ಗುಜರಾತ್, ಗೆಲುವು ಯಾರಿಗೆ? ಬಿಜೆಪಿ Vs ಕಾಂಗ್ರೆಸ್: ಒಂದು ಅವಲೋಕನ
ತೊಂಬತ್ತರ ದಶಕದಲ್ಲಿ ತನ್ನ ಭದ್ರಕೋಟೆಯಾಗಿದ್ದ ಗುಜರಾತ್ ನಲ್ಲಿ ಸತತ ನಾಲ್ಕು ಚುನಾವಣೆಯಿಂದ ಸೋಲು ಅನುಭವಿಸಿರುವ ಕಾಂಗ್ರೆಸ್ಸಿಗೆ, ಈ ಬಾರಿಯ ಚುನಾವಣೆ ಗೆಲುವು ತಂದುಕೊಡಬಹುದು ಎನ್ನುವ ಆಶಾಭಾವನೆ ಇಟ್ಟುಕೊಳ್ಳುವಂತಹ ಹಲವು ಬೆಳವಣಿಗೆಗಳು ನಡೆಯುತ್ತಿವೆ.
ಆರು ತಿಂಗಳ ಹಿಂದೆಯಿದ್ದ ಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿ, ಸಮೀಕ್ಷೆಗಳತ್ತ ಒಮ್ಮೆ ಅವಲೋಕಿಸಿದರೆ, ಬಿಜೆಪಿಯ ಜನಪ್ರಿಯತೆ ಕುಗ್ಗುತ್ತಿರುವುದನ್ನು ಅಮಿತ್ ಶಾ ಎಂಡ್ ಪಾರ್ಟಿ ಕೂಡಾ ಅರಿತಿರುವುದರಿಂದಲೇ, ಬಿಜೆಪಿ ಕೂಡಾ ಓವರ್ ಕಾನ್ಫಿಡೆನ್ಸ್ ಆಗಿಲ್ಲ. ಬಿಜೆಪಿಗಿರುವ ಪ್ರಮುಖ ಲಾಭವೆಂದರೆ, ಬೂತ್ ಮಟ್ಟದಲ್ಲಿ ಸಕ್ರಿಯರಾಗಿರುವ ಪಕ್ಷದ ಕಾರ್ಯಕರ್ತರು.
ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?!
ಆದರೆ, ಇತ್ತೀಚಿನ ದಿನಗಳಲ್ಲಿ ವೃತ್ತಿಪರತೆಯಿಂದ ರಾಜಕೀಯ ಮಾಡುತ್ತಿರುವಂತೆ ಕಾಣುತ್ತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ದೇವಸ್ಥಾನಕ್ಕೂ ಹೋಗುತ್ತಿದ್ದಾರೆ.. ತಿಲಕವನ್ನೂ ಇಟ್ಟುಕೊಳ್ಳುತಿದ್ದಾರೆ..ಬಡವರ ಕೇರಿಗೆ ಹೋಗುತ್ತಿದ್ದಾರೆ, ಕ್ಯೂಟ್ ಕ್ಯೂಟ್ ಹೆಣ್ಮಕ್ಕಳ ಜೊತೆ ಸೆಲ್ಫೀನೂ ತೆಗೆದುಕೊಳ್ಳುತ್ತಿದ್ದಾರೆ. ಮತದಾರ, ಇವರಲ್ಲಿ (ರಾಹುಲ್) ರಾಜೀವ್ ಗಾಂಧಿಯನ್ನು ಕಂಡರೂ ಕಾಣಬಹುದು..
ಪತಿದಾರ್ ಸಮುದಾಯದ ಬೇಡಿಕೆಯನ್ನು ಈಡೇರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿರುವುದು ಸದ್ಯದ ಪರಿಸ್ಥಿತಿಯಲ್ಲಿ ಪಕ್ಷಕ್ಕಾಗಿರುವ ಲಾಭ. ಆದರೆ, ಮೊದಲ ಹಂತದ ಚುನಾವಣೆ (ಡಿ 9) ನಡೆಯಲು ಇನ್ನೂ ಹತ್ತುದಿನ ಇರಬೇಕಾದರೆ, ಸಮುದಾಯದ ನಿಯತ್ತು ಬದಲಾದರೂ ಬದಲಾಗಬಹುದು. ಯಾಕೆಂದರೆ, ಶ್ರೀಮಂತ ಅನಿವಾಸಿ ಪಟೇಲ್ ಸಮುದಾಯವದವರು, ಮನೆಮನೆಗೆ ಹೋಗಿ ಬಿಜೆಪಿ ಪರ ಪ್ರಚಾರ ಆರಂಭಿಸಿರುವುದು.
