ಸಾಲ ಶೂರ, ಕನ್ನಡದ ಜಾಕಿ ಮಲ್ಯ ವಿರುದ್ಧ ಯುವಿಗೆ ಪತ್ರ
ಮುಂಬೈ, ಫೆ.14: ಇತ್ತ ಸಾವಿರಾರು ಕೋಟಿ ರೂ ಸಾಲ ಉಳಿಸಿಕೊಂಡು ಮಾನ ಹರಾಜು ಆಗುತ್ತಿದ್ದರೂ IPL ಹರಾಜಿನಲ್ಲಿ ಭಾಗವಹಿಸಿದ್ದ 'ಕನ್ನಡದ ಜಾಕಿ' ವಿಜಯ್ ಮಲ್ಯ ವಿರುದ್ಧ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಯ ಉದ್ಯೋಗಿಗಳು ಕ್ರಿಕೆಟ್ಟಿಗ ಯುವರಾಜ ಸಿಂಗ್ ಅವರಿಗೆ ಒಲುಮೆಯ ಓಲೆ ಬರೆದಿದ್ದಾರೆ.
SOS ಪತ್ರ ಬರೆದಿರುವ Kingfisher Airlines (KFA) ಸಂಸ್ಥೆಯ ನೌಕರರು ಇತ್ತ ಸಾಲಗಳ ಮೇಲೆ ಸಾಲ ಮಾಡಿ ತಮ್ಮನ್ನು ಅಕ್ಷರಶಃ ಬೀದಿಗೆ ತಳ್ಳಿರುವ ವಿಜಯ್ ಮಲ್ಯ ಅಲ್ಲಿ ಕ್ರಿಕೆಟ್ಟು ಅದೂ ಇದೂ ಅಂತ ಮೋಜಿನಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ IPL ಹರಾಜಿನಲ್ಲಿ ನಿಮ್ಮನ್ನು 14 ಕೋಟಿ ರೂ ಗೆ ಖರೀದಿಸಿರುವುದನ್ನು ನೀವು ಒಪ್ಪಬೇಡಿ ಎಂದು ಆಗ್ರಹಿಸಿ Kingfisher Employees Union ಯುವರಾಜ್ ಸಿಂಗ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಬಾಕಿಯಿರುವ ನಮ್ಮ ಸಂಬಳಗಳನ್ನು ಕೊಡಿ ಎಂದು ವಿಜಯ್ ಮಲ್ಯ ಅವರನ್ನು ಕೇಳಿದಾಗಲೆಲ್ಲಾ ಇದುವರೆಗೂ ಅವರು ಸಬೂಬು ಹೇಳುತ್ತಾ ಬಂದಿದ್ದಾರೆ. ಆದರೆ ಇದೀಗ ಕ್ರಿಕೆಟ್ಟಿಗಾಗಿ ಕೋಟ್ಯಂತರ ರೂ ಸುರಿಯುತ್ತಿದ್ದಾರೆ. ನಮ್ಮ ಪರಿಸ್ಥಿತಿ ನಿಮ್ಮ ಗಮನಕ್ಕೂ ಬಂದಿರುತ್ತದೆ ಎಂದು ಆಶಿಸುತ್ತೇವೆ. ಹಾಗಾಗಿ ನೀವು ಮಲ್ಯ ಅಫರ್ ಅನ್ನು ತಿರಸ್ಕರಿಸಬೇಕು. ನಾವೂ ನಿಮ್ಮ ಅಭಿಮಾನಿಗಳೇ. ನೀವು ಈ ಅಫರ್ ಅನ್ನು ಒಪ್ಪಿದ್ದೇ ಆದರೆ ನಮಗೆ ನೀವು ಮೋಸ ಮಾಡಿದಂತಾಗುತ್ತದೆ.
ಯುವರಾಜ್ ಸಿಂಗ್ ಅವರು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕು. ಯುವರಾಜ್ ಸಿಂಗ್, ಕ್ಯಾನ್ಸರಿನಿಂದ ಬಳಲುತ್ತಿದ್ದಾಗ ನಾವು KFA ಉದ್ಯೋಗಿಗಳು ಅವರ ಕ್ಷೇಮ ಬಯಸಿ ಪ್ರಾರ್ಥಿಸಿದ್ದೆವು. ಅದನ್ನೆಲ್ಲಾ ನೀವು ಮರೆಯಬಾರದು. ಹಾಗಾಗಿ ಈಗಲೂ ಕಾಲ ಮಿಂಚಿಲ್ಲ. ತಕ್ಷಣ ಮಲ್ಯರ ಅಫರ್ ಅನ್ನು ತಿರಸ್ಕರಿಸಿ ಎಂದು KFA ಉದ್ಯೋಗಿಗಳು ಆಗ್ರಹಿಸಿದ್ದಾರೆ.
KFA ಉದ್ಯೋಗಿಗಳ ಈ ಪತ್ರಾಗ್ರಹಕ್ಕೆ ಯುವರಾಜ್ ಸಿಂಗ್ ಪ್ರತಿಸ್ಪಂದಿಸುತ್ತಾರಾ? ಕಾದುನೋಡಬೇಕು.