ಕೋಮುವಾದ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಸಿನ್ಹಾ ಟಾಂಗ್
ಅಹಮದಾಬಾದ್, ಡಿಸೆಂಬರ್ 11: ಕಾಂಗ್ರೆಸ್ ಬಿಡಿ, ಇದೀಗ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವವರು ಅವರ ಪಕ್ಷದಲ್ಲೇ ಹುಟ್ಟಿಕೊಂಡಿದ್ದಾರೆ..
ಹಿರಿಯ ನಟ ಹಾಗೂ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧ್ವನಿ ಎತ್ತಿದ್ದಾರೆ.
ಗುಜರಾತ್ ಚುನಾವಣಾ ಭಾಷಣದಲ್ಲಿ ಪಾಕಿಸ್ತಾನ ಹೈಕಮಿಷನರ್ ಜತೆ ಸಭೆ ನಡೆಸಿದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ನಡೆಯನ್ನು ಮೋದಿ ಪ್ರಶ್ನಿಸಿದ್ದರು. ಇದೀಗ ಮೋದಿ ನಿಲುವನ್ನು ಟೀಕಿಸಿ ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.
"ಗೌರವಾನ್ವಿತರೇ! ಯಾವುದೇ ರೀತಿಯಲ್ಲಿ ಚುನಾವಣೆಗಳನ್ನು ಗೆಲ್ಲಲು, ಮತ್ತು ಅದೂ ಚುನಾವಣಾ ಪ್ರಕ್ರಿಯೆಯ ಅಂತ್ಯದಲ್ಲಿ, ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಪ್ರತಿ ದಿನವೂ ಹೊಸ, ಅಸಮಂಜಸವಾದ ಮತ್ತು ನಂಬಲಾಗದ ಕಥೆಗಳನ್ನು ಹೇಳುವ ಅಗತ್ಯವಿದೆಯೇ? ಈಗ ಅವರನ್ನು ಪಾಕ್ ಹೈ ಕಮಿಷನರ್ ಮತ್ತು ಜನರಲ್ಗಳಿಗೆ ಲಿಂಕ್ ಮಾಡುತ್ತಿರುವಿರಾ? ಅಧ್ಭುತ!," ಎಂದು ಟ್ವೀಟ್ ಮಾಡಿದ್ದಾರೆ.
ಅಷ್ಟು ಮಾತ್ರವಲ್ಲ, "ಸರ್! ಹೊಸ ಟ್ವಿಸ್ಟ್ ಮತ್ತು ತಿರುವುಗಳು, ಕಥೆಗಳ ಬದಲಿಗೆ, ನಾವು ನೀಡಿದ್ದ ಭರವಸೆಗಳಾದ ವಸತಿ, ಅಭಿವೃದ್ಧಿ, ಯುವಕರ ಉದ್ಯೋಗ, ಆರೋಗ್ಯ, "ವಿಕಾಸ್ ಮಾದರಿ"ಗಳಿಗೆ ನೇರವಾಗಿ ಹೋಗಿ. ವಾತಾವರಣವನ್ನು ಕೋಮುವಾದೀಕರಿಸುವುದನ್ನು ನಿಲ್ಲಿಸಿ. ಆರೋಗ್ಯಕರ ರಾಜಕೀಯ ಮತ್ತು ಆರೋಗ್ಯಕರ ಚುನಾವಣೆಗೆ ಹಿಂತಿರುಗಿ. ಜೈ ಹಿಂದ್!," ಎಂದು ಪ್ರಧಾನಿ ನರೇಂದ್ರ ಮೋದಿಯವರ ಕಾಲೆಳೆದಿದ್ದಾರೆ ಶತ್ರುಘ್ನಾ ಸಿನ್ಹಾ.