ನನ್ನ ಮೇಲೆ ಕೆಸರು ಎರಚಿದ್ದಕ್ಕೆ ಆಭಾರಿ, ಕಮಲ ಅರಳೋದೆ ಕೆಸರಲ್ಲಿ: ಮೋದಿ
ಕಾರ್ಯಕರ್ತರ ಮಟ್ಟದಲ್ಲಿ ಕಾಂಗ್ರೆಸ್ ನಂಬಿರುವುದು, ಹಾರ್ದಿಕ್ ಪಟೇಲ್, ಜಿಗ್ನೇಶ್ ಮೆವಾನಿ ಮತ್ತು ಅಲ್ಪೇಶ್ ಠಾಕೂರ್ ಎನ್ನುವ ಮೂವರು ಯುವಕರನ್ನು. ಈ ಮೂವರನ್ನು ಬೆಂಬಲಿಸುವ ಯುವಸಮುದಾಯವೂ ಸಾಕಷ್ಟಿದೆ. ಚುನಾವಣೆಯ ವೇಳೆ, ತಾವು ನಂಬಿರುವ ಮತದಾರರನ್ನು ಬೂತಿಗೆ ಕರೆದುಕೊಂಡು ಬರುವಷ್ಟು ಈ ಯುವಕರು ಶಕ್ತವಾಗಿದ್ದಾರೆ. ಆದರೆ, ಕಡೇಗಳಿಗೆಯ ಅಮಿತ್ ಶಾ ತಂತ್ರಗಾರಿಕೆ ಬೇರೆ ಏನಾದರೂ ಇದೆಯಾ, ಗೊತ್ತಿಲ್ಲಾ! ಮುಂದೆ ಓದಿ..
ಸರಕಾರ ರಚಿಸುವಷ್ಟು ಸರಳ ಬಹುಮತ ಬಿಜೆಪಿಗೆ ಸಿಗಬಹುದು
ಈ ಕ್ಷಣದವರೆಗೂ ಸರಕಾರ ರಚಿಸುವಷ್ಟು ಸರಳ ಬಹುಮತ ಬಿಜೆಪಿಗೆ ಸಿಗಬಹುದು ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರವಾದರೂ, ಕಾಂಗ್ರೆಸ್ಸಿಗೆ ಗೆಲುವು ಗಗನ ಕುಸುಮವೇನಲ್ಲ. 'ಗುಜರಾತ್ ಕಾ ಬೇಟಾ, ಪಿಎಂ ಬನ್ಗಯಾ' ಎಂದು ಕಾರ್ಯಕರ್ತರು ಮನೆಮನೆಗೆ ಹೋಗಿ ಪ್ರಚಾರ ಮಾಡುತ್ತಿರುವುದು ಬಿಜೆಪಿಗೆ ಲಾಭವಾದರೂ ಆಗಬಹುದು. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೇನಂದರೆ, ಮೊನ್ನೆ ಪ್ರಧಾನಿ ಭಾಷಣ ಮಾಡುತ್ತಿದ್ದ ಪಕ್ಕದ ರಸ್ತೆಯಲ್ಲೇ, ಕಾಂಗ್ರೆಸ್ ಜಿಂದಾಬಾದ್, ರಾಹುಲ್ ಜಿಂದಾಬಾದ್ ಎಂದು ಪಟೇದಾರ್ ಸಮುದಾಯದ ಬೃಹತ್ ಮೆರವಣಿಗೆ ಸಾಗಿರುವುದು.
