Explained: ಸಂಸದರು, ಶಾಸಕರ ವಿರುದ್ಧ ಕೇಸ್ ಹಿಂಪಡೆಯುವ ವಿಧಾನ ಹೇಗೆ?
ನವದೆಹಲಿ, ಆಗಸ್ಟ್ 25: ಸಂಸದರು ಹಾಗೂ ಶಾಸಕರು ಸೇರಿದಂತೆ ಯಾವುದೇ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳುವುದಕ್ಕೂ ಮೊದಲು ಸರ್ಕಾರಗಳು ಆಯಾ ಹೈಕೋರ್ಟ್ನಿಂದ ಅನುಮೋದನೆ ಪಡೆದುಕೊಂಡಿರಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ದುರುದ್ದೇಶಪೂರಿತವಾಗಿ ದಾಖಲಿಸುವ ಪ್ರಕರಣಗಳು ಮತ್ತು ಕಾನೂನು ಕ್ರಮಗಳನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ಇದು ವಿರುದ್ಧವಾಗಿಲ್ಲ. ಆದರೆ ಕ್ರಿಮಿನಲ್ ಪ್ರಕರಣ ಹಿಂಪಡೆಯುವುದಕ್ಕೂ ಮೊದಲು ಉಚ್ಛ ನ್ಯಾಯಾಲಯದಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಒತ್ತಿ ಹೇಳಿದೆ.
Explained: ಭಾರತದಲ್ಲಿ ಕೇಂದ್ರ ಸಂಪುಟ ಸಚಿವರ ಬಂಧನಕ್ಕೆ ನಿಯಮಗಳೇನು?
ಬುಧವಾರ ಸುಪ್ರೀಂಕೋರ್ಟ್ ನ್ಯಾ. ಎನ್ ವಿ ರಮಣ ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಿತು. "ನಾವು ದುರುದ್ದೇಶದಿಂದ ಕೂಡಿದ ಪ್ರಕರಣ ಹಿಂತೆಗೆದುಕೊಳ್ಳುವುದಕ್ಕೆ ವಿರೋಧಿಸುವುದಿಲ್ಲ. ಆದರೆ ಇದನ್ನು ಹೈಕೋರ್ಟ್ನಲ್ಲಿ ನ್ಯಾಯಾಂಗ ಅಧಿಕಾರಿ ಪರಿಶೀಲಿಸಬೇಕು. ಒಂದು ವೇಳೆ ಹೈಕೋರ್ಟ್ ಒಪ್ಪಿದರೆ ಪ್ರಕರಣಗಳನ್ನು ಹಿಂಪಡೆಯಬಹುದು," ಎಂದು ಕೋರ್ಟ್ ಉಲ್ಲೇಖಿಸಿದೆ.
ತ್ವರಿತ ವಿಚಾರಣೆಗೆ ಕೋರಿ 2016ರಲ್ಲೇ ಅರ್ಜಿ ಸಲ್ಲಿಕೆ
ಹಿರಿಯ ವಕೀಲ ವಿಜಯ್ ಹನ್ಸಾರಿಯಾ, ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಕಳೆದ 2016ರಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಹಾಲಿ ಮತ್ತು ಮಾಜಿ ಸಂಸದರು/ಶಾಸಕರ ವಿರುದ್ಧ ಕ್ರಿಮಿನಲ್ ವಿಚಾರಣೆಯನ್ನು ತ್ವರಿತವಾಗಿ ನಡೆಸಲು ನಿರ್ದೇಶನ ನೀಡಬೇಕೆಂದು ಕೋರಿ ಉನ್ನತ ನ್ಯಾಯಾಲಯದಲ್ಲಿ ವರದಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಅವರಿಗೆ ವಕೀಲರಾದ ಸ್ನೇಹಾ ಕಲಿತಾ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕಳೆದ 2013ರ ಮುಜಾಫರ್ ನಗರ ಗಲಭೆಗೆ ಸಂಬಂಧಿಸಿದಂತೆ ಒಟ್ಟು 510 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಮೀರತ್ ವ್ಯಾಪ್ತಿಯ 5 ಜಿಲ್ಲೆಗಳಲ್ಲಿ 6,869 ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿಕೊಂಡಿರುವ ಬಗ್ಗೆ ರಾಜ್ಯ ಸರ್ಕಾರವು ಅಮಿಕಸ್ಗೆ ತಿಳಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇವುಗಳ ಪೈಕಿ 175 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. 165 ಪ್ರಕರಣಗಳಲ್ಲಿ ಅಂತಿಮ ವರದಿಗಳನ್ನು ಸಲ್ಲಿಸಲಾಗಿದ್ದು, 170 ಪ್ರಕರಣಗಳನ್ನು ವಜಾ ಮಾಡಲಾಗಿದೆ.
