ಜಿಎಸ್ಟಿ, ಅಪನಗದೀಕರಣ ಮೋದಿಯವರ ಕ್ರಾಂತಿಕಾರಿ ಹೆಜ್ಜೆ: ನಾಯ್ಡು
ಅಗರ್ತಲ, ಮೇ 24: 'ಸರಕು ಮತ್ತು ಸೇವಾ ತೆರಿಗೆ ಹಾಗೂ ಅಪನಗದೀಕರಣ'ದ ನಿರ್ಧಾರ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ಕ್ರಾಂತಿಕಾರಿ ಹೆಜ್ಜೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಣ್ಣಿಸಿದ್ದಾರೆ.
ತ್ರಿಪುರ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ನಾಯ್ಡು ಮಾತನಾಡುತ್ತಿದ್ದರು.
"ದೇಶದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಜಿಎಸ್ಟಿ ಮತ್ತು ಅಪನಗದೀಕರಣವಂತೂ ಅವರ ಕ್ರಾಂತಿಕಾರಿ ಹೆಜ್ಜೆ. ಏಪ್ರಿಲ್ ನಲ್ಲಿ ಜಿಎಸ್ಟಿಯಿಂದ 1.4 ಲಕ್ಷ ಕೋಟಿ ರೂ. ಕಂದಾಯವು ತೆರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗುತ್ತಿರುವುದನ್ನು ಸೂಚಿಸುತ್ತದೆ" ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಈಶಾನ್ಯ ರಾಜ್ಯಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಸ್ತುತ ಸರ್ಕಾರ ಕಂಕಣಬದ್ಧವಾಗಿದೆ. ಈಶಾನ್ಯ ರಾಜ್ಯಗಳು ಇತರ ರಾಜ್ಯ ಮತ್ತು ನೆರೆ ರಾಜ್ಯಗಳೊಂದಿಗೆ ವ್ಯಾವಹಾರಿಕ ಸಂಬಂಧ ಗಳಿಸಲು ಕೇಂದ್ರ ಸರ್ಕಾರ ಸಂಪರ್ಕ ಕಲ್ಪಸುತ್ತಿದೆ ಎಂದು ಮೋದಿ ಸರ್ಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.