ಹಾರ್ಥಿಕ್ ಪಟೇಲ್, ಜಿಗ್ನೇಶ್ ಮೆವಾನಿ ಮತ್ತು ಅಲ್ಪೇಶ್ ಠಾಕೂರ್
ಹಾರ್ದಿಕ್ ಪಟೇಲ್, ಜಿಗ್ನೇಶ್ ಮೆವಾನಿ ಮತ್ತು ಅಲ್ಪೇಶ್ ಠಾಕೂರ್ ಎನ್ನುವ ಮೂವರು ಬಿಜೆಪಿಗೆ ಯಾವಮಟ್ಟಿನ ಬಿಸಿಮುಟ್ಟಿಸಿದ್ದಾರೆಂದರೆ, ಹಿಂದಿಯಲ್ಲೇ ಭಾಷಣ ಮಾಡುತ್ತಿದ್ದ ಪ್ರಧಾನಿಗಳು ಸೋಮವಾರ, ಮಂಗಳವಾರದ (ನ 27,28) ಸಾರ್ವಜನಿಕ ಸಭೆಯಲ್ಲಿ ಗುಜರಾತಿ ಭಾಷೆಯಲ್ಲೂ ಮಾತನಾಡಿದ್ದಾರೆ. ಚಾಯ್ ವಾಲಾ ಎನ್ನುವ ಹೇಳಿಕೆಯನ್ನು ಮತ್ತೆಮತ್ತೆ ಹೇಳಿದ್ದಾರೆ. ಅಭಿವೃದ್ದಿ ಕೆಲಸದ ಜೊತೆ, ಮತದಾರರಿಗೆ ಭಾವನಾತ್ಮಕವಾಗಿ ಟಚ್ ಆಗುವ ಹೇಳಿಕೆಯೂ ಪ್ರಧಾನಿ ಮೋದಿಯವರಿಂದ ಬಂದಿದೆ.
ಗುಜರಾತ್ : ಜಿಗ್ನೇಶ್ ಮೆವಾನಿ ಸ್ವತಂತ್ರ ಸ್ಪರ್ಧೆ, ಕಾಂಗ್ರೆಸ್ ಬೆಂಬಲ
ರಾಹುಲ್ ಗಾಂಧಿ ನೀಡಿದ ಹೇಳಿಕೆ
ಉಗ್ರ ಹಫೀಜ್ ಗೃಹಬಂಧನ ಬಿಡುಗಡೆಯ ವಿಚಾರದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಕಾಂಗ್ರೆಸ್ ಪಕ್ಷದ ಇಮೇಜಿಗೆ ಧಕ್ಕೆ ತಂದಿದೆ. ಬಿಜೆಪಿ ಜೊತೆಗೆ ಪ್ರಧಾನಿ ಮೋದಿ ಈ ವಿಚಾರವನ್ನೂ ಇಟ್ಟುಕೊಂಡು ವಿರೋಧಿಗಳನ್ನು ರುಬ್ಬುತ್ತಿದ್ದಾರೆ. ಜೊತೆಗೆ, ಈ ವಿಚಾರದಲ್ಲಿ ಕೆಲವು ವರ್ಷಗಳ ಹಿಂದೆ ರಾಹುಲ್ ನೀಡಿದ್ದ ಹೇಳಿಕೆಯನ್ನು ಮತ್ತೆ ಬಿಜೆಪಿ ಮುನ್ನಲೆಗೆ ತಂದಿದೆ. ಇದು ಕಾಂಗ್ರೆಸ್ ಪಕ್ಷಕ್ಕಾಗುತ್ತಿರುವ ಹಿನ್ನಡೆ.
ಸಮುದಾಯದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗುವಲ್ಲಿ ವಿಫಲ
ತಾಜಾ ವರದಿಗಳ ಪ್ರಕಾರ, ಹಾರ್ದಿಕ್ ಪಟೇಲ್ ತಮ್ಮ ಸಮುದಾಯದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗುವಲ್ಲಿ ವಿಫಲರಾಗುತ್ತಿದ್ದಾರೆ. ಒಂದು ವೇಳೆ, ಪತಿದಾರ್ ಸಮುದಾಯದ ಮತ ಇಬ್ಭಾಗವಾದರೆ, ಕಾಂಗ್ರೆಸ್ ಬಹುತೇಕ ಓಬಿಸಿ ಮತಬ್ಯಾಂಕ್ ಅನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಆದರೆ, ಸಮುದಾಯದ ಅಲ್ಪೇಶ್ ಠಾಕೂರ್ ಇಡೀ ಓಬಿಸಿ ಮತವನ್ನು ಬಿಜೆಪಿ ವಿರುದ್ದ ನಿಲ್ಲಿಸುವಷ್ಟು ಇನ್ನೂ ಶಕ್ತರಾಗಿಲ್ಲ ಎನ್ನುವುದು ವಾಸ್ತವತೆ.
