ಲಸಿಕೆ ಬಗ್ಗೆ ನಿಮ್ಮ ಅನುಮಾನ ವಿಜ್ಞಾನಿಗಳಿಗೆ ಅವಮಾನ...
ನವದೆಹಲಿ, ಜನವರಿ 15: ಭಾರತದಲ್ಲಿ ಜನವರಿ 16ರಿಂದ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಆದರೆ ಬಳಕೆಗೆ ಅನುಮೋದನೆ ದೊರೆತಿರುವ ಎರಡು ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಈಚೆಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದು, ಮೂರನೇ ಹಂತದ ಪ್ರಯೋಗದಲ್ಲಿರುವ ಲಸಿಕೆಗೆ ಅನುಮತಿ ನೀಡಿದ್ದು ಸರಿಯಿಲ್ಲ ಎಂದು ಕೆಲವರು ಪ್ರಶ್ನಿಸಿದ್ದರು.
ಈ ಬಗ್ಗೆ ಪ್ರಸ್ತಾಪಿಸಿರುವ ವಿಜ್ಞಾನಿ ಹಾಗೂ ವೈದ್ಯರನ್ನೊಳಗೊಂಡ 50 ಮಂದಿಯ ತಜ್ಞರ ತಂಡವು ಲಿಖಿತ ಹೇಳಿಕೆ ನೀಡಿದ್ದು, ರಾಷ್ಟ್ರೀಯ ಔಷಧ ನಿಯಂತ್ರಕದಿಂದ ಅನುಮೋದನೆ ಪಡೆದಿರುವ ಈ ಎರಡು ಲಸಿಕೆಗಳು ಸುರಕ್ಷಿತ. ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದಿದ್ದಾರೆ. ಈ ಲಸಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ವಿಜ್ಞಾನಿಗಳಿಗೆ ಅವಮಾನ ಮಾಡಿದಂತೆ ಎಂದು ದೂರಿದ್ದಾರೆ. ಮುಂದೆ ಓದಿ...
ಲಸಿಕೆಗಳ ಬಗ್ಗೆ ಹುಟ್ಟಿಕೊಂಡ ಅನುಮಾನ
ಈಚೆಗೆ ಕೆಲವರು ಅನುಮೋದನೆ ಪಡೆದಿರುವ ಎರಡು ಲಸಿಕೆಗಳ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಪ್ರಾಯೋಗಿಕ ಹಂತದಲ್ಲಿರುವ ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಈ ತಜ್ಞರ ತಂಡ, "ಭಾರತೀಯ ವೈದ್ಯಕೀಯ ಸಮುದಾಯವನ್ನು ಅವಮಾನಗೊಳಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಬೇಜವಾಬ್ದಾರಿ ಹೇಳಿಕೆ ಇದು" ಎಂದು ದೂಷಿಸಿವೆ.
ಕೊರೊನಾ ಲಸಿಕೆಗಳ ವ್ಯತಿರಿಕ್ತ ಪರಿಣಾಮಕ್ಕೆ ಕಂಪನಿಗಳೇ ಹೊಣೆ
"ನಮ್ಮ ಶ್ರಮ ವ್ಯರ್ಥಗೊಳಿಸಬೇಡಿ"
ಭಾರತದಲ್ಲಿ ಲಸಿಕೆಯ ಸಂಶೋಧನೆಯಲ್ಲಿ ವೈದ್ಯರು, ವಿಜ್ಞಾನಿಗಳು, ವೈದ್ಯಕೀಯ ವೃತ್ತಿಪರರು ತೊಡಗಿಕೊಂಡಿದ್ದೇವೆ. ನಮ್ಮ ಅವಿರತ ಶ್ರಮದಿಂದಾಗಿ ಇಡೀ ವಿಶ್ವಕ್ಕೆ ಲಸಿಕೆಗಳನ್ನು ಪೂರೈಸುವ ಜಾಗತಿಕ ನಾಯಕನಂತೆ ಭಾರತ ಮುನ್ನಡೆ ಸಾಧಿಸಿದೆ. 188 ದೇಶಗಳಿಗೆ ಲಸಿಕೆಗಳನ್ನು ಪೂರೈಸಲಾಗುತ್ತಿದೆ. ಆದರೆ ಲಸಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಮ್ಮ ಶ್ರಮವನ್ನು ವ್ಯರ್ಥಗೊಳಿಸಬೇಡಿ ಎಂದು ಪತ್ರದಲ್ಲಿ ಕೇಳಿದ್ದಾರೆ.
ದೇಶದ ಸಮಗ್ರತೆ ಮೇಲೆ ಪರಿಣಾಮ
ಲಸಿಕೆಗಳ ಬಗ್ಗೆ ಈ ರೀತಿ ಹೇಳಿಕೆ ನೀಡುತ್ತಿರುವುದು ಭಾರತೀಯ ವಿಜ್ಞಾನಿಗಳಿಗೆ ಮಾಡುತ್ತಿರುವ ಅವಮಾನ. ಈ ಲಸಿಕೆಗಳ ಕುರಿತು ರಾಜಕೀಯ ಹೇಳಿಕೆ ನೀಡುತ್ತಿರುವುದು ದೇಶದ ಸಮಗ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿಕೊಂಡಿದ್ದಾರೆ.
ವಿಜ್ಞಾನಿಗಳ ವಿಶ್ವಾಸಾರ್ಹತೆಗೆ ಧಕ್ಕೆ
ಇಡೀ ವಿಶ್ವಕ್ಕೆ ಲಸಿಕೆ ಪೂರೈಸುವಂತೆ ಭಾರತವನ್ನು ಮುನ್ನಡೆಗೆ ತರುವಲ್ಲಿ ವೈದ್ಯರು, ತಜ್ಞರು, ವಿಜ್ಞಾನಿಗಳು ಜೀವವನ್ನೇ ಮುಡಿಪಾಗಿಟ್ಟಿದ್ದಾರೆ. ಆದರೆ ಈ ಹೇಳಿಕೆಗಳು ಭಾರತೀಯ ವಿಜ್ಞಾನಿಗಳ ಸಮುದಾಯದಲ್ಲಿ ವಿಶ್ವಾಸಾರ್ಹತೆಯನ್ನು ತಗ್ಗಿಸುತ್ತದೆ ಎಂದು ದೂರಿದ್ದಾರೆ.
ಭಾರತದಲ್ಲಿ ಸದ್ಯಕ್ಕೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ/ ಸೆರಂ ಇನ್ ಸ್ಟಿಟ್ಯೂಟ್ ನ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ದೊರೆತಿದ್ದು, ಜನವರಿ 16ರಿಂದ ಲಸಿಕೆಯ ಕಾರ್ಯಕ್ರಮ ಭಾರತದಾದ್ಯಂತ ಆರಂಭಗೊಳ್ಳಲಿದೆ.