾಗಿದ್ದವು. ಇನ್ನೂ ಸರಿಯಾಗಿ ನಡೆದಾಡಲು ಬಾರದು ಮರಿಗಳು ಬದುಕುವುದಾದರೂ ಹೇಗೆ?
ಛಲಬಿಡದೆ ಹಿಮದ ಬೆಟ್ಟವೇರಿದ ಕರಡಿಮರಿ ಸಾಹಸದ ಹಿಂದಿನ ದುಃಖದ ಕಥೆ
ಹಸುವೇ ಮಮತೆಯ ತಾಯಿಯಾಯಿತು
ಆ ಮರಿಗಳಿಗೆ ಹೊಸ ಅಮ್ಮ ದೊರಕಿದಳು. ಅವುಗಳಿಗೆ ಹಾಲುಣಿಸಿ ಪೋಷಿಸುತ್ತಿದೆ ಒಂದು ಹಸು. ಇದು ಹೇಗೆ ಸಾಧ್ಯವಾಯಿತು ಎನ್ನುವುದಕ್ಕೆ ಸ್ಪಷ್ಟ ಉತ್ತರವಿಲ್ಲ. ಅಮ್ಮನಿಲ್ಲದೆ ಅನಾಥವಾಗಿದ್ದ ಮರಿಗಳನ್ನು ಕಂಡ ಆಕಳು ಸ್ವತಃ ಬುದ್ದಿ ಉಪಯೋಗಿಸಿ ಮಲಗಿ ಮರಿಗಳಿಗೆ ಹಾಲು ಉಣಿಸಿತೇ ಅಥವಾ ಮನುಷ್ಯರೇ ಅದಕ್ಕೆ ಹಾಗೆ ಅಭ್ಯಾಸ ಮಾಡುವಂತೆ ಮಾಡಿದರೇ ತಿಳಿದಿಲ್ಲ. ಕಾಮಧೇನು ಎಂದು ಕರೆಯಲಾಗುವ ಹಸುವಿನಿಂದಾಗಿ ನಾಲ್ಕು ಮರಿ ಜೀವಗಳು ಬದುಕುಳಿದಿವೆ. ಹಸುವು ನಾಯಿ ಮರಿಗಳಿಗೆ ಹಾಲುಣಿಸುವ ವಿಡಿಯೋ ವೈರಲ್ ಆಗಿದೆ.
ಅಪಾಯದಲ್ಲಿ ಜೀವವೈವಿಧ್ಯ: 48 ವರ್ಷದಲ್ಲಿ ಶೇ 60ರಷ್ಟು ಪ್ರಾಣಿಗಳ ನಾಶ
|
ಗಿರ್ ಅರಣ್ಯ ಧಾಮದಲ್ಲಿನ ಅಚ್ಚರಿ
ಇದೇ ರೀತಿಯ ಇನ್ನೊಂದು ಅಪರೂಪದ ಅಚ್ಚರಿಯ ಘಟನೆ ಗುಜರಾತ್ನಲ್ಲಿ ವರದಿಯಾಗಿದೆ. ಉತ್ತರ ಪ್ರದೇಶದ ಘಟನೆಯಲ್ಲಿ ಮನುಷ್ಯರ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಬಹುದು. ಆದರೆ, ಗಿರ್ ಅರಣ್ಯ ಪ್ರದೇಶದಲ್ಲಿ ಮನುಷ್ಯರು ಹೀಗೆ ಕೈ ಆಡಿಸುವ ಅವಕಾಶವೇ ಇರಲಿಲ್ಲ. ಏಕೆಂದರೆ ಅಲ್ಲಿ ಕಂಡುಬಂದಿರುವುದು ಸಿಂಹಿಣಿ ಮತ್ತು ಚಿರತೆ ಮರಿಗಳ ನಡುವಿನ ವಾತ್ಸಲ್ಯದ ದೃಶ್ಯ.
ಗಿರ್ ಅರಣ್ಯ ಪ್ರದೇಶದಲ್ಲಿ ತಾಯಿಂದ ಬೇರ್ಪಟ್ಟ ಒಂದೂವರೆ ತಿಂಗಳ ಚಿರತೆ ಮರಿಯನ್ನು ಸಿಂಹಿಣಿಯೊಂದು 'ದತ್ತು' ತೆಗೆದುಕೊಂಡು ಸಲಹುತ್ತಿದೆ.
ಚಿರತೆ ಮರಿಗೂ ಹಾಲುಣಿಸುತ್ತಿದೆ ಸಿಂಹ
ತನ್ನ ಎರಡು ಮರಿಗಳೊಟ್ಟಿಗೆ ಚಿರತೆ ಮರಿಗೂ ಸಿಂಹಿಣಿ ಹಾಲು ನೀಡುತ್ತಿದೆ. ತನ್ನೊಡನೆ ಅರಣ್ಯ ಸುತ್ತಾಡಿಸುತ್ತಿದೆ. ಈ ಅಸಹಜ ಎನಿಸುವ ಬಾಂಧವ್ಯದ ದೃಶ್ಯ ವಾರದ ಹಿಂದೆ ಅರಣ್ಯ ಸಿಬ್ಬಂದಿಯೊಬ್ಬರ ಕಣ್ಣಿಗೆ ಬಿದ್ದಿದೆ.
ಗಿರ್ ಪೂರ್ವ ವಿಭಾಗದಲ್ಲಿ ಈ ಅಪರೂಪದ ಸನ್ನಿವೇಶ ಕಂಡುಬಂದಿದೆ. ಆದರೆ, ಅದರ ಸುತ್ತಲೂ ಇರುವ ಸಿಂಹಗಳು ಮರಿಯನ್ನು ಕೊಲ್ಲುವ ಸಾಧ್ಯತೆ ಇರುವುದರಿಂದ ಅವುಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಧೀರಜ್ ಮಿಟ್ಟಲ್ ಹೇಳಿದ್ದಾರೆ.
