ಮುಂಬೈನಲ್ಲಿ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಬಂಧನ
ಮುಂಬೈ, ಜೂನ್ 25: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ಪಡೆಯ ಪೊಲೀಸರು ಬಂಧಿಸಿದ್ದಾರೆ. ಶನಿವಾರ ತೀಸ್ತಾ ಅವರ ಮನೆಗೆ ತೆರಳಿ ಅವರನ್ನು ಬಂಧಿಸಿ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಅಮಿತ್ ಶಾ ಸಂದರ್ಶನವೊಂದರಲ್ಲಿ ತೀಸ್ತಾ ಸೆಟಲ್ವಾಡ್ ವಿಚಾರವನ್ನು ಪ್ರಸ್ತಾಪಿಸಿದ್ದರು. 2022ರ ಗುಜರಾತ್ ಗಲಭೆ ವಿಚಾರದಲ್ಲಿ ಅಲ್ಲಿನ ಪೊಲೀಸರಿಗೆ ತೀಸ್ತಾ ಹೇಗೆ ಆಧಾರರಹಿತ ಮಾಹಿತಿ ನೀಡಿದರು ಎಂಬ ವಿಚಾರವನ್ನು ಅವರು ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದರು. ಆ ಸಂದರ್ಶನ ಪ್ರಕಟವಾಗಿ ಕೆಲವೇ ಗಂಟೆಗಳಲ್ಲಿ ತೀಸ್ತಾ ಅವರ ಬಂಧನವಾಗಿದೆ.
2002ರ ಗುಜರಾತ್ ಗಲಭೆ ಸಂಬಂಧ ತೀಸ್ತಾ ಸೆಟಲ್ವಾಡ್ ಅವರ ಎನ್ಜಿಒದಿಂದ ಬಿಜೆಪಿ ಕಾರ್ಯಕರ್ತರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ನೀಡಲಾಗಿತ್ತು. ಇವನ್ನೇ ನಿಜವೆಂದು ಭಾವಿಸಿ ಕ್ರಮ ಕೈಗೊಳ್ಳಲಾಗಿತ್ತು ಎಂದು ಅಮಿತ್ ಶಾ ಈ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2002ರ ಗುಜರಾತ್ ಗಲಭೆಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ಅಂದಿನ ಸರಕಾರ ಮತ್ತು ಪೊಲೀಸ್ ವ್ಯವಸ್ಥೆ ಎಲ್ಲವೂ ಮುಸ್ಲಿಮರ ವಿರುದ್ಧ ಕೋಮುಗಲಭೆಗೆ ಪ್ರಚೋದನೆ ನೀಡಿದರು ಎಂಬುದು ಕೇಳಿಬಂದ ಪ್ರಮುಖ ಆರೋಪ. ಈ ಬಗ್ಗೆ ತನಿಖೆಗಳು ನಡೆದು ಆ ಗಲಭೆಗಳಲ್ಲಿ ಸರಕಾರದ ಪಾತ್ರ ಇಲ್ಲ ಎಂಬ ತೀರ್ಪು ಬಂದಿದೆ. ನಿನ್ನೆ ಶುಕ್ರವಾರ ಕೂಡ ಸುಪ್ರೀಂ ಕೋರ್ಟ್ ನರೇಂದ್ರ ಮೋದಿಗೆ ಕ್ಲೀಟ್ ಕೊಟ್ಟಿದೆ. ಆ ಬೆಳವಣಿಗೆಯಾದ ಬೆನ್ನಲ್ಲೇ ಅಮಿತ್ ಶಾ ಅವರು ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹಲವು ವಿವರಗಳನ್ನು ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)