ರಾಜ್ಯ ಸರ್ಕಾರದಿಂದ 77 ಪ್ರಕರಣ ವಾಪಸ್
ಉತ್ತರ ಪ್ರದೇಶ ಸರ್ಕಾರವು ಸಿಆರ್ಪಿಸಿ ಸೆಕ್ಷನ್ 321 ರ ಅಡಿಯಲ್ಲಿ 77 ಪ್ರಕರಣಗಳನ್ನು ಹಿಂಪಡೆದಿದೆ. ಸಿಆರ್ಪಿಸಿ ಸೆಕ್ಷನ್ 321 ರ ಅಡಿಯಲ್ಲಿ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರದ ಆದೇಶ ಅಥವಾ ಯಾವುದೇ ಕಾರಣ ನೀಡಲಾಗಿರುವುದಿಲ್ಲ. ಆಡಳಿತದ ಬಗ್ಗೆ ಸಂಪೂರ್ಣವಾಗಿ ಪರಿಗಣಿಸಿದ ನಂತರವೇ ನಿರ್ದಿಷ್ಟ ಪ್ರಕರಣ ಹಿಂತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೇರಳ ರಾಜ್ಯ ಮತ್ತು ಕೆ. ಅಜಿತ್ 2021ರ ನಡುವಿನ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ಹೊಸ ಕಾನೂನು ರೂಪಿಸಿದೆ. ಅದರ ಪ್ರಕಾರ 77 ಪ್ರಕರಣಗಳನ್ನು ಸಿಆರ್ಪಿಸಿ ಸೆಕ್ಷನ್ 401ರ ಅಡಿಯಲ್ಲಿ ಪರಿಷ್ಕರಣೆ ಅಧಿಕಾರ ವ್ಯಾಪ್ತಿಯನ್ನು ಹೈಕೋರ್ಟ್ ಪರಿಶೀಲಿಸಬಹುದು ಎಂದು ಅಮಿಕಸ್ ವರದಿ ಸಲ್ಲಿಸಿದೆ.
ಹೈಕೋರ್ಟ್ನಲ್ಲಿ ಪ್ರಕರಣಗಳ ತ್ವರಿತ ವಿಚಾರಣೆ ಬಗ್ಗೆ ವಾದ
ಪ್ರತಿಯೊಂದು ಪ್ರಕರಣವು ತಾರ್ಕಿಕ ಆದೇಶವನ್ನು ಹೊಂದಿರಬಹುದು ಎಂದು ಹನ್ಸರಿಯಾ ಪ್ರತಿಪಾದಿಸಿದರು. ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ ಎಂದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು ಹೈಕೋರ್ಟ್ಗೆ ಹೋಗುವಂತೆ ಸೂಚಿಸಿದರು. ಸೆಕ್ಷನ್ 309 ಸಿಆರ್ಪಿಸಿ ಅಡಿ ಬಾಕಿ ಉಳಿದಿರುವ ಎಲ್ಲ ಪ್ರಕರಣಗಳ ತ್ವರಿತ ವಿಚಾರಣೆ ನಡೆಸುವಂತೆ ಹೈಕೋರ್ಟ್ಗೆ ನಿರ್ದೇಶಿಸಬಹುದು ಎಂದು ಹನ್ಸರಿಯಾ ವಾದಿಸಿದ್ದಾರೆ.
ನ್ಯಾಯಾಂಗ ವ್ಯವಸ್ಥೆ ಹಾಗೂ ಸಿಬಿಐ ಅಥವಾ ಇಡಿಯಂತಹ ತನಿಖಾ ಸಂಸ್ಥೆಗಳು ವಿಚಾರಣೆ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಸಮಾನಾಂತರವಾಗಿರುತ್ತವೆ. ನಮ್ಮಂತೆ ತನಿಖಾ ಸಂಸ್ಥೆಗಳು ಮಾನವ ಸಂಪನ್ಮೂಲ, ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ. "ನಾವು ಈ ಏಜೆನ್ಸಿಗಳ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ, ಏಕೆಂದರೆ ನಾವು ಅವರನ್ನು ನಿರುತ್ಸಾಹಗೊಳಿಸಲು ಬಯಸುವುದಿಲ್ಲ, ನ್ಯಾಯಾಧೀಶರಂತೆಯೇ ಅವರಿಗೂ ಹೆಚ್ಚಿನ ಹೊರೆಯಾಗಿದೆ," ಎಂದು ಪೀಠ ಹೇಳಿದೆ.
ಶಾಸಕರು, ಸಂಸದರ ವಿಷಯ ಚರ್ಚೆ ನಡೆಯುತ್ತಿರುವುದೇಕೆ?
ದೇಶದಲ್ಲಿ ಇದೀಗ ಸಂಸದರು ಮತ್ತು ಶಾಸಕರ ವಿರುದ್ಧ ಪ್ರಕರಣ ದಾಖಲಿಸುವುದು ಹಾಗೂ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಚರ್ಚೆ ಹಾಗೂ ಸಂಸದರ ಬಂಧನದ ನಿಯಮಗಳ ಬಗ್ಗೆ ಉಲ್ಲೇಖಿಸಲು ಕಾರಣವಾಗಿರುವುದೇ ಕೇಂದ್ರ ಸಂಪುಟ ಸಚಿವ ನಾರಾಯಣ್ ರಾಣೆ. ಕಳೆದ ಸೋಮವಾರ ರಾಯಗಢದಲ್ಲಿ ಜನಾಶೀರ್ವಾದ ಯಾತ್ರೆ ನಡೆಸಿದ ಕೇಂದ್ರ ಸಚಿವ ನಾರಾಯಣ್ ರಾಣೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಆಗಸ್ಟ್ 15ರಂದು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿರುವ ಅವರಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದ ಬಗ್ಗೆ ಮಾಹಿತಿಯಿಲ್ಲ, ಪಕ್ಕದವರನ್ನು ಕೇಳಿ ಹೇಳುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷ ಗೊತ್ತಿಲ್ಲದ ಸಿಎಂ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಶಿವಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವರನ್ನು ಬಂಧಿಸುವಂತೆ ಆಗ್ರಹಿಸಿತ್ತು.