ಈ ಅಪರೂಪದ ಬಂಧನದ ಚಿತ್ರ ಹಾಗೂ ವಿಡಿಯೋಗಳನ್ನು ಮಿಟ್ಟಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸಿಂಹಿಣಿಯ ಮಡಿಲಿನಲ್ಲಿ ಆಡುತ್ತಿದೆ ಚಿರತೆ
'ಇದು ನಿಜಕ್ಕೂ ಅಪರೂಪದ ಅದ್ಭುತ. ಏಕೆಂದರೆ ಸಾಮಾನ್ಯವಾಗಿ ಸಿಂಹಗಳು ಚಿರತೆಗಳನ್ನು ಕೊಲ್ಲುತ್ತವೆ. ಈ ಪ್ರಕರಣದಲ್ಲಿ ನಾವು ಸಿಂಹಗಳ ಬಗ್ಗೆ ತಿಳಿದುಕೊಂಡಿರುವುದಕ್ಕೆ ತದ್ವಿರುದ್ಧವಾಗಿದೆ. ಈ ಚಿರತೆ ಮರಿ ಬಗ್ಗೆ ಸಿಂಹಿಣಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳುತ್ತಿದೆ. ಈ ಪ್ರದೇಶದಲ್ಲಿರುವ ಇತರೆ ಸಿಂಹಗಳಿಂದ ಆ ಮರಿಯನ್ನು ರಕ್ಷಿಸುತ್ತಿದೆ' ಎಂದು ಅವರು ವಿವರಿಸಿದ್ದಾರೆ.
ಮಿಟ್ಟಲ್ ಅವರು ಹಂಚಿಕೊಂಡಿರುವ ವಿಡಿಯೋ ಮತ್ತು ಫೋಟೊಗಳಲ್ಲಿ ಚಿರತೆ ಮರಿಯು ತನ್ನ ಅಮ್ಮನ ಮಡಿಲಿನಲ್ಲಿ ನಿರಾತಂಕವಾಗಿ ಆಡುವಂತೆಯೇ ಸಿಂಹಿಣಿ ಮತ್ತು ಅದರ ಮರಿಗಳೊಂದಿಗೆ ಆಡಿಕೊಂಡಿರುವುದು ಕಾಣಿಸುತ್ತದೆ.
|
ಚಿರತೆ ಮರಿ ಬಗ್ಗೆ ಕಾಳಜಿ
ಸಿಂಹಿಣಿ ಹೊರಡಿಸುವ ಸದ್ದು ಮತ್ತು ಸಂಕೇತಗಳನ್ನು ಚಿರತೆ ಮರಿ ಹೇಗೆ ಅರ್ಥಮಾಡಿಕೊಳ್ಳುತ್ತದೆ ಎನ್ನುವುದು ಅಚ್ಚರಿ ಮೂಡಿಸುತ್ತದೆ. ಅರಣ್ಯದಲ್ಲಿ ಸುತ್ತಾಡುವ ಸಂದರ್ಭದಲ್ಲಿ ಚಿರತೆ ಮರಿಯು ತನ್ನ ಹಾಗೂ ತನ್ನ ಮರಿಗಳ ಚುರಕುತನಕ್ಕೆ ಹೊಂದಿಕೊಳ್ಳಲಾರದು ಎಂಬುದನ್ನು ಅರ್ಥಮಾಡಿಕೊಂಡು ಸಿಂಹಿಣಿ ಹೆಚ್ಚು ಕಾಳಜಿ ತೋರಿಸುತ್ತಿದೆ ಎಂದು ಮಿಟ್ಟಲ್ ಹೇಳಿದ್ದಾರೆ.
ತಾಯಿ ಚಿರತೆಯು ಮರಿಯನ್ನು ತ್ಯಜಿಸಿರಬಹುದು ಅಥವಾ ಆಕಸ್ಮಿಕವಾಗಿ ಕಳೆದುಕೊಂಡಿರಬಹುದು. ಅಥವಾ ಅದು ಸುತ್ತಮುತ್ತಲೇ ಓಡಾಡಿಕೊಂಡಿದ್ದು, ಭಯದಿಂದ ಸಿಂಹಿಣಿ ಬಳಿ ಹೋಗದೆಯೇ ಇರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಕೃತಿಗೆ ಬಿಟ್ಟಿದ್ದು
ಈ ಮರಿಯನ್ನು ಸಿಂಹದಿಂದ ದೂರ ಕರೆತಂದು ಚಿರತೆಯೊಂದಿಗೆ ಬಿಡುವ ಪ್ರಯತ್ನದ ಬಗ್ಗೆ ಅರಣ್ಯಾಧಿಕಾರಿಗಳು ಯೋಚಿಸುತ್ತಿಲ್ಲ. ಬದಲಾಗಿ ಎಲ್ಲವನ್ನೂ ಪ್ರಕೃತಿ ಮಾತೆಗೆ ಬಿಟ್ಟಿದ್ದಾರೆ.
'ಮರಿಯನ್ನು ರಕ್ಷಿಸುವುದರ ಯಾವುದೇ ಯೋಜನೆ ಇಲ್ಲ. ಪ್ರಕೃತಿಯ ಮಧ್ಯೆ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಸಿಂಹಗಳ ಮೇಲೆ ಎಚ್ಚರಿಕೆಯ ಕಣ್ಣಿರಿಸಿದ್ದೇವೆ' ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿಟಿ ವಾಸವದ ತಿಳಿಸಿದ್ದಾರೆ.