2001ರ ಸೆನ್ಸಸ್ ಪ್ರಕಾರ ಶೇ. 9.6%ರಷ್ಟು ಮುಸ್ಲಿಮರು
ಕಾಂಗ್ರೆಸ್ಸಿಗೆ ಹಿನ್ನಡೆ ತಂದುಕೊಡಬಹುದಾದ ಇನ್ನೊಂದು ಅಂಶವೇನಂದರೆ ಮುಸ್ಲಿಂ ಮತದಾರರು. 2001ರ ಸೆನ್ಸಸ್ ಪ್ರಕಾರ ಶೇ. 9.6%ರಷ್ಟಿರುವ ಮುಸ್ಲಿಮರನ್ನು ಓಲೈಸುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಲಿಲ್ಲ. ಜೊತೆಗೆ ಈ ಬಾರಿಯ ಚುನಾವಣೆಯಲ್ಲಿ ಕೇವಲ ಆರು ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ರಾಹುಲ್ ತಮ್ಮ ಪ್ರವಾಸದ ವೇಳೆ, ಮುಸ್ಲಿಂ ಪ್ರಾಭಲ್ಯವಿರುವ ಯಾವುದೇ ಕ್ಷೇತ್ರದಲ್ಲಿ ಮತಯಾಚಿಸಲಿಲ್ಲ. ಆದರೆ, ಬಿಜೆಪಿ ಆ ಕೆಲಸಕ್ಕೆ ಈ ಬಾರಿ ಮುಂದಾಗಿದೆ. ತ್ರಿವಳಿ ತಲಾಕ್ ವಿಚಾರದಲ್ಲಿ ಸುಪ್ರೀಂ ತೀರ್ಪಿನ ನಂತರ ಮುಸ್ಲಿಂ ಮಹಿಳೆಯರು ಬಿಜೆಪಿಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ಹಿಂದೂ ಮತವನ್ನು ಓಲೈಸುವ ತಂತ್ರಗಾರಿಕೆ
ರಾಹುಲ್ ಗಾಂಧಿ ತಮ್ಮ ಗುಜರಾತ್ ಯಾತ್ರೆಯ ವೇಳೆ, ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ನಾನು ಶಿವನ ಭಕ್ತ ಎಂದಿದ್ದಾರೆ. ಇದು ಹಿಂದೂ ಮತವನ್ನು ಓಲೈಸುವ ತಂತ್ರಗಾರಿಕೆ ಎಂದೇ ಬಿಂಬಿಸಲಾಗುತ್ತಿದೆ. ಇದು ಒಂದು ಮಟ್ಟಿಗೆ ಕಾಂಗ್ರೆಸ್ಸಿಗೆ ಲಾಭ ತಂದುಕೊಡಬಹುದಾದ ರಾಜಕೀಯ ನಡೆಯೆಂದೇ ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿ, ಕಾಂಗ್ರೆಸ್ ಚುನಾವಣೆ ಗೆಲ್ಲುವ ಸಾಧ್ಯತೆ 55:45
ತಾಜಾ ವರದಿಗಳು, ಗ್ರೌಂಡ್ ರಿಯಾಲಿಟಿ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್ ಗುಜರಾತ್ ಚುನಾವಣೆ ಗೆಲ್ಲುವ ಸಾಧ್ಯತೆ 55:45. ಆದರೆ, ಈಗಾಗಲೇ ಮೇಲೆ ಹೇಳಿದಂತೆ, ಗುಜರಾತ್ ಮೂಲದವರೇ ಆದ ಅಮಿತ್ ಶಾ ಮತ್ತು ಬೂತ್ ಮಟ್ಟದಲ್ಲಿ ಸ್ಟ್ರಾಂಗ್ ಆಗಿರುವ ಬಿಜೆಪಿ ಕಾರ್ಯಕರ್ತರು ಚುನಾವಣೆಯ ನಡೆಯುವ ಒಂದೆರಡು ದಿನದ ಹಿಂದೆ ನಡೆಸುವ ತಂತ್ರಗಾರಿಕೆ ಒಂದೆಡೆ, ಹಾರ್ಥಿಕ್, ಅಲ್ಪೇಶ್ ಮತ್ತು ಜಿಗ್ನೇಶ್ ಬೆಂಬಲಿಗರು ಯಾವ ರೀತಿ ಕೆಲಸ ಮಾಡಲಿದ್ದಾರೆ ಎನ್ನುವುದು ಇನ್ನೊಂದೆಡೆ. ಕೊನೆಯದಾಗಿ ನಿರ್ಣಾಯಕವಾಗುವುದು ಇದೇ...